- Home
- Karnataka Districts
- ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿ, ಸಾರ್ವಕಾಲಿಕ ದಾಖಲೆ ಬರೆದ ಮಾದಪ್ಪನ ಬೆಟ್ಟದ ಹುಂಡಿ ಕಾಣಿಕೆ ಸಂಗ್ರಹ
ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿ, ಸಾರ್ವಕಾಲಿಕ ದಾಖಲೆ ಬರೆದ ಮಾದಪ್ಪನ ಬೆಟ್ಟದ ಹುಂಡಿ ಕಾಣಿಕೆ ಸಂಗ್ರಹ
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ, ಇತಿಹಾಸದಲ್ಲೇ ಮೊದಲ ಬಾರಿಗೆ 28 ದಿನಗಳಲ್ಲಿ ದಾಖಲೆಯ ಹಣ ಸಂಗ್ರಹವಾಗಿದೆ. ಮಹಾಶಿವರಾತ್ರಿ ಜಾತ್ರೆ ಹಾಗೂ ಶಕ್ತಿ ಯೋಜನೆಯಿಂದಾಗಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದೇ ಈ ದಾಖಲೆಗೆ ಕಾರಣವಾಗಿದೆ.

ದಾಖಲೆ ಬರೆದ ಹುಂಡಿ ಎಣಿಕೆ ಕಾರ್ಯ
ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಹುಂಡಿ ಹಣ ಎಣಿಕೆ ನಡೆದಿದ್ದು, ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 28 ದಿನಗಳ ಅವಧಿಯಲ್ಲಿ ದಾಖಲೆಯ 3.41 ಕೋಟಿ ರು. ಸಂಗ್ರಹವಾಗಿದೆ. ಜಾತ್ರೆ, ಶಿವರಾತ್ರಿ ಹಿನ್ನೆಲೆ ಭಕ್ತರ ಸಂಖ್ಯೆ ಹೆಚ್ಚಳವಾಗಿತ್ತು.
ಸಿಸಿಟಿವಿ ಕಣ್ಣಾವಲಿನಲ್ಲಿ ಎಣಿಕೆ
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಪ್ರಾಧಿಕಾರದ ಕಾರ್ಯದರ್ಶಿ ಎ. ಇ, ರಘು ಸಮ್ಮುಖದಲ್ಲಿ ಹುಂಡಿಗಳನ್ನು ತೆರೆದು ಸಿಸಿಟಿವಿ ಕಣ್ಣಾವಲಿನಲ್ಲಿ ಎಣಿಕೆ ನಡೆಸಲಾಗಿದೆ. 3,41,44,208 ರು. ಸಂಗ್ರಹವಾಗಿದೆ. ಜೊತೆಗೆ, 71 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿ ಪದಾರ್ಥಗಳನ್ನು ಭಕ್ತರು ಹುಂಡಿಗೆ ಹಾಕಿದ್ದಾರೆ ಎಂದು ಕಾರ್ಯದರ್ಶಿ ರಘು ತಿಳಿಸಿದ್ದಾರೆ.
ಲಕ್ಷಾಂತರ ಭಕ್ತರ ಆಗಮನ
ಮಹಾಶಿವರಾತ್ರಿ ಜಾತ್ರಾ ಮಹೋತ್ಸವ, ಸರ್ಕಾರಿ ರಜಾ ದಿನ, ಅಮಾವಾಸ್ಯೆ, ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಲಕ್ಷಾಂತರ ಮಂದಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ದಾಖಲೆ ಮಟ್ಟದಲ್ಲಿ ಹುಂಡಿಹಣ ಸಂಗ್ರಹವಾಗಿದೆ.
6 ಲಕ್ಷಕ್ಕೂ ಅಧಿಕ ಲಾಡು ಪ್ರಸಾದ
ಶಿವರಾತ್ರಿ ಜಾತ್ರೆಯಲ್ಲಿ ಕ್ಷೇತ್ರಕ್ಕೆ ಕಳೆದ ಒಂದು ವಾರದಿಂದ 9 ರಿಂದ 10 ಲಕ್ಷಕ್ಕೂ ಹೆಚ್ಚು ಅಧಿಕ ಭಕ್ತರು ಮಾದಪ್ಪನ ದರ್ಶನ ಪಡೆದಿದ್ದು, ತಮಿಳುನಾಡು ಸೇರಿದಂತೆ ಹೊರರಾಜ್ಯಗಳ ಭಕ್ತರೂ ಸಹ ದರ್ಶನ ಪಡೆದಿದ್ದಾರೆ. 6 ಲಕ್ಷಕ್ಕೂ ಅಧಿಕ ಲಾಡು ಪ್ರಸಾದ ಸಹ ಈ ಜಾತ್ರೆಯಲ್ಲಿ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: 2 ಹಳ್ಳಿಗೆ ಇರೋದು ಒಂದೇ ಟ್ಯಾಂಕ್, 15 ದಿನಕೊಮ್ಮೆ ನೀರು; ಬತ್ತಿದ ನಲ್ಲಿ, ಬರಿದಾದ ಭರವಸೆ
2.14 ಕೋಟಿ ರು. ಸಂಗ್ರಹ
ಫೆಬ್ರವರಿ 4ರಂದು ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 27 ದಿನಗಳ ಅವಧಿಯೊಳಗೆ 2.14 ಕೋಟಿ ರು. ಸಂಗ್ರಹವಾಗಿತ್ತು. ಭಕ್ತರು ಹರಕೆಯ ರೂಪದಲ್ಲಿ 2,14,40,939 ನಗದು 45 ಗ್ರಾಂ ಚಿನ್ನ ಹಾಗೂ 2.320 ಕೆ. ಜಿ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದರು. ಹುಂಡಿಗೆ ₹6,15,376 ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 3 ನೋಟುಗಳು, ವಿದೇಶಿ 9 ನೋಟುಗಳನ್ನು ಹಾಕಲಾಗಿತ್ತು.
ಇದನ್ನೂ ಓದಿ: ಶಾಲೆಯಲ್ಲಿ ಮಕ್ಕಳಿಗೆ ಬಾಣೆಹಣ್ಣಿನ ಆಸೆ ತೋರಿಸಿ 'ಟಾಯ್ಲೆಟ್ ಕ್ಲೀನ್' ಮಾಡಿಸಿದ ಮುಖ್ಯ ಶಿಕ್ಷಕ!

