ಏರ್ ಇಂಡಿಯಾ ವಿಮಾನ ದುರಂತ: ತಿಂಗಳ ಹಿಂದೆ ನಿಶ್ಚಿತಾರ್ಥವಾಗಿದ್ದ ನವ ಜೋಡಿ ಸಾವು!
ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕ ಮತ್ತು ಯುವತಿ ಸಾವನ್ನಪ್ಪಿದ್ದಾರೆ. ಒಂದು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು ಭಾರತಕ್ಕೆ ಬಂದಿದ್ದರು.

ಜೂನ್ 12ರ ಗುರುವಾರ ಅಹಮದಾಬಾದ್ನಲ್ಲಿ ಲಂಡನ್ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಿತು. ಈ ದುರಂತ ಅಪಘಾತದಲ್ಲಿ, ಪ್ರಯಾಣಿಕರು, ಸಿಬ್ಬಂದಿ, ಪೈಲಟ್ಗಳು ಮತ್ತು ವಿಮಾನ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿ ಹೊಡೆದ ಸ್ಥಳದಲ್ಲಿದ್ದ ಜನರು ಸೇರಿದಂತೆ 250 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಅಪಘಾತ ನಡೆದ ಒಂದು ದಿನದ ಬಳಿಕ ಹೃದಯ ಬಿರಿಯುವಂಥ ವಿಚಾರಗಳು ಬೆಳಕಿಗೆ ಬರಲು ಆರಂಭಿಸಿದೆ. ಅಂತಹ ಒಂದು ಕಥೆ ಗಧಾಡಾ ತಾಲ್ಲೂಕಿನ ಅಡ್ತಾಲಾ ಗ್ರಾಮದ ಒಬ್ಬ ಯುವಕ ಮತ್ತು ಯುವತಿಯದ್ದಾಗಿದೆ.
ಲಂಡನ್ನಲ್ಲಿ ವಾಸಿಸುವ ಮತ್ತು ಮೂಲತಃ ಬೋಟಾಡ್ ಜಿಲ್ಲೆಯ ಗಧಾಡಾ ತಾಲ್ಲೂಕಿನ ಅಡ್ತಾಲಾ ಗ್ರಾಮದವರಾದ 27 ವರ್ಷದ ಹಾರ್ದಿಕ್ ದೇವರಾಜ್ಭಾಯ್ ಅವಯ್ಯಾ ಮತ್ತು ಅವರ ನಿಶ್ಚಿತ ವಧು ವಿಭೂತಿಬೆನ್ ಪಟೇಲ್ ಕೂಡ ಜೂನ್ 12 ರಂದು ಏರ್ ಇಂಡಿಯಾ ವಿಮಾನದಲ್ಲಿ ಅಹಮದಾಬಾದ್ನಿಂದ ಲಂಡನ್ಗೆ ವಾಪಾಸಾಗಲು ಹೊರಟಿದ್ದರು. ಈ ಜೋಡಿ ಒಂದು ತಿಂಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮೂಲತಃ ಸೂರತ್ನವರಾಗಿದ್ದಾರೆ. ಗುರುವಾರ ಬೆಳಗ್ಗೆ ಸೂರತ್ನಿಂದ ಅಹಮದಾಬಾದ್ಗೆ ವಿಮಾನ ಪ್ರಯಾಣಕ್ಕಾಗಿ ಬಂದಿದ್ದರು. ಸಂತೋಷದ ಭವಿಷ್ಯದ ಕನಸುಗಳೊಂದಿಗೆ ಲಂಡನ್ಗೆ ಮರಳುತ್ತಿದ್ದ ಈ ಜೋಡಿ ತಮ್ಮ ಕುಟುಂಬವನ್ನು ಮತ್ತೆ ಎಂದಿಗೂ ಭೇಟಿಯಾಗುವುದಿಲ್ಲ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.
ಒಂದು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಜೂನ್ 5 ರಂದು ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಲಂಡನ್ನಿಂದ ಭಾರತಕ್ಕೆ ಬಂದಿದ್ದರು. ಸಮಾರಂಭದಲ್ಲಿ ಭಾಗವಹಿಸಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾದ ನಂತರ, ಇಬ್ಬರೂ ಏರ್ ಇಂಡಿಯಾ ವಿಮಾನದಲ್ಲಿ ಲಂಡನ್ಗೆ ತೆರಳುವವರಿದ್ದರು. ಹಾರ್ದಿಕ್ಭಾಯ್ ಅವಯಾ ಲಂಡನ್ನಲ್ಲಿಯೇ ವಾಸ ಮಾಡುತ್ತಿದ್ದಾರೆ.
