ರೇಣುಕಾಸ್ವಾಮಿ ಕೇಸ್: ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ ಮೂವರು ದರ್ಶನ್ ಅಭಿಮಾನಿಗಳು ಅರೆಸ್ಟ್!
ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ದರ್ಶನ್ ಅವರ ಮೂವರು ಅಭಿಮಾನಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಅಭಿಮಾನಿಗಳ ಈ ಕೃತ್ಯವು ಈಗಾಗಲೇ ಸಂಕಷ್ಟದಲ್ಲಿರುವ ದರ್ಶನ್ಗೆ ಮತ್ತಷ್ಟು ಕಾನೂನು ತೊಡಕುಗಳನ್ನು ಸೃಷ್ಟಿಸಿದೆ.

ರೇಣುಕಾಸ್ವಾಮಿ ಕೊಲೆ ಕೇಸಿಗೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ್ ಅಂಡ್ ಗ್ಯಾಂಗ್ ಜೈಲಿನಲ್ಲಿ ಮುದ್ದೆ ಮುರಿಯುತ್ತಿದೆ. ಆದರೆ, ಕೊಲೆ ಕೇಸಿನಲ್ಲಿ ಭಾಗಿಯಾಗಿದ್ದ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿಯೂ ಆಗಿರುವ ಸಂದೀಪ್ ಎನ್ನುವವರನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲಿಯೇ ಕಾಪಾಕ್ಷಿಪಾಳ್ಯ ಠಾಣೆ ಪೊಲೀಸರು ಸಾಕ್ಷಿಗೆ ಬೆದರಿಕೆ ಹಾಕಿದ ಮೂವರು ದರ್ಶನ್ ಅಭಿಮಾನಿಗಳನ್ನು ಬಂಧಿಸಿದ್ದಾರೆ.
ಪ್ರಕರಣ ಗಂಭೀರವಾಗಿ ತೆಗೆದುಕೊಂಡ ಸರ್ಕಾರ
ದೇಶದಲ್ಲೇ ಅತಿಹೆಚ್ಚು ಸದ್ದು ಮಾಡಿದ ಕೊಲೆ ಕೇಸುಗಳಲ್ಲಿ ಒಂದಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗೆ ಬೆದರಿಕೆ ಹಾಕಿದ ಪ್ರಕರಣ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮತ್ತಷ್ಟು ಗಂಭೀರವಾಗಿ ತೆಗೆದುಕೊಂಡ ಸರ್ಕಾರ ಸಾಕ್ಷಿಗೆ ಬೆದರಿಕೆ ಹಾಕಿದ್ದ ಸುಹಾಸ್, ವೇಣು ಮತ್ತು ಪುನೀತ್ ಅವರ ಮೇಲೆ ಎಫ್ಐಆರ್ ದಾಖಲಿಸಿತ್ತು.
ಬಂಧಿತ ಆರೋಪಿಗಳ ಹಿನ್ನೆಲೆಯೇನು?
ನಂತರ ತನಿಖೆಗಿಳಿದ ಕಾಮಾಕ್ಷಿಪಾಳ್ಯ ಪೊಲೀಸರು ಬೆದರಿಕೆ ಹಾಕಿದವರ ಹಿನ್ನೆಲೆಯನ್ನು ಪತ್ತೆ ಮಾಡಿದಾಗ ಪುನೀತ್ ಎನ್ನುವವನು ಸಾಮಾಜಿಕ ಜಾಲತಾಣದಲ್ಲಿ ಡಿ-ಕಂಪನಿ ಎನ್ನುವ ಖಾತೆಯನ್ನು ಹ್ಯಾಂಡಲ್ ಮಾಡುತ್ತಿದ್ದನು. ಉಳಿದಂತೆ ಸುಹಾಸ್ ಮತ್ತು ವೇಣು ಎನ್ನುವ ಇಬ್ಬರು ತುಮಕೂರಿನ ದರ್ಶನ್ ಅಭಿಮಾನಿಗಳ ಸಂಘದ ಪ್ರಮುಖರಾಗಿದ್ದಾರೆ.
ಅಭಿಮಾನಿಗಳ ಹುಚ್ಚಾಟಕ್ಕೆ ದಾಸನಿಗೆ ಶಿಕ್ಷೆ
ಇತ್ತ ದರ್ಶನ್ಗೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಶಿಕ್ಷೆಯ ಉರುಳು ಬಿಗಿಯಾಗುತ್ತಿದ್ದು, ಜಾಮೀನು ಕೋರಿಕೆ, ಶೀಘ್ರ ವಿಚಾರಣೆ ಸೇರಿದಂತೆ ಯಾವುದೇ ಮನವಿಗಳೂ ಕೂಡ ಕೋರ್ಟ್ನಲ್ಲಿ ಫಲಿಸುತ್ತಿಲ್ಲ. ಹೀಗಾಗಿ, ದರ್ಶನ್ ಅಭಿಮಾನಿಗಳು ತಮ್ಮ ಹೀರೋನನ್ನು ಕೊಲೆ ಕೇಸಿನಿಂದ ಕಾಪಾಡುವುದಕ್ಕೆ ಸಾಕ್ಷಿಗಳನ್ನು ಹುಡುಕಿ ಜೀವ ಬೆದರಿಕೆ ಹಾಕುವುದಕ್ಕೆ ಮುಂದಾಗಿದ್ದಾರೆ. ಇದು ನಟ ದರ್ಶನ್ಗೆ ಮತ್ತಷ್ಟು ಬಿಗಿ ಉರುಳು ಆಗುತ್ತಿದೆ.
ಆರೋಪಿಗಳ ಬೆದರಿಕೆ ಪ್ರಹಸನ ಹೇಗಿತ್ತು?
ದರ್ಶನ್ ಅಭಿಮಾನಿಗಳಾದ ಪುನೀತ್, ಸುಹಾಸ್ ಮತ್ತು ವೇಣು ಮೂವರೂ ಸೇರಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಂದೀಪ್ನಲ್ಲಿ ಮಾತುಕತೆ ಮಾಡುವ ನೆಪದಲ್ಲಿ ಕರೆಸಿಕೊಂಡಿದ್ದಾರೆ. ಸ್ವತಃ ಸುಹಾಸ್ ಹೋಗಿ ಸಂದೀಪ್ನನ್ನು ಕರೆದುಕೊಂಡು ಬಂದು ಕಾರಿನಲ್ಲಿ ಕೂರಿಸಿದ್ದಾನೆ. ನಂತರ ಮೂವರೂ ಸೇರಿ ದರ್ಶನ್ ವಿರುದ್ಧ ಯಾವುದೇ ಸಾಕ್ಷಿಯನ್ನೂ ಹೇಳದಂತೆ ತಾಕೀತು ಮಾಡಿದ್ದಾರೆ. ಆದರೆ, ಹೈಪ್ರೊಫೈಲ್ ಕೇಸ್ ಆಗಿದ್ದರಿಂದ ಅವರ ಮಾತಿಗೆ ಸಂದೀಪ್ ನಿರಾಕರಿಸಿದ್ದಾನೆ. ಆಗ ಸಂದೀಪ್ಗೆ ಜೀವ ಬೆದರಿಕೆ ಹಾಕಲಾಗಿದೆ. ಇದೀಗ ಪೊಲೀಸರು ಮೂವರನ್ನೂ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

