- Home
- Karnataka Districts
- ಮಾವನ ಮಗನನ್ನೇ ಲವ್ ಮಾಡಿ ಮದುವೆಯಾದ್ರೂ 2 ತಿಂಗಳು ಸಂಸಾರ ಮಾಡದ ಯುವತಿ; ನಗರ ಜೀವನಕ್ಕೆ ಆಸೆಪಟ್ಟು ಬದುಕು ಅಂತ್ಯ!
ಮಾವನ ಮಗನನ್ನೇ ಲವ್ ಮಾಡಿ ಮದುವೆಯಾದ್ರೂ 2 ತಿಂಗಳು ಸಂಸಾರ ಮಾಡದ ಯುವತಿ; ನಗರ ಜೀವನಕ್ಕೆ ಆಸೆಪಟ್ಟು ಬದುಕು ಅಂತ್ಯ!
ಹಲವು ವರ್ಷಗಳ ಕಾಲ ಮಾವನ ಮಗನನ್ನೇ ಲವ್ ಮಾಡಿ ಮದುವೆಯಾದ ಯುವತಿ 2 ತಿಂಗಳು ಬಾಳುವೆ ಮಾಡದೇ ಪ್ರಾಣ ಬಿಟ್ಟಿದ್ದಾಳೆ. ನಗರ ಜೀವನಕ್ಕೆ ಆಸೆಪಟ್ಟು ಬದುಕು ಅಂತ್ಯಗೊಳಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ.

ನಗರದ ಜೀವನಕ್ಕೆ ಆಸೆಪಟ್ಟು ಬದುಕು ಅಂತ್ಯ
ಕಲಬುರಗಿ (ಜ.23): ಪ್ರೀತಿಸಿದ ಯುವಕನನ್ನೇ ಕೈಹಿಡಿದು, ಹೊಸ ಜೀವನದ ಕನಸು ಹೊತ್ತು ಹಸೆಮಣೆ ಏರಿದ್ದ ನವವಿವಾಹಿತೆಯೊಬ್ಬಳು ಮದುವೆಯಾದ ಕೇವಲ ಎರಡೇ ತಿಂಗಳಲ್ಲಿ ಆತ್ಮ*ಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಡೆದಿದೆ.
ಎರಡು ತಿಂಗಳ ಹಿಂದಷ್ಟೇ ಮದುವೆ
ಅನುಸೂಯಾ ಅವಿನಾಶ್ ಆಕಡೆ (26) ಆತ್ಮ*ಹತ್ಯೆ ಮಾಡಿಕೊಂಡ ದುರ್ದೈವಿ. ಮೂಲತಃ ಹಳ್ಳಿಯವರಾದ ಅನುಸೂಯಾ, ತನ್ನ ಅತ್ತೆ ಮಗನಾದ ಅವಿನಾಶ್ ಎಂಬಾತನನ್ನು ಪ್ರೀತಿಸುತ್ತಿದ್ದರು. ಇವರ ಪ್ರೀತಿಯನ್ನು ಗೌರವಿಸಿದ ಎರಡೂ ಕುಟುಂಬದ ಹಿರಿಯರು, ಎರಡು ತಿಂಗಳ ಹಿಂದೆಯಷ್ಟೇ ಸಕಲ ಸಂಪ್ರದಾಯಗಳೊಂದಿಗೆ ಇವರ ವಿವಾಹ ನೆರವೇರಿಸಿದ್ದರು. ಆದರೆ, ವೈವಾಹಿಕ ಜೀವನದ ಸಂಭ್ರಮ ಮರೆಯಾಗುವ ಮೊದಲೇ ಅನುಸೂಯಾ ಸಾವಿನ ಹಾದಿ ಹಿಡಿದಿರುವುದು ಕುಟುಂಬಸ್ಥರನ್ನು ಕಣ್ಣೀರಲ್ಲಿ ಮುಳುಗಿಸಿದೆ.
ನಗರದ ಬದುಕಿನ ವ್ಯಾಮೋಹವೇ ಸಾವಿಗೆ ಕಾರಣ?
ಪ್ರಾಥಮಿಕ ವರದಿಗಳ ಪ್ರಕಾರ, ಅನುಸೂಯಾ ಅವರ ಸಾವಿಗೆ ಹಳ್ಳಿ ಜೀವನದ ಬಗೆಗಿನ ಅಸಮಾಧಾನವೇ ಪ್ರಮುಖ ಕಾರಣ ಎನ್ನಲಾಗಿದೆ. ಅನುಸೂಯಾ ಅವರಿಗೆ ಒಟ್ಟು ಮೂವರು ಸಹೋದರಿಯರಿದ್ದು, ಅವರೆಲ್ಲರೂ ಬೆಂಗಳೂರು ಹಾಗೂ ಮುಂಬೈನಂತಹ ಮೆಟ್ರೋ ನಗರಗಳಲ್ಲಿ ನೆಲೆಸಿದ್ದಾರೆ. ತಮ್ಮ ಸಹೋದರಿಯರು ಅಷ್ಟೊಂದು ದೊಡ್ಡ ನಗರಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ, ಆದರೆ ತಾನು ಮಾತ್ರ ಸಣ್ಣ ನಗರದ ಹಳ್ಳಿಯ ವಾತಾವರಣದಲ್ಲಿ ಬದುಕು ಕಳೆಯಬೇಕಲ್ಲ ಎಂಬ ಕೀಳರಿಮೆ ಹಾಗೂ ಬೇಸರ ಅನುಸೂಯಾ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ತನ್ನ ಸಹೋದರಿಯರಂತೆ ತಾನು ಕೂಡ ಕ್ಯಾಪಿಟಲ್ ಸಿಟಿಗಳಲ್ಲಿ ವಾಸಿಸಬೇಕೆಂಬ ಹಂಬಲ ಹೊಂದಿದ್ದ ಅನುಸೂಯಾ, ಕಳೆದ ಕೆಲವು ದಿನಗಳಿಂದ ಇದೇ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಇದೇ ನೋವಿನಲ್ಲಿ ಅವರು ಸಿದ್ದೇಶ್ವರ ಕಾಲೋನಿಯ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಗರದ ಬದುಕಿನ ವ್ಯಾಮೋಹ
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಮಾವನ ಮಗನನ್ನೇ ಪ್ರೀತಿಯ ಮದುವೆಯಾದರೂ, ನಗರದ ಬದುಕಿನ ವ್ಯಾಮೋಹದಿಂದ ಯುವತಿ ಪ್ರಾಣ ಕಳೆದುಕೊಂಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

