- Home
- Entertainment
- CM Vijay: ದಳಪತಿ ವಿಜಯ್ ರಾಜಕೀಯ ಗೆಲುವು ದಿಢೀರ್ ಆಗಿದ್ದಲ್ಲ; ಅದಕ್ಕೂ ಮೊದಲು ಏನೆಲ್ಲಾ ಮಾಡಿದ್ರು ಗೊತ್ತಾ?
CM Vijay: ದಳಪತಿ ವಿಜಯ್ ರಾಜಕೀಯ ಗೆಲುವು ದಿಢೀರ್ ಆಗಿದ್ದಲ್ಲ; ಅದಕ್ಕೂ ಮೊದಲು ಏನೆಲ್ಲಾ ಮಾಡಿದ್ರು ಗೊತ್ತಾ?
ವಿಜಯ್ ಅವರ ವ್ಯಾಪ್ತಿ ಕೇವಲ ತಮಿಳುನಾಡಿಗೆ ಸೀಮಿತವಾಗಿರಲಿಲ್ಲ. 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ದೆಹಲಿಯಲ್ಲಿ ನಡೆಸಿದ ಹೋರಾಟಕ್ಕೆ ವಿಜಯ್ ಖುದ್ದಾಗಿ ಹೋಗಿ ಬೆಂಬಲ ನೀಡಿದ್ದರು. ಇಷ್ಟೇ ಅಲ್ಲ, ಇನ್ನೂ ಏನೇನೋ ಇದೆ, ನೋಡಿ..

ರೀಲ್ ಹೀರೋ ಟು ರಿಯಲ್ ಸಿಎಂ: ವಿಜಯ್ ಅವರ ಈ ಐತಿಹಾಸಿಕ ಗೆಲುವಿನ ಹಿಂದೆ 15 ವರ್ಷಗಳ ಬಿಗ್ ಪ್ಲಾನ್ ಇದೆ!
ತಮಿಳುನಾಡಿನ ಇತಿಹಾಸದಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗಿದೆ. ಚಿತ್ರಮಂದಿರಗಳಲ್ಲಿ ಸೀಟಿ ಹೊಡೆಸುತ್ತಿದ್ದ 'ಬಾಕ್ಸ್ ಆಫೀಸ್ ಸುಲ್ತಾನ್' ದಳಪತಿ ವಿಜಯ್ (Thalapathy Vijay) ಇಂದು ತಮಿಳುನಾಡಿನ ಮುಖ್ಯಮಂತ್ರಿಯಾಗಿ ರಾಜಸಿಂಹಾಸನವನ್ನೇರಿದ್ದಾರೆ.
ಆದರೆ, ಬೆಳ್ಳಿತೆರೆಯಿಂದ ಹಿಡಿದು ಮುಖ್ಯಮಂತ್ರಿ ಗದ್ದುಗೆಯವರೆಗಿನ ಈ ಹಾದಿ ಅಷ್ಟು ಸುಲಭವಾಗಿರಲಿಲ್ಲ. ವಿಜಯ್ ಅವರ ಈ ರಾಜಕೀಯ ಗೆಲುವು ದಿಢೀರ್ ಆಗಿ ಸಂಭವಿಸಿದ್ದಲ್ಲ; ಇದರ ಹಿಂದೆ ಹದಿನೈದು ವರ್ಷಗಳ ಸುದೀರ್ಘ ಹೋರಾಟ, ಬೆವರು ಮತ್ತು ಜನರೊಂದಿಗಿನ ಗಾಢ ಬಾಂಧವ್ಯವಿದೆ.
ಹೋರಾಟದ ಕಿಡಿ ಹೊತ್ತಿದ್ದು 2008ರಲ್ಲಿ!
