ಬೆಂಗಳೂರಿನ ಟ್ರಾಫಿಕ್ ಮತ್ತು ಮೂಲಸೌಕರ್ಯ ಸಮಸ್ಯೆಗಳು ಹೊಸತೇನಲ್ಲ. ಆದರೆ, ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಯೊಬ್ಬರಿದ್ದ ಆಂಬುಲೆನ್ಸ್ ಟ್ರಾಫಿಕ್ನಲ್ಲಿ ಸಿಲುಕಿಕೊಂಡ ಘಟನೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ..
ಬೆಂಗಳೂರಿನ ಟ್ರಾಫಿಕ್ನಲ್ಲಿ ಆಂಬುಲೆನ್ಸ್ ಸಿಲುಕಿಕೊಂಡಿದ್ದರಿಂದ ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಗೆ ತೊಂದರೆಯಾದ ಘಟನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್ನಿಂದಾಗಿ, ನಗರದ ಕಳಪೆ ಮೂಲಸೌಕರ್ಯ ಮತ್ತು ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೆಚ್ಚು ತೆರಿಗೆ ಕಟ್ಟಿದರೂ ಕಳಪೆ ಸೇವೆ ಸಿಗುತ್ತಿರುವುದರ ಬಗ್ಗೆ ಚರ್ಚೆ ಶುರುವಾಗಿದೆ.
ಬೆಂಗಳೂರಿನ ಟ್ರಾಫಿಕ್ ಮತ್ತು ಮೂಲಸೌಕರ್ಯ ಸಮಸ್ಯೆಗಳು ಹೊಸತೇನಲ್ಲ. ಆದರೆ, ಆಸ್ಪತ್ರೆಗೆ ಹೋಗುತ್ತಿದ್ದ ಮಹಿಳೆಯೊಬ್ಬರಿದ್ದ ಆಂಬುಲೆನ್ಸ್ ಟ್ರಾಫಿಕ್ನಲ್ಲಿ ಸಿಲುಕಿಕೊಂಡ ಘಟನೆಯೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರ ಕೋಪಕ್ಕೆ ಕಾರಣವಾಗಿದೆ. ಈ ವೈರಲ್ ಪೋಸ್ಟ್, ನಗರದ ಆಡಳಿತ, ಯೋಜನೆ ಮತ್ತು ಸಾರಿಗೆ ವ್ಯವಸ್ಥೆಯ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಈ ಚರ್ಚೆ ಶುರುವಾಗಿದ್ದು @chandlerpeeing ಎಂಬ ಎಕ್ಸ್ (X) ಬಳಕೆದಾರರ ಪೋಸ್ಟ್ನಿಂದ. "ಈ ಟ್ರಾಫಿಕ್ನಲ್ಲಿ ಆಂಬುಲೆನ್ಸ್ ಕೂಡಾ ಮುಂದೆ ಹೋಗಲ್ಲ. ದೇಶದ ಟಾಪ್ ಟ್ಯಾಲೆಂಟ್ ಕೆಲಸ ಮಾಡೋ ಜಾಗ ಇದು. ವಾವ್. ಒಂದೇ ಒಂದು ಮಳೆಗೆ ಇಡೀ ನಗರ ನಿಂತುಹೋಗುತ್ತೆ. ದೇವರು ನಮ್ಮನ್ನು ಕಾಪಾಡಲಿ" ಎಂದು ಅವರು ಬರೆದುಕೊಂಡಿದ್ದರು. ಇದಾದ ನಂತರ, @sidshishoo ಎಂಬ ಇನ್ನೊಬ್ಬ ಬಳಕೆದಾರರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡಾಗ ಈ ವಿಷಯ ಮತ್ತಷ್ಟು ವೈರಲ್ ಆಯ್ತು.
ಅವರು ತಮ್ಮ ಪೋಸ್ಟ್ನಲ್ಲಿ, "ಇವತ್ತು ನನ್ನ ಹೆಂಡತಿ ಆಂಬುಲೆನ್ಸ್ನಲ್ಲಿ ಆಸ್ಪತ್ರೆ ಹೊರಗೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡಾಗ, ನಾನು ಎಷ್ಟು ತೆರಿಗೆ ಕಟ್ಟುತ್ತೇನೆ ಅನ್ನೋದು ಬೇಸರದಿಂದ ನೆನಪಾಯ್ತು. ಇದಕ್ಕಾಗಿಯೇ ನಾನು ಕೆಲಸ ಮಾಡೋದು? ಇಲ್ಲ. ನಾನಿದಕ್ಕೆ ಅರ್ಹನಾ? ಇಲ್ಲ. ರೋಡ್ ಟ್ಯಾಕ್ಸ್, ಫ್ಯೂಯಲ್ ಟ್ಯಾಕ್ಸ್, ಪ್ರಾಪರ್ಟಿ ಟ್ಯಾಕ್ಸ್ ಕಟ್ಟಿದಾಗಲೆಲ್ಲಾ ನನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಸಾಕಾಗಿ ಹೋಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, "ಮಾನ್ಯತಾ ಟೆಕ್ ಪಾರ್ಕ್ನಿಂದ ಬೆಳ್ಳಂದೂರಿಗೆ ಹೋಗಲು ನನಗೆ 4 ಗಂಟೆ ಬೇಕಾಯ್ತು! ರಸ್ತೆಯಲ್ಲಿ ಸಹಾಯ ಮಾಡಲು ಒಬ್ಬನೇ ಒಬ್ಬ ಪೊಲೀಸ್ ಇರಲಿಲ್ಲ! @blrcitytraffic" ಅಂತಾನೂ ಅವರು ಸೇರಿಸಿದ್ದಾರೆ.
