- Home
- News
- India News
- ಸರ್ಕಾರ ರಚಿಸಲು ಎಲ್ಲರ ಬೆಂಬಲ ಪಡೆದ ದಳಪತಿ ವಿಜಯ್, ಆದ್ರೆ ಪ್ರತಿಜ್ಞಾವಿಧಿ ಬೋಧಿಸೋಕೆ ರಾಜ್ಯಪಾಲರೇ ಇರಲ್ಲ!
ಸರ್ಕಾರ ರಚಿಸಲು ಎಲ್ಲರ ಬೆಂಬಲ ಪಡೆದ ದಳಪತಿ ವಿಜಯ್, ಆದ್ರೆ ಪ್ರತಿಜ್ಞಾವಿಧಿ ಬೋಧಿಸೋಕೆ ರಾಜ್ಯಪಾಲರೇ ಇರಲ್ಲ!
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್, ವಿಸಿಕೆ ಹಾಗೂ ಐಯುಎಂಎಲ್ ಬೆಂಬಲ ನೀಡಿವೆ, ಇದರಿಂದ ಶಾಸಕರ ಬಲ 120ಕ್ಕೆ ಏರಿದೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಸಂಜೆ 6 ಗಂಟೆಗೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

ಕೊನೆಗೂ ವಿಜಯ್ಗೆ ಸಿಕ್ಕ ಬೆಂಬಲ
ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಸರ್ಕಾರ ರಚನೆಯಲ್ಲಿ ಸೃಷ್ಟಿಯಾಗಿರುವ ಅತಂತ್ರ ಸ್ಥಿತಿ ಈಗ ಮುಕ್ತಾಯವಾಗುವ ಸನಿಹ ಬಂದಿದೆ. ಸರ್ಕಾರ ರಚಿಸಲು ವಿಜಯ್ ಕಾಂಗ್ರೆಸ್, ವಿಸಿಕೆ ಹಾಗೂ ಐಯುಎಂಎಲ್ ಪಕ್ಷದ ಬೆಂಬಲ ಪಡೆಯುವುದರೊಂದಿಗೆ ಅವರ ಬೆಂಬಲ 120ಕ್ಕೆ ಏರಿದೆ. ಆದರೆ, ಪ್ರತಿಜ್ಞಾವಿಧಿ ಬೋಧಿಸಲು ರಾಜ್ಯಪಾಲರು ಸಿಗುವುದೇ ಅನುಮಾನವಾಗಿದೆ.

ಸಂಜೆ 6 ಗಂಟೆಗೆ ಮತ್ತೆ ರಾಜ್ಯಪಾಲರ ಭೇಟಿ ಮಾಡಲಿರುವ ವಿಜಯ್
ವಿಜಯ್ ಅವರ ಟಿವಿಕೆ ಪಕ್ಷಕ್ಕೆ 120 ಶಾಸಕರು ಬೆಂಬಲ ನೀಡಿದ್ದಾರೆ. ಇದರಿಂದಾಗಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಸಂಜೆ 6 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ ಎಂದು ವರದಿಯಾಗಿದೆ. ಹಾಗೇನಾದರೂ ವಿಜಯ್ ಈ ಸಮಯದಲ್ಲಿ ರಾಜ್ಯಪಾಲರ ಭೇಟಿಗೆ ಹೋಗದೇ ಇದ್ದಲ್ಲಿ, ಪ್ರಮಾಣವಚನ ಸ್ವೀಕಾರ ಸಮಾರಂಭ ಇನ್ನಷ್ಟು ದಿನ ತಡವಾಗಬಹುದು ಎನ್ನಲಾಗಿದೆ.
7 ಗಂಟೆಗೆ ಕೇರಳಕ್ಕೆ ಹೊರಡಲಿರುವ ರಾಜ್ಯಪಾಲ
ತಮಿಳುನಾಡು ಹಾಗೂ ಕೇರಳ ಎರಡೂ ರಾಜ್ಯಕ್ಕೂ ಆರ್ವಿ ಅರ್ಲೇಕರ್ ರಾಜ್ಯಪಾಲರಾಗಿದ್ದಾರೆ. ಕೇರಳದಲ್ಲೂ ಸರ್ಕಾರ ರಚನೆಯ ಕಸರತ್ತು ನಡೆಯುತ್ತಿರುವ ಕಾರಣ ಅಲ್ಲಿಗೆ ಭೇಟಿ ನೀಡುವುದೂ ಕೂಡ ಅಗತ್ಯವಾಗಿದೆ. ಇಷ್ಟು ದಿನಗಳ ಕಾಲ ತಮಿಳುನಾಡಿನಲ್ಲಿ ಸರ್ಕಾರ ರಚನೆ ಆಗುವ ನಿರೀಕ್ಷೆಯಲ್ಲಿದ್ದ ಅರ್ಲೇಕರ್, ಇಂದು ಸಂಜೆ 7 ಗಂಟೆ ವೇಳೆಗೆ ಕೇರಳಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.
