- Home
- Entertainment
- News
- ಎವಿಆರ್ ರೆಡ್ಡಿ ಸ್ಯಾಂಡಲ್ವುಡ್ ನಟಿಯ ಗಲಾಟೆಯಲ್ಲಿ ಬಿಗ್ ಟ್ವಿಸ್ಟ್, ಬೆದರಿಕೆ ಪತ್ರ ಬರೆದ ಗೆಳೆಯ ಅರೆಸ್ಟ್!
ಎವಿಆರ್ ರೆಡ್ಡಿ ಸ್ಯಾಂಡಲ್ವುಡ್ ನಟಿಯ ಗಲಾಟೆಯಲ್ಲಿ ಬಿಗ್ ಟ್ವಿಸ್ಟ್, ಬೆದರಿಕೆ ಪತ್ರ ಬರೆದ ಗೆಳೆಯ ಅರೆಸ್ಟ್!
ನಿರ್ಮಾಪಕ ಅರವಿಂದ ರೆಡ್ಡಿಗೆ ಕೋಟಿ ಹಣಕ್ಕೆ ಬೇಡಿಕೆಯಿಟ್ಟ ಬೆದರಿಕೆ ಪತ್ರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಪೊಲೀಸರು ಈ ಸಂಬಂಧ ಸ್ಯಾಂಡಲ್ವುಡ್ ನಟಿಯ ಗೆಳೆಯ ವೈಶಾಕ್ನನ್ನು ಆಕೆಯ ಮನೆಯಿಂದಲೇ ಬಂಧಿಸಿದ್ದಾರೆ. ಈ ಬಂಧನವು ಪ್ರಕರಣದಲ್ಲಿ ನಟಿಯ ಪಾತ್ರದ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

AVR reddy
ಬೆಂಗಳೂರು: ಖ್ಯಾತ ನಿರ್ಮಾಪಕ, ಉದ್ಯಮಿ ಹಾಗೂ ವಕೀಲರಾದ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿ ಕೋಟಿ ಕೋಟಿ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಯಾಂಡಲ್ವುಡ್ ನಟಿಯ ಗೆಳೆಯ ವೈಶಾಕ್ ಎಂಬಾತನನ್ನು ಆಕೆಯ ಮನೆಯಿಂದಲೇ ಬಂಧಿಸಿದ್ದು, ಪ್ರಕರಣಕ್ಕೆ ಬಿಗ್ ಟ್ವಸ್ಟ್ ಸಿಕ್ಕಿದೆ. ಎವಿಆರ್ ಗ್ರೂಪ್ ಮಾಲೀಕ ಅರವಿಂದ ರೆಡ್ಡಿ ಮತ್ತು ಸ್ಯಾಂಡಲ್ವುಡ್ ನಟಿಗೆ ಸಂಬಂಧ ಇದ್ದ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತು. ಅವರಿಬ್ಬರ ಗಲಾಟೆಗಳು ಕೂಡ ಬಹಿರಂಗವಾಗಿ ಆರೋಪ ಪತ್ಯಾರೋಪಗಳು ಹೊರಬಂತು. ಇದಾಗಿ ಸ್ವಲ್ಪ ದಿನಗಳ ಬಳಿಕ ನಟಿ ಮತ್ತು ಅರವಿಂದ್ ರೆಡ್ಡಿ ತೀರಾ ಖಾಸಗಿಯಾಗಿದ್ದ ಫೋಟೋಗಳು ವೈರಲ್ ಆದವು. ಇದೀಗ ಪ್ರಕರಣದಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬೆದರಿಕೆ ಪತ್ರ ಕಳಿಸಿದ್ದು ಹುನ್ನಾರವೇ?
