- Home
- News
- India News
- ಫ್ಲೈಟ್ ವಿಳಂಬದಿಂದ ಹಲಸಿನ ಸಸಿ ನಾಶ, ರೈತನಿಗೆ ಭಾರೀ ಪರಿಹಾರ ನೀಡುವಂತೆ ಏರ್ಏಷ್ಯಾಗೆ ಸೂಚಿಸಿದ ಕೋರ್ಟ್
ಫ್ಲೈಟ್ ವಿಳಂಬದಿಂದ ಹಲಸಿನ ಸಸಿ ನಾಶ, ರೈತನಿಗೆ ಭಾರೀ ಪರಿಹಾರ ನೀಡುವಂತೆ ಏರ್ಏಷ್ಯಾಗೆ ಸೂಚಿಸಿದ ಕೋರ್ಟ್
ವಿಮಾನ ವಿಳಂಬದಿಂದಾಗಿ ಕನೆಕ್ಟಿಂಗ್ ಫ್ಲೈಟ್ ತಪ್ಪಿ, ಇಂಡೋನೇಷ್ಯಾದಿಂದ ತರುತ್ತಿದ್ದ ಅಪರೂಪದ ಹಲಸಿನ ಸಸಿ ನಾಶವಾದ ಕಾರಣ ರೈತರೊಬ್ಬರು ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ, ಕೇರಳದ ಗ್ರಾಹಕ ನ್ಯಾಯಾಲಯವು ಏರ್ಏಷ್ಯಾ ಸಂಸ್ಥೆಗೆ ಸೇವಾ ನ್ಯೂನತೆಗಾಗಿ ₹90,750 ಪರಿಹಾರ ನೀಡುವಂತೆ ಆದೇಶಿಸಿದೆ.

ಏರ್ಏಷ್ಯಾಗೆ ಭಾರೀ ದಂಡ ವಿಧಿಸಿದ ಕೋರ್ಟ್
ವಿಮಾನ ವಿಳಂಬ ಹಾಗೂ ಸಂಪರ್ಕ ವಿಮಾನ (Connecting Flight) ತಪ್ಪಿದ ಕಾರಣ ತಾನು ತರುತ್ತಿದ್ದ ಅಪರೂಪದ ಹೈಬ್ರಿಡ್ ಹಲಸಿನ ತಳಿಯ ಸಸಿ ನಾಶವಾಗಲು ಕಾರಣವಾದ 'ಏರ್ಏಷ್ಯಾ ಇಂಡಿಯಾ ಲಿಮಿಟೆಡ್' (AirAsia India Limited) ಸಂಸ್ಥೆಗೆ ಕೇರಳದ ಪಾಲಕ್ಕಾಡ್ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗವು ಬರೋಬ್ಬರಿ 90,750 ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ. ಗ್ರಾಹಕ ಸೇವಾ ನ್ಯೂನತೆಗಾಗಿ ವಿಮಾನಯಾನ ಸಂಸ್ಥೆಯೇ ಹೊಣೆ ಎಂದು ಆದೇಶ ನೀಡಿದೆ.
ಗ್ರಾಹಕ ನ್ಯಾಯಾಲಯದ ಪೀಠದಿಂದ ಮಹತ್ವದ ಆದೇಶ
ಹೈಬ್ರಿಡ್ ಹಣ್ಣುಗಳ ತಳಿಗಳ ಕೃಷಿ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಪಾಲಕ್ಕಾಡ್ ಮೂಲದ ರೈತರೊಬ್ಬರು ಏರ್ಏಷ್ಯಾ ಸಂಸ್ಥೆಯ ವಿರುದ್ಧ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ವಿನಯ್ ಮೆನನ್ ವಿ ಮತ್ತು ಸದಸ್ಯರಾದ ವಿದ್ಯಾ ಎ ಹಾಗೂ ಕೃಷ್ಣನ್ಕುಟ್ಟಿ ಎನ್ಕೆ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ಹೊರಡಿಸಿದೆ. ವಿಮಾನಯಾನ ಸಂಸ್ಥೆಯ ಬೇಜವಾಬ್ದಾರಿತನದಿಂದ ದೂರುದಾರರಿಗೆ ಆರ್ಥಿಕ ನಷ್ಟ ಮತ್ತು ತೀವ್ರ ಮಾನಸಿಕ ಕಿರಿಕಿರಿ ಉಂಟಾಗಿರುವುದು ಸ್ಪಷ್ಟವಾಗಿದ್ದು, ಅದಕ್ಕಾಗಿ ಕಂಪನಿಯು ಸೂಕ್ತ ಪರಿಹಾರ ನೀಡಲೇಬೇಕು ಎಂದು ಪೀಠವು ತೀರ್ಪಿನಲ್ಲಿ ಹೇಳಿದೆ.
