- Home
- Karnataka Districts
- ಜಿಮ್ನಲ್ಲಿ ಹಿಂದೂ ಯುವತಿಯರಿಗೆ 'ಬ್ಯಾಡ್ ಟಚ್' ಮಾಡ್ತಿದ್ದ ಸಾಬಿರ್; ಟ್ರೈನರ್ ಬಾಲ ಕಟ್ ಮಾಡಿದ ಬಜರಂಗದಳ!
ಜಿಮ್ನಲ್ಲಿ ಹಿಂದೂ ಯುವತಿಯರಿಗೆ 'ಬ್ಯಾಡ್ ಟಚ್' ಮಾಡ್ತಿದ್ದ ಸಾಬಿರ್; ಟ್ರೈನರ್ ಬಾಲ ಕಟ್ ಮಾಡಿದ ಬಜರಂಗದಳ!
ಧಾರವಾಡದ ಜಿಮ್ ಟ್ರೈನರ್ ಸಾಬಿರ್ ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಈ ಘಟನೆಯಿಂದ ಆಕ್ರೋಶಗೊಂಡ ಬಜರಂಗದಳದ ಕಾರ್ಯಕರ್ತರು ಜಿಮ್ಗೆ ಬೀಗ ಜಡಿದು ಪ್ರತಿಭಟಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಿಂದೂ ಯುವತಿಯರಿಗೆ ಕಿರುಕುಳ
ಧಾರವಾಡ (ಮಾ.30): ವಿದ್ಯಾಕಾಶಿ ಧಾರವಾಡದಲ್ಲಿ ಮತ್ತೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಮರಾಠ ಕಾಲೋನಿಯಲ್ಲಿರುವ 'ಫಿಟ್ನೆಸ್ ಫಸ್ಟ್' (Fitness First) ಜಿಮ್ನಲ್ಲಿ ತರಬೇತುದಾರನೊಬ್ಬ ಹಿಂದೂ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಬಜರಂಗದಳದ ಕಾರ್ಯಕರ್ತರು ಜಿಮ್ಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರ
ಧಾರವಾಡದ ಮರಾಠ ಕಾಲೋನಿಯಲ್ಲಿರುವ ಈ ಜಿಮ್ನಲ್ಲಿ ಸಾಬಿರ್ ಎಂಬಾತ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಈತ ಕಳೆದ ಕೆಲವು ಸಮಯದಿಂದ ಜಿಮ್ಗೆ ಬರುವ ಹಿಂದೂ ಯುವತಿಯರನ್ನೇ ಗುರಿಯಾಗಿಸಿಕೊಂಡು (Target) ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ತರಬೇತಿ ನೀಡುವ ನೆಪದಲ್ಲಿ ಯುವತಿಯರ ಮೈಕೈ ಮುಟ್ಟುವುದು, 'ಬ್ಯಾಡ್ ಟಚ್' (Bad Touch) ಮಾಡುವುದು ಹಾಗೂ ಅಸಭ್ಯವಾಗಿ ವರ್ತಿಸುವ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಸಂತ್ರಸ್ತರು ದೂರಿದ್ದಾರೆ.
ಬಾತ್ರೂಮ್ಗೂ ನುಗ್ಗುತ್ತಿದ್ದ ಕಾಮುಕ ಟ್ರೈನರ್!
ಅಪರಾಧದ ಹಾದಿ ಹಿಡಿದಿದ್ದ ಸಾಬಿರ್ ಎಂಬ ಈ ಟ್ರೈನರ್, ಯುವತಿಯರು ಬಳಸುವ ಶೌಚಾಲಯ ಹಾಗೂ ಸ್ನಾನದ ಗೃಹಗಳ (Bathroom) ಬಳಿಯೂ ಸುಳಿದಾಡುತ್ತಿದ್ದ ಎನ್ನಲಾಗಿದೆ. ಯುವತಿಯರು ಒಳಗಿದ್ದಾಗ ಬೇಕಂತಲೇ ಅಲ್ಲಿಗೆ ಹೋಗಿ ಬರುವುದು ಮತ್ತು ಅಸಭ್ಯ ಸನ್ನೆಗಳನ್ನು ಮಾಡುತ್ತಿದ್ದ ಎಂಬ ದೂರುಗಳು ಕೇಳಿಬಂದಿವೆ. ಈ ಬಗ್ಗೆ ಜಿಮ್ಗೆ ಹೋಗುವ ಯುವತಿಯೊಬ್ಬರಾದ ಶೃತಿ ಬೆಳ್ಳಕ್ಕಿ ಅವರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದು, ಟ್ರೈನರ್ನ ವರ್ತನೆಯಿಂದಾಗಿ ಮಹಿಳೆಯರು ಜಿಮ್ಗೆ ಹೋಗಲು ಭಯಪಡುವಂತಾಗಿದೆ ಎಂದು ತಿಳಿಸಿದ್ದಾರೆ.
ಬಜರಂಗದಳದಿಂದ ಜಿಮ್ಗೆ ಬೀಗ:
ಸಾಬಿರ್ನ ಈ ಕಿರುಕುಳದ ಬಗ್ಗೆ ಮಾಹಿತಿ ತಿಳಿದ ಬಜರಂಗದಳದ ಕಾರ್ಯಕರ್ತರು ಇಂದು ಮರಾಠ ಕಾಲೋನಿಯ ಜಿಮ್ಗೆ ಮುತ್ತಿಗೆ ಹಾಕಿದರು. ಈ ಹಿಂದೆಯೇ ಸಾಬಿರ್ನ ವರ್ತನೆಯ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು, ಆದರೂ ಆತ ತನ್ನ ಬುದ್ಧಿ ಬಿಟ್ಟಿರಲಿಲ್ಲ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಜಿಮ್ನಲ್ಲಿದ್ದವರನ್ನು ಹೊರಗೆ ಕಳುಹಿಸಿದ ಕಾರ್ಯಕರ್ತರು ಜಿಮ್ಗೆ ಬೀಗ ಜಡಿದಿದ್ದಾರೆ. ಆರೋಪಿ ಸಾಬಿರ್ ಸ್ಥಳಕ್ಕೆ ಬರಬೇಕು ಮತ್ತು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಸ್ಥಳಕ್ಕೆ ಪೊಲೀಸರ ಭೇಟಿ:
ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ ಧಾರವಾಡದ ಉಪನಗರ (Upanagar) ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಯುವತಿಯರಿಂದ ಅಧಿಕೃತ ದೂರು ಪಡೆದ ನಂತರ ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಧಾರವಾಡದಲ್ಲಿ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