ಎವಿಆರ್ ಗ್ರೂಪ್ ಮಾಲೀಕರಾಗಿರುವ ಅರವಿಂದ ರೆಡ್ಡಿಗೆ ಜನವರಿ ತಿಂಗಳಲ್ಲಿ ಅಪರಿಚಿತ ವ್ಯಕ್ತಿಗಳಿಂದ ಬೆದರಿಕೆ ಪತ್ರ ಬಂದಿತ್ತು. ಬ್ಲೂ ಡಾರ್ಟ್ ಕೊರಿಯರ್ ಮುಖಾಂತರ ಕಳುಹಿಸಲಾಗಿದ್ದ ಈ ಪತ್ರದಲ್ಲಿ, “ಪ್ರಸ್ತುತ ನಿನ್ನ ಮತ್ತು ಮಹಿಳೆಯೊಂದಿಗಿರುವ (ನಟಿ) ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕು. ಇಲ್ಲವಾದಲ್ಲಿ ನನ್ನ ಗ್ಯಾರೇಜ್ಗೆ 6 ರಿಂದ 7 ಕೋಟಿ ರೂಪಾಯಿ ಹಣ ಕಳುಹಿಸಬೇಕು. ಬೇಡಿಕೆ ಈಡೇರಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಬೆದರಿಕೆ ಹಾಕಲಾಗಿತ್ತು.
ಪೊಲೀಸ್ ಮೊರೆ ಹೋದ ಅರವಿಂದ ರೆಡ್ಡಿ
ಈ ಬೆದರಿಕೆ ಪತ್ರವನ್ನು ಪಡೆದ ಅರವಿಂದ ರೆಡ್ಡಿ ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದರು. ಬೆಂಗಳೂರು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದು, ಬೆದರಿಕೆ ಪತ್ರದ ಮೂಲವನ್ನು ಪತ್ತೆಹಚ್ಚಲು ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದರು. ತನಿಖೆಯ ವೇಳೆ ಪತ್ರವನ್ನು ಬನಶಂಕರಿ ಬಳಿಯ ಬ್ಲೂ ಡಾರ್ಟ್ ಕೊರಿಯರ್ ಮೂಲಕ ಕಳುಹಿಸಿದ್ದು ಗೊತ್ತಾಯಿತು. ಆದರೆ ಪೊಲೀಸರ ದಿಕ್ಕು ತಪ್ಪಿಸುವ ಉದ್ದೇಶದಿಂದ ಬೇರೆ ಸ್ಥಳದಿಂದ ಕೊರಿಯರ್ ಮಾಡಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಖಾಕಿ ಪಡೆ ಮೊದಲು ಗ್ಯಾರೇಜ್ನಲ್ಲಿ ಕೆಲಸ ಮಾಡುತ್ತಿದ್ದ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ವಿಚಾರಣೆ ವೇಳೆ, “ನನ್ನ ಬಾಸ್ ಹೇಳಿದಂತೆ ನಾನು ಪತ್ರವನ್ನು ಕೊರಿಯರ್ ಮಾಡಿದ್ದೇನೆ” ಎಂದು ಆತ ಹೇಳಿಕೆ ನೀಡಿದ್ದಾನೆ.
ಗೆಳೆಯನ್ನನ್ನು ಬಚ್ಚಿಟ್ಟು ನಾಟಕ ಆಡಿದ್ಲಾ ನಟಿ?