ಈ ವಾರವೇ ಸಿಎಂ ಆಗಲು ವಿಜಯ್ಗೆ ಕೊನೇ ಅವಕಾಶ
ಇದರಿಂದಾಗಿ ವಿಜಯ್ ಸಂಜೆ 6 ಗಂಟೆಯ ಒಳಗಡೆ ರಾಜ್ಯಪಾಲರ ಭೇಟಿ ಮಾಡಿ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಮನವಿ ಮಾಡಲಿದ್ದಾರೆ. ಸರ್ಕಾರಕ್ಕೆ ಇರುವ ಬೆಂಬಲ ಪತ್ರವನ್ನು ನೋಡಿದ ಬಳಿಕ ಅರ್ಲೇಕರ್ ಇದರ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಹಾಗೇನಾದರೂ ಬೆಂಬಲ ಇರುವುದು ಖಚಿತವಾದಲ್ಲಿ ಮಾತ್ರವೇ, ಕೇರಳ ಪ್ರವಾಸವನ್ನು ರದ್ದು ಮಾಡಲಿದ್ದಾರೆ ಎನ್ನಲಾಗಿದೆ.
ದಳಪತಿ ವಿಜಯ್ಗೆ ರಾಜ್ಯಪಾಲರ ಖಡಕ್ ಸಂದೇಶ
ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಸಿ. ಜೋಸೆಫ್ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ ಕಳಗಂ' (TVK) ಈಗಾಗಲೇ ಸರ್ಕಾರ ರಚಿಸಲು ಹಕ್ಕು ಮಂಡಿಸಿದೆ. ಆದರೆ, ರಾಜ್ಯಪಾಲರು ಈ ವಿಚಾರದಲ್ಲಿ ಅತ್ಯಂತ ಜಾಗರೂಕತೆಯ ಹೆಜ್ಜೆ ಇರಿಸಿದ್ದಾರೆ. "ಕೇವಲ ಹಕ್ಕು ಮಂಡಿಸಿದರೆ ಸಾಲದು, ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲದ (Magic Figure) ಬೆಂಬಲ ಪತ್ರಗಳೊಂದಿಗೆ ಬನ್ನಿ" ಎಂದು ವಿಜಯ್ ನೇತೃತ್ವದ ನಿಯೋಗಕ್ಕೆ ರಾಜ್ಯಪಾಲರು ಸ್ಪಷ್ಟಪಡಿಸಿದ್ದರು.
ರಾಜ್ಯಪಾಲರ ಅಚಲ ನಿಲುವು
ಯಾವುದೇ ಪಕ್ಷ ಅಥವಾ ಮೈತ್ರಿಕೂಟವು ಅಗತ್ಯ ಶಾಸಕರ ಬೆಂಬಲ ಪತ್ರಗಳನ್ನು ಸಲ್ಲಿಸಿ ಸಂಖ್ಯಾಬಲವನ್ನು ಸಾಬೀತುಪಡಿಸಿದರೆ, ತಕ್ಷಣವೇ ಅವರನ್ನು ಸರ್ಕಾರ ರಚಿಸಲು ಆಹ್ವಾನಿಸಲಾಗುತ್ತದೆ. ತದನಂತರ ನಿಗದಿತ ಸಮಯದೊಳಗೆ ವಿಧಾನಸಭೆಯ ಸದನದಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡಲಾಗುತ್ತದೆ. ಆದರೆ, ಈ ಹಂತದಲ್ಲಿ ಕಾಂಕ್ರೀಟ್ ದಾಖಲೆಗಳಿಲ್ಲದೆ ಯಾವುದೇ ಪಕ್ಷವನ್ನು ಆಹ್ವಾನಿಸುವುದು ಸೂಕ್ತವಲ್ಲ ಎಂಬುದು ರಾಜ್ಯಪಾಲರ ನಿಲುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

