ವಿರಾಟ್ ಕೊಹ್ಲಿ ಜೊತೆ ಗಂಭೀರ್ ಮಾತೇ ಆಡಲಿಲ್ಲ! ಕೊಹ್ಲಿ-ಗಂಭೀರ್ ಕೋಲ್ಡ್ ವಾರ್ ಮತ್ತೆ ಶುರು?
ಬರ್ಮಿಂಗ್ಹ್ಯಾಮ್: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ನಡುವೆ ಮತ್ತೆ ಮನಸ್ತಾಪ ಶುರುವಾಗಿದೆಯೇ ಎನ್ನುವ ಚರ್ಚೆ ಕಾಡಲಾರಂಭಿಸಿದೆ. ಭಾರತ-ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಘಟನೆ ಚರ್ಚೆಗೆ ಗ್ರಾಸವಾಗಿದೆ.

ಕೊಹ್ಲಿ-ಗಂಭೀರ್ ನಡುವೆ ಮತ್ತೆ ಮನಸ್ತಾಪ?
ಭಾರತ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ ಎನ್ನಲಾಗುತ್ತಿದೆ. ಮಂಗಳವಾರ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಇವರಿಬ್ಬರು ಪರಸ್ಪರ ಮಾತುಕತೆ ನಡೆಸದೇ ಇರುವುದು ಚರ್ಚೆಗೆ ಗ್ರಾಸವಾಗಿದೆ.
ಕೊಹ್ಲಿ ಜತೆ ಮಾತನಾಡದ ಗಂಭೀರ್
ವರದಿಗಳ ಪ್ರಕಾರ, ಅಭ್ಯಾಸದ ವೇಳೆ ತಂಡದ ಇತರ ಸದಸ್ಯರೊಂದಿಗೆ ಗಂಭೀರ್ ಸಾಕಷ್ಟು ಸಮಯ ಚರ್ಚೆಯಲ್ಲಿ ತೊಡಗಿದ್ದರು. ನಾಯಕ ಗಿಲ್, ರೋಹಿತ್ ಶರ್ಮಾ ಹಾಗೂ ಇತರ ಪ್ರಮುಖರ ಜೊತೆ ಅವರು ಮಾತುಕತೆ ನಡೆಸಿದ್ದಾರೆ. ಆದರೆ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದರೂ ಅವರ ಬಳಿ ಗಂಭೀರ್ ತೆರಳಲಿಲ್ಲ.
ಬ್ಯಾಟಿಂಗ್ ಕೋಚ್ ಸೀತಾಂಶು ಜತೆ ಕೊಹ್ಲಿ ಪ್ರಾಕ್ಟೀಸ್
ಕೊಹ್ಲಿ ತಮ್ಮ ಬ್ಯಾಟಿಂಗ್ ಅವಧಿಯನ್ನು ಸೀತಾಂಶು ಕೊಟಕ್ ಅವರೊಂದಿಗೆ ಪೂರ್ಣಗೊಳಿಸಿದರು. ಈ ಹಿಂದೆ ಕೂಡಾ ಗಂಭೀರ್-ಕೊಹ್ಲಿ ಪಂದ್ಯದ ವೇಳೆ ಮಾತುಕತೆ ನಡೆಸುವುದನ್ನು ತಪ್ಪಿಸಿಕೊಂಡ ಬಗ್ಗೆ ವರದಿಯಾಗಿದ್ದವು.
ಮೊದಲ ಪಂದ್ಯದಲ್ಲಿ ರೋ-ಕೋ ಜೋಡಿ ಫೇಲ್
ಇನ್ನು ಇಂಗ್ಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 21 ಎಸೆತಗಳನ್ನು ಎದುರಿಸಿ 11 ರನ್ ಗಳಿಸಿ ಸ್ಯಾಮ್ ಕರ್ರನ್ಗೆ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ ಕೇವಲ ಐದು ರನ್ ಗಳಿಸಿ ಜೋಫ್ರಾ ಆರ್ಚರ್ಗೆ ವಿಕೆಟ್ ಒಪ್ಪಿಸಿದರು.
ಐಪಿಎಲ್ ಬಳಿಕ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಕೊಹ್ಲಿ:
ಇನ್ನು ವಿರಾಟ್ ಕೊಹ್ಲಿ 2026ರ ಐಪಿಎಲ್ ಟೂರ್ನಿಯ ವೇಳೆಯಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಆಫ್ಘಾನಿಸ್ತಾನ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಅಲಭ್ಯರಾಗಿದ್ದರು. ಇದೀಗ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರು ಟಿ20 ಸರಣಿಯಲ್ಲಿ ಮುಖಭಂಗ ಅನುಭವಿಸಿರುವ ಭಾರತ ತಂಡಕ್ಕೆ ಹಿರಿಯರ ಆಗಮನ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
2027ರ ಏಕದಿನ ವಿಶ್ವಕಪ್ ಆಡ್ತಾರಾ ರೋ-ಕೋ ಜೋಡಿ? ಗಿಲ್ ಹೇಳಿದ್ದೇನು?
ಅನುಭವಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ, 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಶುಭ್ಮನ್ ಗಿಲ್, '2027ರ ಏಕದಿನ ವಿಶ್ವಕಪ್ನಲ್ಲಿ ಯಾವ ಕಾಂಬಿನೇಷನ್ನಲ್ಲಿ ಕಣಕ್ಕಿಳಿದರೆ ಉತ್ತಮ ಎನ್ನುವುದರ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಯಾವ ಆಟಗಾರರು ತಂಡಕ್ಕೆ ನೆರವಾಗುತ್ತಾರೆ?, ಯಾವ ಬೌಲರ್, ಯಾವ ಆಲ್ರೌಂಡರ್ ಹಾಗೂ ಸ್ಪಿನ್ನರ್ ತಂಡದಲ್ಲಿರಬೇಕು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