ಈ ಮಾಹಿತಿಯ ಆಧಾರದಲ್ಲಿ ಪೊಲೀಸರು ಗ್ಯಾರೇಜ್ ಮಾಲೀಕನ ಪತ್ತೆಗೆ ಮುಂದಾದಾಗ, ವೈಶಾಕ್ ಎಂಬಾತನೇ ಈ ಬೆದರಿಕೆ ಪತ್ರ ಕಳುಹಿಸಿರುವ ಪ್ರಮುಖ ಆರೋಪಿ ಎಂಬುದು ತಿಳಿದುಬಂತು. ಆತನ ಬಂಧನಕ್ಕೆ ಬಲೆ ಬೀಸಿದ ಪೊಲೀಸರು ವೈಶಾಕ್ ನನ್ನು ಅದೇ ಸ್ಯಾಂಡಲ್ವುಡ್ ನಟಿಯ ಮನೆಯಿಂದಲೇ ಪೊಲೀಸರು ಬಂಧಿಸಿದ್ದು, ಈಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಪೊಲೀಸರ ತನಿಖೆಯಲ್ಲಿ, ನಟಿಯು ಇತ್ತೀಚೆಗೆ ಅರವಿಂದ ರೆಡ್ಡಿ ವಿರುದ್ಧ ದೂರು ನೀಡಿದ್ದ ಪ್ರಕರಣಕ್ಕೂ ಈ ಬೆದರಿಕೆ ಪತ್ರಕ್ಕೂ ಸಂಬಂಧವಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಇದೇ ಹಿನ್ನೆಲೆಯಲ್ಲಿ, ನಟಿಯ ಗೆಳೆಯನಾದ ವೈಶಾಕ್ ಮೂಲಕ ಬ್ಲಾಕ್ ಮೇಲ್ ತಂತ್ರ ರೂಪಿಸಿ ಬಳಸಲಾಗಿತ್ತೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತಿದೆ.
ಆರೋಪಿ ಬಳಸಿದ್ದ ಮೊಬೈಲ್ ಫೋನ್ ನಟಿ ಮನೆಯಿಂದ ನಾಪತ್ತೆ!
ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ವೈಶಾಕ್ ಬೆದರಿಕೆ ಪತ್ರ ಕಳುಹಿಸಿದ ಬಳಿಕ ನಟಿಯ ಮನೆಯಲ್ಲಿಯೇ ತಲೆಮರೆಸಿಕೊಂಡಿದ್ದ. ಅಲ್ಲದೆ, ಆರೋಪಿ ಬಳಸಿದ್ದ ಮೊಬೈಲ್ ಫೋನ್ ಅನ್ನು ನಟಿಯ ಮನೆಯಲ್ಲಿ ಬಚ್ಚಿಟ್ಟಿದ್ದಾನೆ ಎಂಬ ಅನುಮಾನವೂ ಗಾಢವಾಗಿದೆ. ಆರೋಪಿಯನ್ನು ಬಂಧಿಸಿದ ಬಳಿಕ ಮೊಬೈಲ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದಾಗ, ಆ ಮೊಬೈಲ್ ಮನೆಯಿಂದ ಕಾಣೆಯಾಗಿರುವುದು ಅನುಮಾನಗಳನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಮೊಬೈಲ್ ಅನ್ನು ಬೇರೆ ಸ್ಥಳಕ್ಕೆ ಸಾಗಿಸಲಾಗಿದೆಯೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಟಿಗೆ ಪೊಲೀಸರು ಅಧಿಕೃತವಾಗಿ ನೋಟಿಸ್ ಜಾರಿ ಮಾಡಿ ತನಿಖೆ ಬರುವಂತೆ ಆಗ್ರಹಿಸಿದ್ದಾರೆ.
ತನಿಖೆ ಚುರುಕು
ಒಟ್ಟಾರೆ, ನಟಿಯು ನೀಡಿದ್ದ ದೂರು ಹಿನ್ನೆಲೆ ಅರವಿಂದ ರೆಡ್ಡಿಗೆ ಬೆದರಿಕೆ ಪತ್ರ ಬರೆಯಲು ಕಾರಣವೇನು, ಇದು ಪೂರ್ವನಿಯೋಜಿತ ಬ್ಲಾಕ್ ಮೇಲ್ ತಂತ್ರವೇ, ಅಥವಾ ವೈಯಕ್ತಿಕ ದ್ವೇಷದ ಕಾರಣವೇ ಎಂಬುದರ ಬಗ್ಗೆ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ವೈಶಾಕ್ನನ್ನು ವಿಚಾರಣೆ ಮಾಡುತ್ತಿರುವ ಪೊಲೀಸರು, ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸಿ ಸತ್ಯಾಂಶವನ್ನು ಹೊರತೆಗೆಯುವ ಪ್ರಯತ್ನದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

