9 ತಿಂಗಳ ಗರ್ಭಿಣಿಯಾಗಿದ್ದರೂ ಕರ್ತವ್ಯ ಮರೆಯದ IPS ಅಧಿಕಾರಿ! ಟ್ರೆಂಡಿಂಗ್ನಲ್ಲಿರೋ ಈ ಅನು ಬೆನಿವಾಲ್ ಯಾರು?
ಅನು ಬೆನಿವಾಲ್ ಯಶಸ್ಸಿನ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅವರ ನಿರಂತರ ಪರಿಶ್ರಮದ ಫಲ. ದೆಹಲಿಯ ಹಿಂದೂ ಕಾಲೇಜಿನಲ್ಲಿ ಎಂಎಸ್ಸಿ ಮುಗಿಸಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅವರು, ಯುಪಿಎಸ್ಸಿ ಕನಸು ಕಂಡು ಅಖಾಡಕ್ಕಿಳಿದರು. ಇಂದು ಯಾಕೆ ಅನು ಟ್ರೆಂಡಿಂಗ್ನಲ್ಲಿದ್ದಾರೆ? ಇಲ್ಲಿದೆ ಮಾಹಿತಿ..!

ಅನು ಕರ್ತವ್ಯ ನಿಷ್ಠಗೆ ಒಂದು ಸಲಾಂ
ಸಾಮಾನ್ಯವಾಗಿ ಗರ್ಭಿಣಿಯರು ಒಂಬತ್ತನೇ ತಿಂಗಳಲ್ಲಿ ವಿಶ್ರಾಂತಿ ಪಡೆಯಲು ಬಯಸುತ್ತಾರೆ. ಆದರೆ, ಮಧ್ಯಪ್ರದೇಶದ ಜಬಲ್ಪುರದಲ್ಲಿ ಎಎಸ್ಪಿ (ASP) ಆಗಿ ಕಾರ್ಯನಿರ್ವಹಿಸುತ್ತಿರುವ ಐಪಿಎಸ್ ಅಧಿಕಾರಿ ಅನು ಬೆನಿವಾಲ್ ಅವರು ಮಾತ್ರ ವಿಭಿನ್ನ. ಗರ್ಭಾವಸ್ಥೆಯ ಕೊನೆಯ ಹಂತದಲ್ಲಿದ್ದರೂ ಅವರು ತೋರಿದ ಕರ್ತವ್ಯನಿಷ್ಠೆ ಮತ್ತು ದೈಹಿಕ ಸಾಮರ್ಥ್ಯ ಈಗ ದೇಶಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.
9ನೇ ತಿಂಗಳಲ್ಲೂ ಓಟದಲ್ಲಿ ಭಾಗಿ
ಮಧ್ಯಪ್ರದೇಶ ಪೊಲೀಸರ ಸೇಫ್ ಕ್ಲಿಕ್ 2.0 ಅಭಿಯಾನದ ಅಡಿಯಲ್ಲಿ ಜಬಲ್ಪುರದಲ್ಲಿ ರನ್ ಫಾರ್ ಸೈಬರ್ ಸೇಫ್ಟಿ (Run for Cyber Safety) ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಶೇಷವೆಂದರೆ, 9 ತಿಂಗಳ ಗರ್ಭಿಣಿಯಾಗಿರುವ ಅನು ಬೆನಿವಾಲ್ ಈ ಓಟದಲ್ಲಿ ಸ್ವತಃ ಪಾಲ್ಗೊಳ್ಳುವ ಮೂಲಕ ಫಿಟ್ನೆಸ್ ಮತ್ತು ಕರ್ತವ್ಯದ ಬಗ್ಗೆ ಹೊಸ ಸಂದೇಶ ನೀಡಿದ್ದಾರೆ.
ಹಿರಿಯ ಅಧಿಕಾರಿಗಳಿಗೆ ಕೃತಜ್ಞತೆ
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೇವರು ಮತ್ತು ಕುಟುಂಬದ ಆಶೀರ್ವಾದದಿಂದ ನಾನು ಗರ್ಭಾವಸ್ಥೆಯ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇನೆ. ಈ ಸಮಯದಲ್ಲಿ ನನ್ನ ಆರೋಗ್ಯದ ಬಗ್ಗೆ ಗಮನ ಹರಿಸುತ್ತಲೇ, ಜವಾಬ್ದಾರಿಗಳನ್ನು ನಿಭಾಯಿಸಲು ನಂಬಿಕೆ ಇಟ್ಟ ನನ್ನ ಹಿರಿಯ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಅನು ಬೆನಿವಾಲ್ ಯಾರು?
ಅನು ಬೆನಿವಾಲ್ ದೆಹಲಿ ಮೂಲದವರಾಗಿದ್ದು 2022ರ ಬ್ಯಾಚ್ನ ಮಧ್ಯಪ್ರದೇಶ ಕೆಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ಪತಿ ಡಾ.ಆಯುಷ್ ಜಾಖರ್ ಕೂಡ ಐಪಿಎಸ್ ಅಧಿಕಾರಿಯಾಗಿದ್ದು, ಪಿಎಂಟಿ ಟಾಪರ್ ಆಗಿದ್ದ ಇವರು ಏಮ್ಸ್ ಜೋಧ್ಪುರದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ್ದಾರೆ. ಇವರ ಮಾವ ದಿಲೀಪ್ ಜಾಖರ್ ಕೂಡ ನಿವೃತ್ತ ಐಪಿಎಸ್ ಅಧಿಕಾರಿ ಎಂಬುದು ಗಮನಾರ್ಹ.
4 ಬಾರಿ ಸೋತರೂ ಎದೆಗುಂದದ ಛಲಗಾರ್ತಿ!
ಅನು ಬೆನಿವಾಲ್ ಅವರ ಯುಪಿಎಸ್ಸಿ (UPSC) ಪಯಣವು ಯುವಜನತೆಗೆ ದೊಡ್ಡ ಸ್ಫೂರ್ತಿ. ನಾಲ್ಕು ಪ್ರಯತ್ನಗಳ ನಂತರ ಅವರು ತಮ್ಮ ಗುರಿಯನ್ನು ಮುಟ್ಟಿದ್ದು ಹೀಗೆ.
- ಮೊದಲ ಪ್ರಯತ್ನ (2018): ಪ್ರಿಲಿಮ್ಸ್ ಪರೀಕ್ಷೆಯಲ್ಲೇ ಫೇಲ್
- ಎರಡನೇ ಪ್ರಯತ್ನ: ಮೇನ್ಸ್ ಪರೀಕ್ಷೆಯವರೆಗೆ ತಲುಪಿದರೂ ಯಶಸ್ಸು ಸಿಗಲಿಲ್ಲ
- ಮೂರನೇ ಪ್ರಯತ್ನ: ಆಲ್ ಇಂಡಿಯಾ 683ನೇ ರ್ಯಾಂಕ್ ಗಳಿಸಿದರು, ಆದರೆ ಇಷ್ಟಪಟ್ಟ ಐಪಿಎಸ್ ಕೆಡರ್ ಸಿಗಲಿಲ್ಲ
- ನಾಲ್ಕನೇ ಪ್ರಯತ್ನ (2022): ಛಲ ಬಿಡದ ಅನು 217ನೇ ರ್ಯಾಂಕ್ ಪಡೆಯುವ ಮೂಲಕ ಐಪಿಎಸ್ ಅಧಿಕಾರಿಯಾಗಿ ತಮ್ಮ ಕನಸನ್ನು ನನಸು ಮಾಡಿಕೊಂಡರು.
ಮಹಿಳೆಯರಿಗೆ ಅತಿದೊಡ್ಡ ಸ್ಫೂರ್ತಿ
ದೆಹಲಿಯ ಪ್ರತಿಷ್ಠಿತ ಹಿಂದೂ ಕಾಲೇಜಿನಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ ಪೂರ್ಣಗೊಳಿಸಿದ್ದ ಅನು, ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಆದರೂ ದೇಶದ ಸೇವೆಯ ಹಂಬಲದಿಂದ ಪೊಲೀಸ್ ಇಲಾಖೆಗೆ ಸೇರಿದರು. ಗರ್ಭಾವಸ್ಥೆಯಲ್ಲೂ ಅವರು ತೋರಿಸುತ್ತಿರುವ ಈ ಉತ್ಸಾಹವು ಇಂದಿನ ಮಹಿಳೆಯರಿಗೆ ಅತಿದೊಡ್ಡ ಸ್ಫೂರ್ತಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