ಸಿನಿಮಾಗಳಲ್ಲಿ ಅನ್ಯಾಯದ ವಿರುದ್ಧ ಹೋರಾಡುವ ವಿಜಯ್, ನಿಜ ಜೀವನದಲ್ಲಿಯೂ ಸಮಾಜಕ್ಕಾಗಿ ಬೀದಿಗಿಳಿಯಲು ಆರಂಭಿಸಿದ್ದು 2008ರಲ್ಲಿ. ಶ್ರೀಲಂಕಾದ ಅಂತರ್ಯುದ್ಧ ತಾರಕಕ್ಕೇರಿದ್ದಾಗ, ತಮಿಳು ಬಾಂಧವರ ಪರವಾಗಿ ವಿಜಯ್ ಚೆನ್ನೈನಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ನಡೆಸಿದ್ದರು.
ಸಾವಿರಾರು ಅಭಿಮಾನಿಗಳು ಅಂದು ಅವರ ಜೊತೆ ಕೈಜೋಡಿಸಿದ್ದರು. ಇದು ಅವರ ರಾಜಕೀಯ ಆಸಕ್ತಿಯ ಮೊದಲ ಮುನ್ಸೂಚನೆಯಾಗಿತ್ತು. ನಂತರ 2009ರಲ್ಲಿ 'ವಿಜಯ್ ಮಕ್ಕಳ್ ಇಯಕಮ್' (VMI) ಸಂಘಟನೆಯನ್ನು ಸ್ಥಾಪಿಸುವ ಮೂಲಕ ಕೇವಲ ಫ್ಯಾನ್ ಕ್ಲಬ್ ಆಗಿದ್ದ ಸಂಘವನ್ನು ಸಮಾಜಸೇವಾ ಪಡೆಯನ್ನಾಗಿ ಬದಲಿಸಿದರು.
ಅಣ್ಣಾ ಹಜಾರೆ ಹೋರಾಟದಿಂದ ಮೀನುಗಾರರ ಪ್ರತಿಭಟನೆವರೆಗೆ:
ವಿಜಯ್ ಅವರ ವ್ಯಾಪ್ತಿ ಕೇವಲ ತಮಿಳುನಾಡಿಗೆ ಸೀಮಿತವಾಗಿರಲಿಲ್ಲ. 2011ರಲ್ಲಿ ಭ್ರಷ್ಟಾಚಾರದ ವಿರುದ್ಧ ಅಣ್ಣಾ ಹಜಾರೆ ದೆಹಲಿಯಲ್ಲಿ ನಡೆಸಿದ ಹೋರಾಟಕ್ಕೆ ವಿಜಯ್ ಖುದ್ದಾಗಿ ಹೋಗಿ ಬೆಂಬಲ ನೀಡಿದ್ದರು. 2012ರಲ್ಲಿ ನಾಗಪಟ್ಟಣಂನಲ್ಲಿ ಮೀನುಗಾರರ ಬಂಧನದ ವಿರುದ್ಧ ಧ್ವನಿ ಎತ್ತಿದರು. ಸಿನಿಮಾ ಶೂಟಿಂಗ್ ನಡುವೆಯೂ ಸಮಾಜದ ಪ್ರತಿಯೊಂದು ಸಮಸ್ಯೆಗೆ ಅವರು ಸ್ಪಂದಿಸುತ್ತಲೇ ಬಂದಿದ್ದರು.
ಜನರ ಮನ ಗೆದ್ದ 'ಮಧ್ಯರಾತ್ರಿ'ಯ ಭೇಟಿಗಳು:
ವಿಜಯ್ ಅವರಲ್ಲಿರುವ ಮಾನವೀಯತೆ ಜನರಿಗೆ ಹತ್ತಿರವಾಗಿದ್ದು 2017 ಮತ್ತು 2018ರ ಘಟನೆಗಳ ಮೂಲಕ. ನೀಟ್ ವಿರೋಧಿ ಹೋರಾಟದಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಅನಿತಾ ಮನೆಗೆ ಹೋಗಿ ಸಾಂತ್ವನ ಹೇಳಿದ್ದಾಗಲಿ ಅಥವಾ ಜಲ್ಲಿಕಟ್ಟು ಪ್ರತಿಭಟನೆಯಲ್ಲಿ ಸಾಮಾನ್ಯರಂತೆ ಮುಖ ಮುಚ್ಚಿಕೊಂಡು ಮರೀನಾ ಬೀಚ್ನಲ್ಲಿ ಕುಳಿತಿದ್ದಾಗಲಿ—ವಿಜಯ್ ಜನರ ಪಲ್ಸ್ ಅರಿತಿದ್ದರು. ವಿಶೇಷವೆಂದರೆ, ತೂತುಕುಡಿ ಗುಂಡಿನ ದಾಳಿಯ ಸಂತ್ರಸ್ತರನ್ನು ಭೇಟಿಯಾಗಲು ಅವರು ಮಧ್ಯರಾತ್ರಿ ಬೈಕ್ನಲ್ಲಿ ಹೋಗಿ ಯಾರಿಗೂ ತಿಳಿಯದಂತೆ ಆರ್ಥಿಕ ನೆರವು ನೀಡಿದ್ದರು. ಈ 'ಸೈಲೆಂಟ್' ಕೆಲಸಗಳೇ ಇಂದು ಅವರನ್ನು 'ವಾಯ್ಸ್ ಆಫ್ ತಮಿಳುನಾಡು' ಮಾಡಿದೆ.
ವ್ಯವಸ್ಥಿತ ತಯಾರಿ ಮತ್ತು ಟಿವಿಕೆ ಉದಯ:
ಕೇವಲ ಭಾವನಾತ್ಮಕವಾಗಿ ಮಾತ್ರವಲ್ಲದೆ, ಬೌದ್ಧಿಕವಾಗಿಯೂ ವಿಜಯ್ ಸಿದ್ಧರಾಗಿದ್ದರು. ಅಂಬೇಡ್ಕರ್, ಪೆರಿಯಾರ್ ಮತ್ತು ಕಾಮರಾಜ್ ಅವರ ವಿಚಾರಧಾರೆಗಳನ್ನು ಓದುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದು ಅವರ ರಾಜಕೀಯ ಸಿದ್ಧಾಂತಕ್ಕೆ ಸಾಕ್ಷಿ. 2019ರ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಗೆಲ್ಲಿಸುವ ಮೂಲಕ ಭದ್ರ ಬುನಾದಿ ಹಾಕಿದ ವಿಜಯ್, ಫೆಬ್ರವರಿ 2, 2024 ರಂದು 'ತಮಿಳುನಾಡು ವೆಟ್ರಿ ಕಳಗಂ' (TVK) ಪಕ್ಷವನ್ನು ಘೋಷಿಸಿದರು.
ಪಕ್ಷ ಘೋಷಣೆಯಾದ ನಂತರವೂ ಅವರು ಸುಮ್ಮನೆ ಕೂರಲಿಲ್ಲ. ಕಲ್ಲಕುರಿಚಿ ವಿಷಪೂರಿತ ಮದ್ಯ ದುರಂತದ ಸಂತ್ರಸ್ತರನ್ನು ಭೇಟಿಯಾದರು, ವಿಮಾನ ನಿಲ್ದಾಣ ಯೋಜನೆಯ ವಿರುದ್ಧ ಹೋರಾಡುತ್ತಿದ್ದ ರೈತರ ಪರ ನಿಂತರು. ಇದರ ಫಲವೇ ಇಂದಿನ ಈ ಭರ್ಜರಿ ಗೆಲುವು. ಅಂದು ಪ್ರತಿಭಟನಾಕಾರನಾಗಿ ಬೀದಿಯಲ್ಲಿದ್ದ ವಿಜಯ್, ಇಂದು ಆಡಳಿತಗಾರನಾಗಿ ವಿಧಾನಸೌಧದಲ್ಲಿದ್ದಾರೆ. ಇದು ದಳಪತಿಯ ಕಠಿಣ ಪರಿಶ್ರಮ ಮತ್ತು ಜನರ ನಂಬಿಕೆಗೆ ಸಿಕ್ಕ ಮಹಾ ಗೆಲುವು! ಅಂದು ಅವರು ಮಾಡಿದ್ದ ಪ್ರತಿಭಟನೆಗಳು, ಸಾಮಾಜಿಕ ಕಳಕಳಿಯೇ ಇವತ್ತು ಪವರ್ ಕೊಟ್ಟಿದ್ದು..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

