- Home
- Entertainment
- Sandalwood
- ಗಣೇಶ್ ಸರ್ ನನ್ನ ಕ್ರಷ್, ಮದ್ವೆಯಾದಾಗ ತುಂಬಾ ನೊಂದುಕೊಂಡಿದ್ದೆ ಎಂದು ಪತ್ನಿ ಎದುರೇ ಹೇಳಿದ Amruthadhaare ಅಪ್ಪಿ
ಗಣೇಶ್ ಸರ್ ನನ್ನ ಕ್ರಷ್, ಮದ್ವೆಯಾದಾಗ ತುಂಬಾ ನೊಂದುಕೊಂಡಿದ್ದೆ ಎಂದು ಪತ್ನಿ ಎದುರೇ ಹೇಳಿದ Amruthadhaare ಅಪ್ಪಿ
ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ನಿರ್ಮಾಣದ 'ಪಿಚ್ಚರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಾಯಕಿ ಅಮೃತಾ, ತಮಗೆ ಗಣೇಶ್ ಮೇಲೆ ಕ್ರಶ್ ಇತ್ತು ಹಾಗೂ ಅವರ ಮದುವೆಯಾದಾಗ ಬೇಸರವಾಗಿತ್ತು ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ಶಿಲ್ಪಾ ಗಣೇಶ್ ಮೂವಿ
ನಿರ್ಮಾಪಕಿಯಾಗಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಅವರು ಇದೀಗ ಹೊಸ ಸಿನಿಮಾ ಸಿದ್ಧಪಡಿಸಿದ್ದು, ಅದು ಜುಲೈ 24 ರಂದು ಬಿಡುಗಡೆಯಾಗಲಿದೆ. ಚಿತ್ರದ ಹೆಸರು ಪಿಚ್ಚರ್ (Pichchar Kannada Movie) ಎಂದು.
ನಟಿ ಅಮೃತಾ ಮಾತು
ಸಂದೀಪ್ ಬೆದ್ರ ಅವರ ನಿರ್ದೇಶನದ ಪಿಚ್ಚರ್ ಸಿನಿಮಾದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ್ ಅವರು ಅಭಿನಯ ಮಾಡಿದ್ದಾರೆ. ಅಮೃತಧಾರೆಯಲ್ಲಿ ಭೂಮಿಕಾ ತಂಗಿ ಅಪ್ಪಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಮೃತಾ ಸುದು ಇದರ ನಾಯಕಿ ಆಗಿದ್ದಾರೆ. ಈ ಸಿನಿಮಾದ ಪ್ರಮೋಷನ್ ಸಮಯದಲ್ಲಿ ಗಣೇಶ್ ಮತ್ತು ಶಿಲ್ಪಾ ದಂಪತಿ ವೇದಿಕೆ ಮೇಲೆ ಇದ್ದರು. ಆಗ ನಾಯಕಿ ಅಮೃತಾ ಅವರು ಈ ಚಿತ್ರದಲ್ಲಿ ತಮಗೆ ಅವಕಾಶ ಸಿಕ್ಕಿರುವುದಕ್ಕೆ ಗಣೇಶ್ ಅವರಿಗೆ ಧನ್ಯವಾದ ಸಲ್ಲಿಸುತ್ತಲೇ ತಮಾಷೆಯ ಸನ್ನಿವೇಶವೊಂದನ್ನು ರಚಿಸಿದರು.
ಮದ್ವೆಯಾದಾಗ ಬೇಜಾರಾಗಿತ್ತು
ನಾನು ಗಣೇಶ್ ಅವರ ಸಿಕ್ಕಾಪಟ್ಟೆ ಫ್ಯಾನ್. ಶಾಲೆಗೆ ಹೋಗುವಾಗ ಗಣೇಶ್ ಅವರು ನನಗೆ ತುಂಬಾ ಇಷ್ಟ ಆಗುತ್ತಿದ್ದರು. ಈಗಲೂ ಅವರು ನನ್ನ ಕ್ರಶ್. ಗಣೇಶ್ ಮತ್ತು ಶಿಲ್ಪಾ ಅವರ ಮದುವೆಯ ಸಂದರ್ಭದಲ್ಲಿ ನಾನು ಶಾಲೆಗೆ ಹೋಗುತ್ತಿದ್ದೆ. ಗಣೇಶ್ ಅವರು ಮದುವೆಯಾಗುತ್ತಿದ್ದಾರೆ ಎನ್ನುವ ವಿಷಯ ಕೇಳಿ ತುಂಬಾ ಬೇಜಾರಾಗಿತ್ತು. ಇವರು ಯಾಕೆ ಮದುವೆ ಆದರು ಅನಿಸ್ತಾ ಇತ್ತು ಎಂದು ಹೇಳಿದರು.
ಏನೀ ಸಿನಿಮಾ ಸ್ಟೋರಿ?
ಅದಕ್ಕೆ ಗಣೇಶ್ ಅವರು, ಅಲ್ಲಾ ರೀ, ನೀವು ಮೊದಲೇ ಹೇಳೋದಲ್ವೇ? ಸಿನಿಮಾ ಮುಗಿದ್ಮೇಲೆ ಹೇಳ್ತಾ ಇದ್ದೀರಾ? ಅಂತಲೇ ತಮಾಷೆ ಮಾಡಿದರು. ಆದರೆ ಶಿಲ್ಪಾ ಅವರು ಮಾತ್ರ ಏನೂ ಹೇಳದೇ ಸುಮ್ಮನೇ ಕುಳಿತಿದ್ದರು. ಇನ್ನು ಸಿನಿಮಾದ ವಿಷಯಕ್ಕೆ ಬರುವುದಾದರೆ, ಕನ್ನಡ ಮತ್ತು ತುಳು ಭಾಷೆಯಲ್ಲಿ ಇದು ಬರ್ತಿದೆ. ಶಿಲ್ಪಾ ಗಣೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಗೋಕುಲದ ರಾಧೆ ಅನ್ನುವ ಹಾಡನ್ನು ಕೂಡ ಹಾಡಿದ್ದಾರೆ.
ಅವಿಭಕ್ತ ಕುಟುಂಬದ ಕಥೆ
ಈ ಸಿನಿಮಾದ ಬಗ್ಗೆ ಮಾತನಾಡಿರುವ ಗಣೇಶ್, ಮೊದಲ ಬಾರಿಗೆ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಚಿತ್ರವನ್ನು ಪ್ರತಿನಿಧಿಸಲು ಇಲ್ಲಿಗೆ ಬಂದಿದ್ದೇನೆ. ಈ ಸಿನಿಮಾದಲ್ಲಿ ಒಂದೊಳ್ಳೆ ಕಥೆ ಇದೆ. ಇದು ಅವಿಭಕ್ತ ಕುಟುಂಬದ ಕಥೆ. ನೀವು ಅಂದುಕೊಂಡಂತೆ ಸಿನಿಮಾದಲ್ಲಿ ಎಲ್ಲ ತರಹದ ಕಾಮಿಡಿ, ಸೆಂಟಿಮೆಂಟ್ ಇದೆ. ನನಗೆ ಫ್ಯಾಮಿಲಿ ಆಡಿಯನ್ಸ್ ಹೆಚ್ಚಾಗಿರುವುದರಿಂದ ನಾನು ಕೌಟುಂಬಿಕ ಚಿತ್ರಗಳಿಗೆ ಹೆಚ್ಚು ಒತ್ತು ಕೊಡುತ್ತೇನೆ ಎಂದರು.
ಕಾಶ್ಮೀರದಲ್ಲಿ ಶೂಟಿಂಗ್
ಮಂಗಳೂರಿನ ಹೆಸರಾಂತ ಕಲಾವಿದರಾದ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ನವೀನ್ ಪಡೀಲ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂದು ಗಣೇಶ್ ಮಾಹಿತಿ ನೀಡಿದರು. ಈ ಸಿನಿಮಾಗೆ ಉತ್ತಮಮಟ್ಟದಲ್ಲೇ ಬಜೆಟ್ ಹಾಕಿದ್ದು ಅಂದುಕೊಂಡಿದ್ದಕ್ಕಿಂತ ತುಸು ಹೆಚ್ಚಾಗಿದೆ ಎಂದು ಶಿಲ್ಪಾ ಹೇಳಿದರು. ಇಲ್ಲಿಯವರೆಗೂ ತುಳು ಸಿನಿಮಾದ ಚಿತ್ರೀಕರಣ ಕಾಶ್ಮೀರದಲ್ಲಿ ಆಗಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಸಿನಿಮಾದ ಹಾಡೊಂದರ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

