ಮೇಕೆದಾಟು ಅಣೆಕಟ್ಟು ವಿವಾದಕ್ಕೆ ಸಂಬಂಧಿಸಿದಂತೆ ಹೊಸ ನ್ಯಾಯಮಂಡಳಿ ರಚಿಸಬೇಕೆಂಬ ತಮಿಳುನಾಡು ಸರ್ಕಾರದ ನಿರ್ಣಯವನ್ನು ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ವಿರೋಧಿಸಿದ್ದಾರೆ. ಈ ನಿರ್ಧಾರವು ಕರ್ನಾಟಕಕ್ಕೆ ಅನುಕೂಲ ಮಾಡಿಕೊಡಲಿದ್ದು, ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆ ತರಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಕಾನೂನು ಹೋರಾಟ ಮತ್ತು ರಾಜಕೀಯ ಒತ್ತಡದ ಮೂಲಕವೇ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ಚೆನ್ನೈ: ಮೇಕೆದಾಟು ಡ್ಯಾಂ ವಿವಾದ ಇತ್ಯರ್ಥಕ್ಕೆ ನ್ಯಾಯಾಧಿಕರಣ ರಚನೆ ಆಗಬೇಕು ಎಂಬ ತಮಿಳುನಾಡು ವಿಧಾನಸಭೆಯ ನಿರ್ಣಯಕ್ಕೆ ಪಿಎಂಕೆ ನಾಯಕ ಅನ್ಬುಮಣಿ ರಾಮದಾಸ್ ತೀವ್ರ ವಿರೋಧ ವ್ಯಕ್ತತಪಡಿಸಿದ್ದಾರೆ. ಈ ರೀತಿಯ ನಿರ್ಧಾರ ರಾಜ್ಯದ ಕಾನೂನುಬದ್ಧ ಹಕ್ಕಿನ ಜತೆ ರಾಜಿ ಮಾಡಿಕೊಳ್ಳಲಿದೆ ಮತ್ತು ಕರ್ನಾಟಕಕ್ಕೆ ಅನುಕೂಲ ಮಾಡಿಕೊಡಲಿದೆ ಎಂದು ಎಚ್ಚರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ನಿರ್ಣಯವನ್ನು ಕಳುಹಿಸಿಕೊಡುವ ಮೊದಲು ಹೊಸ ನ್ಯಾಯಮಂಡಳಿ ರಚನೆಯ ಆಗ್ರಹದ ಸಾಲುಗಳನ್ನು ತೆಗೆದುಹಾಕುವಂತೆ ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರಿಗೆ ಆಗ್ರಹಿಸಿದ್ದಾರೆ.
ಕಾವೇರಿ ನದಿ ವ್ಯಾಪ್ತಿಯಲ್ಲಿ ಯಾವುದೇ ಹೊಸ ನಿರ್ಮಾಣ ಯೋಜನೆಗಳನ್ನು ಕೈಗೆತ್ತುಕೊಳ್ಳುವ ಮೊದಲು ಕಾವೇರಿ ಕಣಿವೆಯ ಮೇಲ್ಭಾಗದ ರಾಜ್ಯಗಳು ಕೆಳಭಾಗದ ರಾಜ್ಯದ ಅನುಮತಿ ಪಡೆಯುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಹಾಗೂ ಕಾವೇರಿ ನ್ಯಾಯಮಂಡಳಿ ಸ್ಪಷ್ಟವಾಗಿ ಹೇಳಿದೆ. ಇಷ್ಟಿದ್ದರೂ ತಮಿಳುನಾಡು ಹೊಸ ನ್ಯಾಯಮಂಡಳಿಗೆ ಬೇಡಿಕೆ ಇಡುವುದು ಅನಗತ್ಯ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಂತೆ ಎಂದಿದ್ದಾರೆ.
ಪ್ರಸ್ತಾಪ ಅನಗತ್ಯ ಹಾಗೂ ವಿರೋಧಾತ್ಮಕ
ತಮಿಳುನಾಡು ಶಾಸನ ಸಭೆಯ ಪ್ರಸ್ತಾಪವು ಅನಗತ್ಯ ಹಾಗೂ ವಿರೋಧಾತ್ಮಕ ಎಂದು ಕರೆದಿರುವ ಅನ್ಬುಮಣಿ ಅವರು, . ನ್ಯಾಯಮಂಡಳಿ ರಚನೆಯಾದರೆ ಕರ್ನಾಟಕಕ್ಕೆ ಹೊಸ ವಾದ ಮಾಡಲು ಅವಕಾಶ ಸಿಗುತ್ತದೆ ಹಾಗೂ ತೀರ್ಪು ನಮ್ಮ ವಿರುದ್ಧವೇ ಬರಬಹುದು. ಇದು ಒಂದು ರೀತಿಯಲ್ಲಿ ನಮ್ಮ ತಲೆಯನ್ನು ನಾವೇ ಮೊಸಳೆಯ ಬಾಯಿಗಿಟ್ಟಂತೆ ಎಂದು ಹೇಳಿದ್ದಾರೆ.
ಹೊಸ ನ್ಯಾಯಮಂಡಳಿ
ಪ್ರತ್ಯೇಕ ನ್ಯಾಯಮಂಡಳಿ ರಚಿಸುವ ನಿರ್ಣಯವನ್ನು ಈಗಾಗಲೇ ರೈತರು ವಿರೋಧಿಸಿದ್ದಾರೆ ಎಂದಿರುವ ಅವರು, ಮೇಕೆದಾಟು ವಿಚಾರದಲ್ಲಿ ನ್ಯಾಯವು ಸ್ಪಷ್ಟವಾಗಿ ತಮಿಳುನಾಡು ಪರ ಇರುವಾಗ ನಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಬದಲು ಹೊಸ ನ್ಯಾಯಮಂಡಳಿ ಮೂಲಕ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರುವುದು ನಮ್ಮ ರಾಜ್ಯದ ಹಿತಾಸಕ್ತಿ ಅಡವಿಟ್ಟಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೇಕೆದಾಟುಗೆ ಸಂಬಂಧಿಸಿ ತಮಿಳುನಾಡಿನ ಹಕ್ಕುಗಳನ್ನು ನಿಯಮಿತ ಕಾನೂನು ಹೋರಾಟದಿಂದ ಮತ್ತು ರಾಜಕೀಯ ಒತ್ತಡದಿಂದ ಮಾತ್ರ ರಕ್ಷಿಸಲು ಸಾಧ್ಯ. ಪಿಎಂಕೆ ಸೇರಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ತಮಿಳುನಾಡು ಸರ್ಕಾರದ ಪ್ರಯತ್ನದ ಬೆನ್ನಿಗೆ ನಿಲ್ಲಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Mekedatu ಯೋಜನೆಯಿಂದ ಒಂದು ಬಕೆಟ್ ನೀರೂ ನೀರಾವರಿಗೆ ಬಳಸಲ್ಲ: ಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ


