ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದೊಡ್ಡ ತಿಮಿಂಗಲವನ್ನೇ ಬೇಟೆ ಆಡಿದ್ದಾರೆ. ಅಧಿಕಾರಿ ಒಬ್ಬರ ಮನೆಯ ಗೋಡೆಯೊಳಗೆ ಹಣದ ಖಜಾನೆಯೇ ಪತ್ತೆಯಾಗಿದ್ದು, ದಾಳಿ ನಡೆಸಿದ್ದ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಏನೆಲ್ಲ ಸಿಕ್ಕಿದೆ ಅನ್ನೋ ಮಾಹಿತಿ ಇಲ್ಲಿದೆ. 

ಲಕ್ನೋ: ಉತ್ತರ ಪ್ರದೇಶದ ಭ್ರಷ್ಟಾಚಾರ ನಿಗ್ರಹ ದಳ (Vigilance Department) ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಮಾಜಿ ಅಧಿಕಾರಿಯೊಬ್ಬರ ಮನೆಯಲ್ಲಿ ಕುಬೇರನ ಖಜಾನೆಯೇ ಪತ್ತೆಯಾಗಿದೆ. ಆಗ್ರಾದಲ್ಲಿ ಈ ಹಿಂದೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ARTO) ಆಗಿ ಕೆಲಸ ಮಾಡಿದ್ದ ಲಲಿತ್ ಕುಮಾರ್ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಬರೊಬ್ಬರಿ 13 ಕೆಜಿ ಚಿನ್ನ ಮತ್ತು 1.62 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಗೋಡೆಯೊಳಗೆ ಗುಪ್ತ ಲೋಕ!

ಲಲಿತ್ ಕುಮಾರ್ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೋರ್ಟ್ ವಾರಂಟ್ ಪಡೆದ ವಿಜಿಲೆನ್ಸ್ ತಂಡ ಏಕಕಾಲದಲ್ಲಿ ಹಲವೆಡೆ ದಾಳಿ ನಡೆಸಿತ್ತು. ಅಧಿಕಾರಿಗಳು ಮನೆಯ ಪ್ರತಿ ರೂಮ್, ಫಾಲ್ಸ್ ಸೀಲಿಂಗ್, ಬೆಡ್ ಮತ್ತು ಪೀಠೋಪಕರಣಗಳನ್ನು ತಪಾಸಣೆ ನಡೆಸಿದಾಗ ಗೋಡೆಗಳ ಒಳಗೆ ರಹಸ್ಯ ಲಾಕರ್‌ಗಳನ್ನು ನಿರ್ಮಿಸಿರುವುದು ಕಂಡುಬಂದಿದೆ. ಈ ಗುಪ್ತ ಲಾಕರ್‌ಗಳ ಬಗ್ಗೆ ಸ್ವತಃ ಲಲಿತ್ ಕುಮಾರ್ ಕುಟುಂಬ ಸದಸ್ಯರಿಗೂ ಮಾಹಿತಿ ಇರಲಿಲ್ಲ ಎಂಬುದು ಅಚ್ಚರಿಯ ವಿಷಯ!

ಹೈಟೆಕ್ ಡಿಜಿಟಲ್ ಲಾಕರ್ ಡ್ರಾಮಾ

ದಾಳಿಯ ವೇಳೆ ಅಧಿಕಾರಿಗಳಿಗೆ ಒಂದು ಹೈಟೆಕ್ ಡಿಜಿಟಲ್ ಲಾಕರ್ ಎದುರಾಗಿದೆ. ಇದರ ಪಾಸ್‌ವರ್ಡ್ ಕೇಳಿದಾಗ ಲಲಿತ್ ಕುಮಾರ್ ನನಗೆ ಪಾಸ್‌ವರ್ಡ್ ಮರೆತುಹೋಗಿದೆ ಎಂದು ಹೇಳಿ ಸುಮಾರು ಎರಡು ಗಂಟೆಗಳ ಕಾಲ ಅಧಿಕಾರಿಗಳನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿದರು. ಅಂತಿಮವಾಗಿ ತಾಂತ್ರಿಕ ತಜ್ಞರನ್ನು ಕರೆಸಿ ಲಾಕರ್ ಮುರಿದಾಗ ಅದರೊಳಗೆ ಕಂತೆ ಕಂತೆ ನೋಟುಗಳು ಮತ್ತು ಚಿನ್ನಾಭರಣಗಳು ಪತ್ತೆಯಾಗಿವೆ.

ಸಿಕ್ಕಿದ್ದು ಏನೇನು?

  • ಬರೋಬ್ಬರಿ 13 ಕೆಜಿ ಬಂಗಾರ ಪತ್ತೆಯಾಗಿದೆ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಹಲವು ಕೋಟಿ ರೂಪಾಯಿಗಳಾಗುತ್ತದೆ.
  • 1.62 ಕೋಟಿ ನಗದು ಪತ್ತೆಯಾಗಿದೆ. ಮನೆಯ ವಿವಿಧ ಮೂಲೆಗಳಲ್ಲಿ ಅಡಗಿಸಿಟ್ಟಿದ್ದ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
  • ಬೆಲೆಬಾಳುವ ವಾಚ್‌ಗಳು, ಬೆಳ್ಳಿ ಆಭರಣಗಳು ಮತ್ತು ಹೂಡಿಕೆಯ ದಾಖಲೆಗಳನ್ನೂ ವಶಕ್ಕೆ ಪಡೆಯಲಾಗಿದೆ
  • ಲಕ್ನೋ, ಆಗ್ರಾ ಮತ್ತು ನೋಯ್ಡಾದಂತಹ ಹೈ-ಪ್ರೊಫೈಲ್ ನಗರಗಳಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಬೇನಾಮಿ ಆಸ್ತಿ ಪತ್ರಗಳು ಪತ್ತೆಯಾಗಿದೆ

ದೊಡ್ಡ ಜಾಲದ ಶಂಕೆ

ಲಲಿತ್ ಕುಮಾರ್ ಒಬ್ಬರೇ ಇಷ್ಟೊಂದು ಪ್ರಮಾಣದ ಆಸ್ತಿ ಮಾಡಲು ಸಾಧ್ಯವಿಲ್ಲ.ಇದರ ಹಿಂದೆ ದೊಡ್ಡ ಅಧಿಕಾರಶಾಹಿ ಜಾಲ ಅಥವಾ ಮಧ್ಯವರ್ತಿಗಳ ಕೈವಾಡ ಇರಬಹುದು ಎಂದು ವಿಜಿಲೆನ್ಸ್ ಇಲಾಖೆ ಶಂಕಿಸಿದೆ. ಸದ್ಯಕ್ಕೆ ಹೂಡಿಕೆ ದಾಖಲೆಗಳು ಮತ್ತು ಬ್ಯಾಂಕ್ ಟ್ರಾನ್ಸಾಕ್ಷನ್‌ಗಳನ್ನು ಪರಿಶೀಲಿಸಲಾಗುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಲಲಿತ್ ಕುಮಾರ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಾರಿಗೆ ಇಲಾಖೆಯ ಅಧಿಕಾರಿಯಾಗಿದ್ದ ಲಲಿತ್ ಕುಮಾರ್ ಅವರ ಈ 'ಚಿನ್ನದ ಬೇಟೆ' ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ.