- Home
- Karnataka Districts
- Bengaluru Urban
- ಬೆಂಗಳೂರಿನ ಶಿವಾಜಿನಗರದಲ್ಲಿ ಒತ್ತುವರಿ ತೆರವಿಗೆ ಹೋದ ಜಿಬಿಎ ಅಧಿಕಾರಿಗಳನ್ನ ಅಟ್ಟಾಡಿಸಿ ಹೊಡೆದ ಕಿಡಿಗೇಡಿಗಳು!
ಬೆಂಗಳೂರಿನ ಶಿವಾಜಿನಗರದಲ್ಲಿ ಒತ್ತುವರಿ ತೆರವಿಗೆ ಹೋದ ಜಿಬಿಎ ಅಧಿಕಾರಿಗಳನ್ನ ಅಟ್ಟಾಡಿಸಿ ಹೊಡೆದ ಕಿಡಿಗೇಡಿಗಳು!
ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್ಪಾತ್ ಒತ್ತುವರಿ ತೆರವುಗೊಳಿಸಲು ಹೋದ ಜಿಬಿಎ ಅಧಿಕಾರಿಗಳ ಮೇಲೆ ಸಮಾಜಘಾತುಕ ಶಕ್ತಿಗಳು ಪೆಪ್ಪರ್ ಸ್ಪ್ರೇ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿವೆ. ಈ ಘಟನೆಯಲ್ಲಿ ಎಇಇ ಮಾಧವ ರಾವ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರು (ಜು.21): ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯಭಾಗವಾದ ಶಿವಾಜಿನಗರದಲ್ಲಿ (Shivajinagar) ಮಂಗಳವಾರ ಬೆಳಿಗ್ಗೆ ರಣರಂಗದಂತಹ ವಾತಾವರಣ ನಿರ್ಮಾಣವಾಗಿತ್ತು. ಫುಟ್ಪಾತ್ ಒತ್ತುವರಿ (Footpath Encroachment) ತೆರವುಗೊಳಿಸಲು ಹೋದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಧಿಕಾರಿಗಳ ಮೇಲೆ ಸಮಾಜಘಾತುಕ ಶಕ್ತಿಗಳು ಪೆಪ್ಪರ್ ಸ್ಪ್ರೇ ಹಾಗೂ ದೊಣ್ಣೆಗಳಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ (AEE) ಮಾಧವ ರಾವ್ ಸೇರಿದಂತೆ ನಾಲ್ವರು ಅಧಿಕಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ವಿವರ:
ಬೆಳಿಗ್ಗೆ 10 ಗಂಟೆ ಸುಮಾರಿಗೆ ಜಿಬಿಎ (GBA) ಅಧಿಕಾರಿಗಳು ಜೆಸಿಬಿ (JCB) ಯೊಂದಿಗೆ ಶಿವಾಜಿನಗರ ಬಸ್ ನಿಲ್ದಾಣದ ಬಳಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದರು. ಸುಮಾರು 10ಕ್ಕೂ ಹೆಚ್ಚು ಅಂಗಡಿಗಳು ಫುಟ್ಪಾತ್ ಒತ್ತುವರಿ ಮಾಡಿಕೊಂಡಿದ್ದವು. ಈ ವೇಳೆ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಸ್ಥಳೀಯ ವ್ಯಾಪಾರಿಗಳು ಮತ್ತು ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ (Heated Argument) ನಡೆಯಿತು.
ಈ ಸಂದರ್ಭದಲ್ಲಿ ಏಕಾಏಕಿ ಇನೋವಾ (Innova) ಕಾರಿನಲ್ಲಿ ಬಂದ ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ್ ಹಾಗೂ ಬೆಂಬಲಿಗರು ಅಧಿಕಾರಿಗಳ ಮೇಲೆ ಮುಗಿಬಿದ್ದಿದ್ದಾರೆ. ಮೊದಲು ಅಧಿಕಾರಿಗಳ ಕಣ್ಣಿಗೆ ಪೆಪ್ಪರ್ ಸ್ಪ್ರೇ (Pepper Spray) ಸಿಂಪಡಿಸಿ ಮಂಕುಬೂದಿ ಎರೆಚಿದ ಪುಂಡರು, ನಂತರ ಚೇರ್, ಹೆಲ್ಮೆಟ್ ಮತ್ತು ದೊಣ್ಣೆಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ದಾಳಿಯ ತೀವ್ರತೆಗೆ ಹೆದರಿದ ಜೆಸಿಬಿ ಚಾಲಕ ಮತ್ತು ಕೆಲವು ಅಧಿಕಾರಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ.
ಅಧಿಕಾರಿಗಳ ಆಕ್ರೋಶ ಮತ್ತು ಪ್ರತಿಭಟನೆ :
ತಮ್ಮ ಸಹೋದ್ಯೋಗಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಜಿಬಿಎ (GBA) ನೌಕರರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ (Commercial Street Police Station) ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು. ಜಿಬಿಎ ನೌಕರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, "ಪೊಲೀಸರ ಕಣ್ಣೆದುರೇ ಅಧಿಕಾರಿಗಳ ಮೇಲೆ ಹಲ್ಲೆಯಾಗಿದೆ. ನಮಗೆ ಯಾವುದೇ ಭದ್ರತೆ ನೀಡಿಲ್ಲ. ಕೂಡಲೇ ಆರೋಪಿಗಳನ್ನು ಬಂಧಿಸದಿದ್ದರೆ ಇಡೀ ಬೆಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸುತ್ತೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಪೊಲೀಸರ ಕ್ರಮ :
ಪೂರ್ವ ವಿಭಾಗದ ಡಿಸಿಪಿ (DCP East) ವಿಕ್ರಂ ಅಮಟೆ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, "ಅಧಿಕಾರಿಗಳ ಮೇಲೆ ಅಟ್ಯಾಕ್ (Attack) ಮಾಡಿದವರ ಪೈಕಿ ಈಗಾಗಲೇ ಏಳು ಜನರನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳು ಪೆಪ್ಪರ್ ಸ್ಪ್ರೇ ಹಾಗೂ ದೊಣ್ಣೆಗಳಿಂದ ಹಲ್ಲೆ ಮಾಡಿರುವುದು ದೃಢಪಟ್ಟಿದೆ. ಪೊಲೀಸರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು" ಎಂದು ತಿಳಿಸಿದ್ದಾರೆ. ಹಲ್ಲೆಗೊಳಗಾದ ಮಾಧವ ರಾವ್ ಮತ್ತು ಇತರ ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಸಚಿವ ಕೃಷ್ಣ ಬೈರೇಗೌಡ ಕಠಿಣ ಎಚ್ಚರಿಕೆ:
ಈ ಘಟನೆಯ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಇವರು ಬಡ ವ್ಯಾಪಾರಿಗಳಲ್ಲ, ಇವರು ಸಮಾಜಘಾತುಕ ಶಕ್ತಿಗಳು. ಸುಪ್ರೀಂ ಕೋರ್ಟ್ (Supreme Court) ಆದೇಶ ಜಾರಿಗೊಳಿಸಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಯಾರನ್ನೂ ಬಿಡುವುದಿಲ್ಲ. ಎಲ್ಲರನ್ನೂ ಬಂಧಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳ ಪರವಾಗಿ ನಾವು ದೃಢವಾಗಿ ನಿಲ್ಲುತ್ತೇವೆ" ಎಂದು ತಿಳಿಸಿದ್ದಾರೆ.
ಮತ್ತೆ ಆರಂಭವಾದ ಕಾರ್ಯಾಚರಣೆ :
ಹಲ್ಲೆಯಿಂದ ಅಧಿಕಾರಿಗಳು ಹಿಂಜರಿಯುವ ಬದಲು ಮತ್ತಷ್ಟು ಹಠಕ್ಕೆ ಬಿದ್ದಿದ್ದಾರೆ. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಜೆಸಿಬಿ ತರಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಅರ್ಧಕ್ಕೆ ನಿಂತಿದ್ದ ಒತ್ತುವರಿ ತೆರವು (Demolition Drive) ಕಾರ್ಯಾಚರಣೆಯನ್ನು ಅಧಿಕಾರಿಗಳು ಯಶಸ್ವಿಯಾಗಿ ಮುಂದುವರಿಸಿದ್ದಾರೆ. ಇದು ಸಾರ್ವಜನಿಕ ಆಸ್ತಿ ರಕ್ಷಣೆಯಲ್ಲಿ ಸರ್ಕಾರದ ದೃಢ ನಿಲುವನ್ನು ತೋರಿಸಿದೆ.

