ಯಜುವೇಂದ್ರ ಚಾಹಲ್ ಹೇಳಿಕೆ ಬಳಿಕ ಆಧ್ಯಾತ್ಮದ ಕಡೆ ವಾಲಿದ ಧನಶ್ರೀ ವರ್ಮಾ
ಯಜುವೇಂದ್ರ ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಕೆಲವೇ ದಿನಗಳಲ್ಲಿ ಧನಶ್ರೀ ವರ್ಮಾ ಸದ್ದಿಲ್ಲದೆ ಪ್ರತಿಕ್ರಿಯಿಸಿದ್ದಾರೆ. ಪದಗಳಿಂದಲ್ಲ, ಬದಲಾಗಿ ಹೃದಯಸ್ಪರ್ಶಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ.

ಒಂಟಿ ಜೀವನವನ್ನು ಆನಂದಿಸುತ್ತಿರುವ ಧನಶ್ರೀ
ಈ ವರ್ಷದ ಆರಂಭದಲ್ಲಿ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಅವರಿಂದ ವಿಚ್ಛೇದನ ಪಡೆದ ನಂತರ ಧನಶ್ರೀ ವರ್ಮಾ ಪ್ರಸ್ತುತ ಒಂಟಿ ಜೀವನವನ್ನು ಆನಂದಿಸುತ್ತಿದ್ದಾರೆ. ಮೂಲತಃ ನೃತ್ಯ ಸಂಯೋಜಕಿಯಾಗಿರುವ ಧನಶ್ರೀ ವರ್ಮಾ ತಮ್ಮ ಜೀವನದ ಬಹುಪಾಲು ಸಮಯವನ್ನು ದುಬೈನಲ್ಲಿ ಕಳೆದಿದ್ದಾರೆ. ಇತ್ತೀಚೆಗೆ ಯುಎಇಗೆ ಭೇಟಿ ನೀಡಿದ್ದ ಅವರು ನಗರದಲ್ಲಿನ ಬದಲಾವಣೆಗಳನ್ನು ನೋಡಿ ಖುಷಿಪಟ್ಟರು.
ಸದ್ದಿಲ್ಲದೆ ಪ್ರತಿಕ್ರಿಯಿಸಿದ ಧನಶ್ರೀ
ಯಜುವೇಂದ್ರ ತಮ್ಮ ವಿಚ್ಛೇದನ ಮತ್ತು ವೈರಲ್ ಆದ 'ಬಿ ಯುವರ್ ಓನ್ ಶುಗರ್ ಡ್ಯಾಡಿ' ಟಿ-ಶರ್ಟ್ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಕೆಲವೇ ದಿನಗಳಲ್ಲಿ ಧನಶ್ರೀ ವರ್ಮಾ ಸದ್ದಿಲ್ಲದೆ ಪ್ರತಿಕ್ರಿಯಿಸಿದ್ದಾರೆ. ಪದಗಳಿಂದಲ್ಲ, ಬದಲಾಗಿ ಹೃದಯಸ್ಪರ್ಶಿ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ.
ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ ಧನಶ್ರೀ
ಹೌದು, ಇದೀಗ ಧನಶ್ರೀ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ದುಬೈ ಭೇಟಿಯ ಕೆಲವು ಫೋಟೋಗಳನ್ನು ಶೇರ್ ಮಾಡಿದ್ದು, ಅದರಲ್ಲಿ ಅವರು ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿರುವುದನ್ನು ಗಮನಿಸಬಹುದು. ಈ ಫೋಟೋದಲ್ಲಿ ಅವರು ನಗರವು ಸಂಸ್ಕೃತಿ ಮತ್ತು ಸಮುದಾಯವನ್ನು ಹೇಗೆ ಅಳವಡಿಸಿಕೊಂಡಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ದುಬೈ ಆಹಾರ ಮತ್ತು ನೈಟ್ ಲೈಫ್ ಕೂಡ ಎಂಜಾಯ್ ಮಾಡಿದ್ದಾರೆ.
ಏನಿದೆ ಪೋಸ್ಟ್ನಲ್ಲಿ?
ತಮ್ಮ ಇನ್ಸ್ಟಾ ಪೋಸ್ಟ್ನಲ್ಲಿ ಧನಶ್ರೀ, ದುಬೈನಲ್ಲಿ ಬೆಳೆದ ನನಗೆ ಹಲವು ನೆನಪುಗಳು ಮರುಕಳಿಸಿದವು. ಈಗ ನಗರವು ಎಷ್ಟು ವಿಕಸನಗೊಂಡಿದೆ ಎಂಬುದನ್ನು ನೋಡುವುದು ಹೃದಯಸ್ಪರ್ಶಿಯಾಗಿತ್ತು. ಒಂದು ಪ್ರಮುಖ ಅಂಶವೆಂದರೆ ಈ ಸುಂದರವಾದ ಹಿಂದೂ ದೇವಾಲಯಕ್ಕೆ ಭೇಟಿ ನೀಡುವುದು ಶಾಂತಿ, ಶಕ್ತಿ ನೀಡುತ್ತದೆ. ನಗರವು ಸಂಸ್ಕೃತಿ ಮತ್ತು ಸಮುದಾಯವನ್ನು ಅಳವಡಿಸಿಕೊಳ್ಳುವಲ್ಲಿ ಎಷ್ಟರ ಮಟ್ಟಿಗೆ ಮುಂದುವರೆದಿದೆ ಎಂಬುದನ್ನು ನೀವೂ ನೋಡಬಹುದು ಎಂದು ಬರೆದುಕೊಂಡಿದ್ದಾರೆ.
ಪಾಡ್ಕಾಸ್ಟ್ನಲ್ಲಿ ಮೌನ ಮುರಿದ ಚಾಹಲ್
ರಾಜ್ ಶಮಾನಿ ಅವರ ಪಾಡ್ಕಾಸ್ಟ್ನಲ್ಲಿ ಚಾಹಲ್ ಮೊದಲ ಬಾರಿಗೆ ತಮ್ಮ ವಿಚ್ಛೇದನದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ ಕೆಲವೇ ದಿನಗಳ ನಂತರ ಧನಶ್ರೀ ಈ ಪೋಸ್ಟ್ ಶೇರ್ ಮಾಡಿದ್ದಾರೆ.
ಚಾಹಲ್ ಹೇಳಿದ್ದೇನು?
ವಿಚ್ಛೇದನ ಅರ್ಜಿ ಕುರಿತ ವಿಚಾರಣೆಯ ಅಂತಿಮ ದಿನದಂದು "ಬಿ ಯುವರ್ ಓನ್ ಶುಗರ್ ಡ್ಯಾಡಿ" ಎಂದು ಬರೆದಿದ್ದ ಟಿ-ಶರ್ಟ್ ಧರಿಸಿದ್ದ ವೈರಲ್ ಕ್ಷಣವನ್ನು ನೆನಪಿಸಿಕೊಳ್ಳುತ್ತಾ, ಚಾಹಲ್, " ಇದರಲ್ಲಿ ಡ್ರಾಮಾ ಏನೂ ಇಲ್ಲ. ನಿಂದನೆಗಾಗಿ ಅಲ್ಲ, ನಾನು ಒಂದು ಸಂದೇಶವನ್ನು ನೀಡಲು ಬಯಸಿದ್ದೆ ಮತ್ತು ನಾನು ಅದನ್ನು ಮಾಡಿದೆ." ಎಂದಿದ್ದರು.