ಇಂಡೋನೇಷ್ಯಾದಿಂದ ಹಲಸಿನ ಸಸಿ ತರಲು ಹೋಗಿದ್ದ ರೈತ
ದೂರಿನ ವಿವರಗಳ ಪ್ರಕಾರ, ಈ ಸಂಶೋಧಕ ರೈತರು ತಮ್ಮ ತೋಟಕ್ಕಾಗಿ ಅಪರೂಪದ ಹೈಬ್ರಿಡ್ ತಳಿಯ ಹಲಸಿನ ಸಸಿಯೊಂದನ್ನು ಖರೀದಿಸಲು 2025 ರ ಆಗಸ್ಟ್ನಲ್ಲಿ ಕೊಚ್ಚಿಯಿಂದ ಕೌಲಾಲಂಪುರ್ ಮೂಲಕ ಇಂಡೋನೇಷ್ಯಾಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ, ಅವರು ಮರಳಿ ಬರುವ ಪ್ರಯಾಣದ ವೇಳೆ ಇಂಡೋನೇಷ್ಯಾದ ಮೇದಾನ್-ಕುವಾಲನಾಮುನಿಂದ ಕೌಲಾಲಂಪುರಕ್ಕೆ ಬರಬೇಕಾಗಿದ್ದ ಏರ್ಏಷ್ಯಾ ವಿಮಾನವು ಹಲವು ಗಂಟೆಗಳ ಕಾಲ ವಿಳಂಬವಾಗಿತ್ತು. ಈ ಕಾರಣದಿಂದಾಗಿ, ಕೌಲಾಲಂಪುರದಲ್ಲಿ ಮುಂದಿನ ಕೊಚ್ಚಿ ವಿಮಾನ ಹಿಡಿಯಲು ಅವರಿಗೆ 3 ಗಂಟೆಗಳಿಗೂ ಹೆಚ್ಚು ಸಮಯಾವಕಾಶ ಇದ್ದರೂ ಸಹ, ಅವರು ಕನೆಕ್ಟಿಂಗ್ ಫ್ಲೈಟ್ ಅನ್ನು ತಪ್ಪಿಸಿಕೊಳ್ಳಬೇಕಾಯಿತು.
ವಿಮಾನಯಾನ ಸಿಬ್ಬಂದಿಯಿಂದ ತಪ್ಪು ಮಾಹಿತಿ ಹಾಗೂ ದಾರಿತಪ್ಪಿಸುವ ಯತ್ನ
ಕೌಲಾಲಂಪುರ್ ವಿಮಾನ ನಿಲ್ದಾಣವನ್ನು ತಲುಪಿದ ರೈತರು, ತಕ್ಷಣವೇ ಏರ್ಏಷ್ಯಾ ಸಿಬ್ಬಂದಿಯನ್ನು ಸಂಪರ್ಕಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದ್ದರು. ತಾವು ತರುತ್ತಿರುವ ಹಲಸಿನ ಸಸಿ ಅತ್ಯಂತ ಸೂಕ್ಷ್ಮವಾಗಿದ್ದು, ಒಣಗಿ ಹೋಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಹಣ ಪಾವತಿಸಲು ಸಿದ್ಧರಿರುವುದಾಗಿಯೂ ತಿಳಿಸಿದ್ದರು. ಆದರೆ ಸಿಬ್ಬಂದಿಗಳು, ಕೊಚ್ಚಿಗೆ ಮುಂದಿನ ವಿಮಾನವು ಮೂರು ದಿನಗಳ ನಂತರವೇ ಲಭ್ಯವಿದೆ ಎಂದು ತಪ್ಪು ಮಾಹಿತಿ ನೀಡಿ ಕೈತೊಳೆದುಕೊಂಡಿದ್ದರು. ಆದರೆ ಜಾಣ ರೈತರು ಮರುದಿನವೇ ಲಭ್ಯವಿದ್ದ ಮತ್ತೊಂದು ಏರ್ಏಷ್ಯಾ ವಿಮಾನದಲ್ಲಿ ತಾವೇ ಸ್ವತಃ ಟಿಕೆಟ್ ಬುಕ್ ಮಾಡಿ ಕೊಚ್ಚಿ ತಲುಪುವಲ್ಲಿ ಯಶಸ್ವಿಯಾಗಿದ್ದರು.