ಸೂರತ್ನ ಕಮ್ರೆಜ್ ತಾಲ್ಲೂಕಿನ ಉಂಭೇಲ್ ಗ್ರಾಮದ ಮೂಲದ ವಿಭೂತಿ ಪಟೇಲ್ (27), ಲೀಸೆಸ್ಟರ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಯುಕೆಗೆ ತೆರಳುವ ಮೊದಲು ಸೂರತ್ನ ಕಾಲೇಜಿನಿಂದ ಭೌತಚಿಕಿತ್ಸೆಯಲ್ಲಿ ಪದವಿ ಪಡೆದಿದ್ದರು. ಈ ವೇಳೆ ಆಕೆ ಬೋಟಾಡ್ನ ಸಹಪಾಠಿ ಹಾರ್ದಿಕ್ ಅವಯಾಳನ್ನು ಭೇಟಿಯಾದಳು. ಇಬ್ಬರೂ ಪ್ರೀತಿಯಲ್ಲಿ ಬಿದ್ದ ಬಳಿಕ, ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡು ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದ್ದರು.
"ಅವರು ನಿಶ್ಚಿತಾರ್ಥ ಮಾಡಿಕೊಳ್ಳಲು 10 ದಿನಗಳ ರಜೆಯ ಮೇಲೆ ಊರಿಗೆ ಬಂದಿದ್ದರು" ಎಂದು ಉಂಭೇಲ್ ಗ್ರಾಮದ ಉಪ ಸರಪಂಚ್ ದರ್ಶನ್ ಪಟೇಲ್ ತಿಳಿಸಿದ್ದಾರೆ. "ವಿಭೂತಿ ಒಂದು ಸಮಯದಲ್ಲಿ ಉಂಭೇಲ್ ಗ್ರಾಮ ಪಂಚಾಯತ್ ಸದಸ್ಯರಾಗಿದ್ದರು ಮತ್ತು ಪ್ರತಿಭಾನ್ವಿತ ಮತ್ತು ಉಜ್ವಲ ವಿದ್ಯಾರ್ಥಿ. ಯುಕೆಗೆ ಮರಳಲು AI-171 ಅನ್ನು ಹತ್ತುವ ಮೊದಲು ದಂಪತಿಗಳು ಕಳೆದ ವಾರ ಉಂಭೇಲ್ನಲ್ಲಿ ತಮ್ಮ ನಿಶ್ಚಿತಾರ್ಥವನ್ನು ಆಚರಿಸಿಕೊಂಡಿದ್ದರು." ಮನೆಯಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿ ಅರಳಿದ ಅವರ ಪ್ರೇಮಕಥೆಯು ಎರಡೂ ಕುಟುಂಬಗಳ ಆಶೀರ್ವಾದವನ್ನು ಗಳಿಸಿತ್ತು. ವಿಭೂತಿಯ ತಂದೆ ಸ್ಥಳೀಯ ಬಾಳೆಹಣ್ಣಿನ ಸಹಕಾರಿ ಸಂಘದಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ತಂಗಿ ಮತ್ತು ಸಹೋದರರನ್ನು ಅಗಲಿದ್ದಾರೆ.
ಇನ್ನೊಂದೆಡೆ ಹಾರ್ದಿಕ್, ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ, ಸೂರತ್ನಲ್ಲಿನ ತನ್ನ ಸಹೋದರ ಮನೆಗೆ ಕೆಲವು ದಿನಗಳ ಹಿಂದೆ ತೆರಳಿದ್ದರು. ಗುರುವಾರ ಅವರು ಸೂರತ್ನಿಂದ ಅಹಮದಾಬಾದ್ಗೆ ಬಂದಿದ್ದರು ಎನ್ನಲಾಗಿದೆ. ವಿಮಾನ ಏರುವ ಮುನ್ನ ತನ್ನ ತಂದೆ ದೇವರಾಜ್ಭಾಯ್ಗೆ ಫೋನ್ ಮಾಡಿ ತಿಳಿಸಿದ್ದರು. ಸೆಕ್ಯುರಿಟಿ ಚೆಕ್ ಎಲ್ಲಾ ಮುಗಿಸಿಕೊಂಡು ವಿಮಾನ ಏರಿದ ಬಳಿಕವೂ ತನ್ನ ತಂದೆಗೆ ಕರೆ ಮಾಡಿ ತಾನು ವಿಮಾನ ಏರಿದ್ದಾಗಿ ತಿಳಿಸಿದ್ದರು.
ಆದರೆ, ವಿಮಾನ ಟೇಕ್ ಆಫ್ ಆದ ಕೆಲ ಕ್ಷಣದಲ್ಲಿಯೇ ದುರಂತಕ್ಕೆ ಈಡಾಗಿದೆ. ಈ ವೇಳೆ ದೇವರಾಜ್ಭಾಯ್ ಮಗನಿಗೆ ಕರೆ ಮಾಡಲು ಪ್ರಯತ್ನಿಸಿದರಾದರೂ, ಆ ವೇಳೆಗಾಗಲೇ ವಿಮಾನ ಪತನದ ದುರಂತಕ್ಕೆ ಈಡಾಗಿತ್ತು. ವಿಮಾನ ಅಪಘಾತದ ಸುದ್ದಿ ತಿಳಿದ ನಂತರ ಹಾರ್ದಿಕ್ಭಾಯ್ ಅವರ ಕುಟುಂಬ ಮತ್ತು ಅವರ ಹುಟ್ಟೂರು ಅಡ್ತಾಲಾದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ

