ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಜಯ ಸಾಧಿಸಿದೆ. ಜೋ ರೂಟ್ ಮತ್ತು ಲಿಯಾಮ್ ಡಾವ್ಸನ್ ಅವರ ಹೋರಾಟದ ಹೊರತಾಗಿಯೂ ಇಂಗ್ಲೆಂಡ್ 258 ರನ್ಗಳಿಗೆ ಆಲೌಟಾಯಿತು. ಶುಭ್ಮನ್ ಗಿಲ್, ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದ ಭಾರತ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಬರ್ಮಿಂಗ್ಹ್ಯಾಮ್: ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಒಂದೂ ಗೆಲುವು ಕಾಣದೆ ಕಂಗಾಲಾಗಿದ್ದ ಭಾರತ ಈಗ ಏಕದಿನ ಸರಣಿಯಲ್ಲಿ ಗೆಲುವಿನ ಆರಂಭ ಪಡೆದಿದೆ. ಮಂಗಳವಾರ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಭಾರತ 6 ವಿಕೆಟ್ ಗೆಲುವು ಸಾಧಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತು.
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 47.5 ಓವರ್ಗಳಲ್ಲಿ 258 ರನ್ಗೆ ಆಲೌಟಾಯಿತು. ವಿಕೆಟ್ ನಷ್ಟವಿಲ್ಲದೆ 61 ರನ್ ಗಳಿಸಿದ್ದ ತಂಡ ಬಳಿಕ ದಿಢೀರ್ ಕುಸಿಯಿತು. 3 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. 107 ರನ್ ಆಗುವಾಗ 6 ವಿಕೆಟ್ ಬಿತ್ತು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ಜೋ ರೂಟ್(ಔಟಾಗದೆ 76) ಹಾಗೂ ಲಿಯಾಮ್ ಡಾವ್ಸನ್(68). ಈ ಜೋಡಿ 7ನೇ ವಿಕೆಟ್ಗೆ 121 ರನ್ ಜೊತೆಯಾಟವಾಡಿತು.
ತಂಡವನ್ನು ಗೆಲ್ಲಿಸಿದ ಅಕ್ಷರ್ ಪಟೇಲ್:
ಸ್ಪರ್ಧಾತ್ಮಕ ಗುರಿಯನ್ನು ಭಾರತ 45.2 ಓವರ್ಗಳಲ್ಲಿ ಬೆನ್ನತ್ತಿ ಗೆದ್ದಿತು. ರೋಹಿತ್(11), ವಿರಾಟ್ ಕೊಹ್ಲಿ(5) ಮಿಂಚಲಿಲ್ಲ. ನಾಯಕ ಶುಭ್ಮನ್ ಗಿಲ್ 80 ರನ್ ಗಳಿಸಿದ ಬಳಿಕ ಗಾಯಗೊಂಡು ಹೊರನಡೆದರು. ಶ್ರೇಯಸ್ 35 ರನ್ ಕೊಡುಗೆ ನೀಡಿದರು. ಬಳಿಕ ಅಕ್ಷರ್ ಪಟೇಲ್(ಔಟಾಗದೆ 56), ವಾಷಿಂಗ್ಟನ್ ಸುಂದರ್(ಔಟಾಗದೆ 52) ತಂಡವನ್ನು ಗೆಲ್ಲಿಸಿದರು. ಬೌಲಿಂಗ್ನಲ್ಲಿ ನಾಲ್ಕು ವಿಕೆಟ್ ಕಬಳಿಸಿ ಮಿಂಚಿದ್ದ ಅಕ್ಷರ್ ಪಟೇಲ್, ಬ್ಯಾಟಿಂಗ್ನಲ್ಲೂ ಅಜೇಯ ಅರ್ಧಶತಕ ಸಿಡಿಸುವ ಮೂಲಕ ತಂಡವನ್ನು ಗೆಲ್ಲಿಸಿದರು.
ಭಾರತದ ಸಹಾಯಕ ಕೋಚ್ ಹುದ್ದೆ ತ್ಯಜಿಸಲು ರ್ಯಾನ್ ನಿರ್ಧಾರ: ವರದಿ
ನವದೆಹಲಿ: ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ಏಕದಿನ ಸರಣಿ ಬಳಿಕ ಟೀಂ ಇಂಡಿಯಾದ ಸಹಾಯಕ ಕೋಚ್ ರ್ಯಾನ್ ಟೆನ್ ಡೊಶ್ಯ್ಕಾಟೆ ತಮ್ಮ ಹುದ್ದೆ ತ್ಯಜಿಸಲು ನಿರ್ಧರಿಸಿದ್ದಾರೆ. ಈ ಸಂಬಂಧ ಈಗಾಗಲೇ ಬಿಸಿಸಿಐಗೆ ನೆದರ್ಲೆಂಡ್ಸ್ ಮಾಜಿ ಆಟಗಾರ ತಮ್ಮ ನಿರ್ಧಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ ಡೊಶ್ಯ್ಕಾಟೆ ಐಪಿಎಲ್ಗೆ ಮರಳಲು ಒಲವು ತೋರಿದ್ದಾರೆ. ಇದೇ ಕಾರಣಕ್ಕೆ ಭಾರತ ತಂಡದಿಂದ ಬಿಡುಗಡೆ ಕೋರಿದ್ದಾರೆ ಎನ್ನಲಾಗಿದೆ. ತಮ್ಮನ್ನು ತಂಡದಿಂದ ಬಿಡುಗಡೆ ಮಾಡುವಂತೆ ಬಿಸಿಸಿಐಗೆ ಮನವಿ ಮಾಡಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಬಿಸಿಸಿಐ ಇಂಗ್ಲೆಂಡ್ ಸರಣಿ ಬಳಿಕ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಇನ್ನು, ಕಳೆದ ಒಂದು ವರ್ಷದಿಂದ ಕಳಪೆ ಪ್ರದರ್ಶನ ನೀಡುತ್ತಿರುವ ಫೀಲ್ಡಿಂಗ್ ಕೋಚ್ ಟಿ.ದಿಲಿಪ್ರನ್ನು ಕೈಬಿಡಲು ಬಿಸಿಸಿಐ ಒಲವು ತೋರಿದೆ ಎನ್ನಲಾಗಿದೆ.