ಸಸಿ ನಾಶ ಹಾಗೂ ವಿಮಾನಯಾನ ಸಂಸ್ಥೆಯ ಬೇಜವಾಬ್ದಾರಿತನ
ವಿಮಾನ ವಿಳಂಬ ಹಾಗೂ ಏರ್ಏಷ್ಯಾ ಸಿಬ್ಬಂದಿಯಿಂದ ಸಮಯಕ್ಕೆ ಸರಿಯಾಗಿ ನೆರವು ಸಿಗದ ಕಾರಣ, ರೈತರು ತರುತ್ತಿದ್ದ ಅಪರೂಪದ ಹಲಸಿನ ಸಸಿ ಸಂಪೂರ್ಣವಾಗಿ ನಾಶವಾಗಿ ಮೃತಪಟ್ಟಿತ್ತು. ಇದರಿಂದಾಗಿ ಅವರ ಇಡೀ ವಿದೇಶಿ ಪ್ರವಾಸದ ಉದ್ದೇಶವೇ ವಿಫಲಗೊಂಡು ಭಾರಿ ಆರ್ಥಿಕ ನಷ್ಟವಾಗಿತ್ತು, ಜೊತೆಗೆ ಹೆಚ್ಚುವರಿ ಪ್ರಯಾಣ ಮತ್ತು ವಸತಿ ವೆಚ್ಚದ ಹೊರೆಯೂ ಬಿದ್ದಿತ್ತು. ಈ ಕುರಿತು ಗ್ರಾಹಕ ಆಯೋಗವು ಏರ್ಏಷ್ಯಾ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದರೂ ಸಹ, ಕಂಪನಿಯ ಪರವಾಗಿ ಯಾರೂ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ ಅಥವಾ ಯಾವುದೇ ಲಿಖಿತ ಪ್ರತಿಕ್ರಿಯೆಯನ್ನೂ ಸಲ್ಲಿಸಲಿಲ್ಲ. ಹೀಗಾಗಿ ಆಯೋಗವು ಕಂಪನಿಯ ಗೈರುಹಾಜರಿಯಲ್ಲಿ (Ex-parte) ವಿಚಾರಣೆ ನಡೆಸಿ ತೀರ್ಪು ನೀಡಿದೆ.
₹90,750 ಪರಿಹಾರದ ಸಂಪೂರ್ಣ ವಿವರ ಮತ್ತು 45 ದಿನಗಳ ಗಡುವು
ಟಿಕೆಟ್ಗಳು ಮತ್ತು ಪ್ರಯಾಣದ ದಾಖಲೆಗಳು ಸೇರಿದಂತೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಆಯೋಗವು, ವಿಮಾನ ವಿಳಂಬ ಮತ್ತು ಸಹಾಯ ಮಾಡಲು ನಿರಾಕರಿಸಿದ್ದು 'ಸೇವಾ ನ್ಯೂನತೆ' ಎಂದು ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಏರ್ಏಷ್ಯಾ ಸಂಸ್ಥೆಗೆ ಈ ಕೆಳಗಿನಂತೆ ಒಟ್ಟು ₹90,750 ಪಾವತಿಸಲು ಆದೇಶಿಸಿದೆ. ಇದರಲ್ಲಿ ₹30,750 ಟಿಕೆಟ್ ದರದ ಮರುಪಾವತಿ ಆಗಿದ್ದರೆ, ₹25,000 ಹೆಚ್ಚುವರಿ ಪ್ರಯಾಣ ಮತ್ತು ವಸತಿ ವೆಚ್ಚವಾಗಿದೆ. ₹25,000 ಹಣವನನು ಸೇವಾ ನ್ಯೂನತೆಯ ಪರಿಹಾರ (ಮಾನಸಿಕ ಯಾತನೆಗೆ) ಎಂದು ತಿಳಿಸಲಾಗಿದೆ. ಇನ್ನು ₹10,000 ಹಣವನ್ನು ನ್ಯಾಯಾಲಯದ ವೆಚ್ಚ (Litigation Costs) ರೀತಿಯಲ್ಲಿ ನೀಡಬೇಕು ಎಂದಿದೆ. ಈ ಒಟ್ಟು ಮೊತ್ತವನ್ನು 45 ದಿನಗಳ ಒಳಗಾಗಿ ಪಾವತಿಸಬೇಕು, ಒಂದು ವೇಳೆ ತಪ್ಪಿದಲ್ಲಿ ಪೂರ್ಣ ಹಣ ಪಾವತಿಯಾಗುವವರೆಗೆ ಪ್ರತಿ ತಿಂಗಳಿಗೆ ₹500 ರಂತೆ ಹೆಚ್ಚುವರಿ ಬಡ್ಡಿಯನ್ನು ನೀಡಬೇಕಾಗುತ್ತದೆ ಎಂದು ಆಯೋಗವು ಆದೇಶ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