ಸೋಷಿಯಲ್ ಮೀಡಿಯಾ ಪ್ರತಿಕ್ರಿಯೆ ಹೇಗಿತ್ತು?
ಈ ಟ್ವೀಟ್ ಕ್ಷಣಮಾತ್ರದಲ್ಲಿ ವೈರಲ್ ಆಗಿ, ಬೆಂಗಳೂರಿನ ಆಡಳಿತ ಮತ್ತು ಮೂಲಸೌಕರ್ಯಗಳ ವಿರುದ್ಧ ಟೀಕೆಗಳು ವ್ಯಕ್ತವಾದವು. "ಬೆಂಗಳೂರಿನ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ನಮ್ಮ ಬಗ್ಗೆ ಕಾಳಜಿಯೇ ಇಲ್ಲ. ಅವರಿಗೆ ಕಾಳಜಿ ವಹಿಸಲು ಯಾವುದೇ ಪ್ರೋತ್ಸಾಹವೂ ಇಲ್ಲ. ಕಂಪನಿಗಳು ಬರ್ತಾನೇ ಇವೆ, ಜನ ಅಪಾರ್ಟ್ಮೆಂಟ್ಗಳನ್ನು ಖರೀದಿಸುತ್ತಲೇ ಇದ್ದಾರೆ, ಆದರೆ ಏನೂ ಬದಲಾಗುತ್ತಿಲ್ಲ," ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
"ನಿಮ್ಮ ನೋವು ಅರ್ಥವಾಗುತ್ತೆ. ನಿಮ್ಮ ಪತ್ನಿ ಈಗ ಚೆನ್ನಾಗಿದ್ದಾರೆ ಅಂದುಕೊಳ್ಳುತ್ತೇನೆ. ನಾವು ಈ ನಗರ ಮತ್ತು ಇಲ್ಲಿನ ಜನರನ್ನು ಪ್ರೀತಿಸುತ್ತೇವೆ, ಆದರೆ ಮೂಲಸೌಕರ್ಯ ಪ್ರತಿದಿನ ನಮ್ಮನ್ನು ಕೈಬಿಡುತ್ತಿದೆ," ಎಂದು ಇನ್ನೊಬ್ಬರು ಬರೆದಿದ್ದಾರೆ. ಕೆಲವರು ಸಾರ್ವಜನಿಕರ ನಿರಾಸಕ್ತಿಯನ್ನು ದೂಷಿಸಿ, "ಹೆಚ್ಚಿನ ಜನರಿಗೆ ವೈಯಕ್ತಿಕವಾಗಿ ತೊಂದರೆಯಾದಾಗ ಮಾತ್ರ ಎಚ್ಚೆತ್ತುಕೊಳ್ಳುತ್ತಾರೆ. ಅಲ್ಲಿಯವರೆಗೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ," ಎಂದಿದ್ದಾರೆ.
"ಈ ನಗರದ ಟಾಪ್ ಟ್ಯಾಲೆಂಟ್ಗಳಿಗೆ ಕಳಪೆ ಆಡಳಿತದ ವಿರುದ್ಧ ಪ್ರತಿಭಟಿಸಲು ಒಂದು ದಿನವೂ ಸಮಯವಿಲ್ಲ," ಎಂದು ಒಬ್ಬರು ಸಾಮೂಹಿಕ ಹೋರಾಟದ ಕೊರತೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ನಗರ ಬಿಟ್ಟು ಹೋಗುವುದೇ ಪರಿಹಾರ ಎಂದು ಸಲಹೆ ನೀಡಿದರೆ, ಇನ್ನು ಕೆಲವರು ಹೆಚ್ಚು ತೆರಿಗೆ ಕಟ್ಟಿದರೂ ಕಳಪೆ ಸೇವೆ ಸಿಗುತ್ತಿರುವ ವಿಪರ್ಯಾಸವನ್ನು ಎತ್ತಿ ತೋರಿಸಿದ್ದಾರೆ.


