- Home
- News
- India News
- ಮಗ ಡಾಕ್ಟರ್ ಆಗ್ಲಿ ಎಂದು ಅಪ್ಪ 10 ಲಕ್ಷ ಲಂಚ ಕೊಟ್ಟು ನೀಟ್ ಪೇಪರ್ ತಗೊಂಡ: ಮಗ ಡುಮ್ಕಿ ಹೊಡೆದ
ಮಗ ಡಾಕ್ಟರ್ ಆಗ್ಲಿ ಎಂದು ಅಪ್ಪ 10 ಲಕ್ಷ ಲಂಚ ಕೊಟ್ಟು ನೀಟ್ ಪೇಪರ್ ತಗೊಂಡ: ಮಗ ಡುಮ್ಕಿ ಹೊಡೆದ
ನೀಟ್ ಯುಜಿ ಪತ್ರಿಕೆ ಸೋರಿಕೆ ಪ್ರಕರಣ ದೇಶಾದ್ಯಂತ ಸದ್ದು ಮಾಡುತ್ತಿದ್ದು, ಪರೀಕ್ಷೆ ರದ್ದಾಗಿದೆ. ಸೋರಿಕೆಯಾದ ಪತ್ರಿಕೆಗೆ 10 ಲಕ್ಷ ರೂ. ನೀಡಿದ್ದರೂ, ವಿದ್ಯಾರ್ಥಿಯೊಬ್ಬ ಕೇವಲ 107 ಅಂಕ ಗಳಿಸಿರುವುದು ಈ ಹಗರಣಕ್ಕೆ ಹೊಸ ತಿರುವು ನೀಡಿದೆ. ಇದೀಗ ಸಿಬಿಐ ಈ ಬೃಹತ್ ಜಾಲದ ಬಗ್ಗೆ ತನಿಖೆ ನಡೆಸುತ್ತಿದೆ.

ಪುಸ್ತಕ ಕೊಟ್ಟರೆ ಪಾಸ್ ಆಗ್ತಾರಾ?
ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೋಡಿ ಉತ್ತರ ಬರೆಯಲು ಕೊಟ್ಟರೆ ಎಷ್ಟು ಮಂದಿ ವಿದ್ಯಾರ್ಥಿಗಳು ಪಾಸ್ ಆಗಬಹುದು, ಎಷ್ಟು ಮಂದಿ ಉನ್ನತ ಸ್ಥಾನ ಪಡೆಯಬಹುದು ಎನ್ನುವ ಚರ್ಚೆ ಹಿಂದೊಮ್ಮೆ ಭಾರಿ ಸದ್ದು ಮಾಡಿತ್ತು. ಪರೀಕ್ಷೆ ಸಮಯದಲ್ಲಿ ಪುಸ್ತಕ ಕೊಟ್ಟರೂ ಹೆಚ್ಚು ಅಂಕ ಪಡೆಯುವವರು ಹೆಚ್ಚು ಅಂಕ ಪಡೆಯುತ್ತಾರೆ, ಫೇಲ್ ಆಗುವ ವಿದ್ಯಾರ್ಥಿಗಳಿಗೆ ಉತ್ತರ ಎಲ್ಲಿದೆ ಎಂದು ಹುಡುಕುವಷ್ಟರಲ್ಲಿ ಪರೀಕ್ಷೆ ಮುಗಿದುಹೋಗಿರುತ್ತದೆ ಎನ್ನುವ ಮಾತು ಕೇಳಿಬಂದಿತ್ತು. ಅಂಥದ್ದೊಂದು ಘಟನೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿಯೂ ಆಗಿದೆ.

ನೀಟ್ ಪರೀಕ್ಷೆ ಹಗರಣ
ನೀಟ್ ಯುಜಿ ಪತ್ರಿಕೆ ಸೋರಿಕೆ ಪ್ರಕರಣ ಇಡೀ ದೇಶಾದ್ಯಂತ ಹಲ್ಚಲ್ ಸೃಷ್ಟಿಸಿದೆ. ಇದಾಗಲೇ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಸರ್ಕಾರ ರದ್ದು ಮಾಡಿದ್ದು, ಹೊಸ ಪರೀಕ್ಷೆಗೆ ಆದೇಶಿಸಿದೆ. ಹಿಂದಿನ ಪರೀಕ್ಷೆ ಚೆನ್ನಾಗಿ ಮಾಡಿದ್ದೆ, ಆದ್ರೆ ಹೊಸದಾಗಿ ಪರೀಕ್ಷೆ ಆದೇಶಿಸಿದ್ರು ಎಂದು ವಿದ್ಯಾರ್ಥಿಯೊಬ್ಬ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆಯೂ ನಡೆದಿದೆ. ಮುಂದಿನ ಪರೀಕ್ಷೆ ಚೆನ್ನಾಗಿ ಮಾಡುವ ಭರವಸೆ ಆತನಿಗೆ ಇರಲಿಲ್ಲವೆ, ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆಯೂ ನಡೆಯುತ್ತಿದೆ. ಆದರೆ ಆತ ಒತ್ತಡಕ್ಕೆ ಒಳಗಾಗಿದ್ದ ಎನ್ನಲಾಗಿದೆ.
ಪತ್ರಿಕೆ ಸಿಕ್ಕರೂ ಫೇಲ್ ಆದ
ಇದು ಒಂದೆಡೆಯಾದರೆ, ಅದೇ ಇನ್ನೊಂದೆಡೆ, 10 ಲಕ್ಷ ರೂಪಾಯಿ ಕೊಟ್ಟು ಅಪ್ಪನೊಬ್ಬ ಲೀಕ್ ಆಗಿದ್ದ ನೀಟ್ ಪರೀಕ್ಷೆ ಪತ್ರಿಕೆ ಪಡೆದಿದ್ದ. ಆದರೆ ಪ್ರಶ್ನೆ ಪತ್ರಿಕೆ ಮೊದಲೇ ಕೊಟ್ಟರೂ, ಯಾರಿಗೆ ಎಷ್ಟು ಅಂಕ ಬರುತ್ತದೆಯೋ ಅಷ್ಟೇ ಬರುವುದು, ಬುದ್ಧಿವಂತರು ಹೇಗಾದ್ರೂ ಬರೆಯುತ್ತಾರೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತೆ ಮೊದಲೇ ಪತ್ರಿಕೆ ಪಡೆದುಕೊಂಡವನಿಗೆ ಸಿಕ್ಕಿದ್ದು ಕೇವಲ 107 ಅಂಕ!
ಯಾರೀ ವಿದ್ಯಾರ್ಥಿ?
720 ರಲ್ಲಿ ಕೇವಲ 107 ಅಂಕಗಳನ್ನು ಗಳಿಸಿದ್ದಾನೆ ಈ ವಿದ್ಯಾರ್ಥಿ. ವರದಿಗಳ ಪ್ರಕಾರ, ರಾಜಸ್ಥಾನದ ಸಿಕಾರ್ನ ದಿನೇಶ್ ಬಿವಾಲ್ ಎಂಬವರು ಪರೀಕ್ಷೆಗೆ ಮುನ್ನ ತಮ್ಮ ಮಗ ರಿಷಿ ಬಿವಾಲ್ಗೆ ಸೋರಿಕೆಯಾದ ನೀಟ್ ಪತ್ರಿಕೆಯನ್ನು ಪಡೆಯಲು 10 ಲಕ್ಷ ರೂಪಾಯಿ ನೀಡಿದ್ದರು. ಆದರೆ ಕೇವಲ 107 ಅಂಕಗಳನ್ನು ಗಳಿಸಿರುವುದು ಈಗ ವೈರಲ್ ಆಗಿದೆ.
ಸಿಬಿಐ ತನಿಖೆ
ಮಧ್ಯವರ್ತಿಗಳು, ತರಬೇತಿ ಸಂಪರ್ಕಗಳು ಮತ್ತು ಪ್ರಶ್ನೆ ಪತ್ರಿಕೆಗಳ ಡಿಜಿಟಲ್ ಹಂಚಿಕೆಗೆ ಸಂಬಂಧಿಸಿದ ದೊಡ್ಡ ಜಾಲದ ಬಗ್ಗೆ ಸಿಬಿಐ ಈಗ ತನಿಖೆ ನಡೆಸುತ್ತಿದೆ. ಅಧಿಕಾರಿಗಳು ಚಾಟ್ಗಳು, ಹಣದ ಹಾದಿಗಳು ಮತ್ತು ಇತರ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ, ಶೀಘ್ರದಲ್ಲೇ ಹೆಚ್ಚಿನ ಬಂಧನಗಳನ್ನು ನಿರೀಕ್ಷಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

