ನಾಳೆ ಶೀತಲಾಷ್ಟಮಿ: ಚಿಕ್ಕ ಆಚರಣೆಯಿಂದ ಬಹುದೊಡ್ಡ ಲಾಭ; ಸರ್ವ ರೋಗ ವಾಸಿಗಿದು ಶುಭ ದಿನ
ಶೀತಲಾಷ್ಟಮಿಯು ಬೇಸಿಗೆಯ ಕಾಯಿಲೆಗಳನ್ನು ತಡೆಯಲು ಶೀತಲಾ ದೇವಿಯನ್ನು ಪೂಜಿಸುವ ಹಬ್ಬವಾಗಿದೆ. ಈ ದಿನ ದೇವಿಗೆ ತಂಗಳನ್ನವನ್ನು ನೈವೇದ್ಯ ಮಾಡಿ, ಅದನ್ನೇ ಪ್ರಸಾದವಾಗಿ ಸೇವಿಸುವ ವಿಶಿಷ್ಟ ಸಂಪ್ರದಾಯವಿದೆ. ಸ್ಕಂದ ಪುರಾಣದಲ್ಲಿ ಉಲ್ಲೇಖಿಸಿರುವ ಈ ಪೂಜೆಯು ಕರುಳಿನ ಆರೋಗ್ಯ ಸೇರಿದಂತೆ ಹಲವು ಪ್ರಯೋಜನ ಹೊಂದಿದೆ.

ನಾಳೆ ಶೀತಲಾಷ್ಟಮಿ
ಹಿಂದೂ ಧರ್ಮದಲ್ಲಿ ತಲೆ ತಲಾಂತರಗಳಿಂದ ಆಚರಿಸಿಕೊಂಡು ಬಂದಿರುವ ಪ್ರತಿಯೊಂದು ಹಬ್ಬ, ಹರಿದಿನ, ಪೂಜೆ, ಪುನಸ್ಕಾರಕ್ಕೂ ವೈಜ್ಞಾನಿಕ ಕಾರಣಗಳೇ ಇವೆ. ಅವೆಲ್ಲವೂ ನಿಜ ಎನ್ನುವಂತೆ 21ನೇ ಶತಮಾನದಲ್ಲಿನ ಅಧ್ಯಯನಗಳು ಸಾಬೀತು ಮಾಡುತ್ತಿವೆ. ಅಂಥವುಗಳಲ್ಲಿ ಒಂದು ವಿಶೇಷ ದಿನ ಶೀತಲಾಷ್ಟಮಿ. ಇದು ಶೀತಲ ದೇವಿಗೆ ಪೂಜೆ ಮಾಡುವ ದಿನ. ನಾಳೆ ಅಂದರೆ ಮಾರ್ಚ್ 11 ಶೀಲತಾಷ್ಟಮಿ. ಇದೇ ವೇಳೆ ನಾಳೆ ಕಾಳಭೈರಾಷ್ಟಮಿ ದಿನವೂ ಹೌದು.
ಬೇಸಿಗೆಯ ಅನಾರೋಗ್ಯ
ಬಿರುಬೇಸಿಗೆ ಶುರುವಾಗಿದೆ. ಇನ್ನಿಲ್ಲಂಥ ರೋಗಗಳು, ಬಾಧೆಗಳು, ಅನಾರೋಗ್ಯ ಸಮಸ್ಯೆಗಳು ಇದಾಗಲೇ ಹಲವರಿಗೆ ಆರಂಭವಾಗಿಬಿಟ್ಟಿದೆ. ಇಂಥ ಸಮಯದಲ್ಲಿ ಬರುವುದೇ ಶೀತಲಾಷ್ಟಮಿ. ಕತ್ತೆಯ ಮೇಲೆ ಕುಳಿತು ಪೊರಕೆ ಹಿಡಿದು ಬರುವ ತಾಯಿ ಈಕೆ. ಇದರ ಅರ್ಥ ಕತ್ತೆ ಎಂದರೆ ಕೊಳಕಿನ ಭಾರವನ್ನು ಹೊರುವುದು ಹಾಗೂ ಪೊರಕೆ ಎಂದರೆ ಕೊಳಕನ್ನು ಗುಡಿಸುವುದು. ಇದರ ಸಂಕೇತವಾಗಿ ಕೊಳಕನ್ನು ತೊಳೆಯುವ ದೇವತೆ ಈಕೆ ಎನ್ನಲಾಗುತ್ತದೆ.
ತಂಗಳನ್ನವೇ ಪ್ರಸಾದ
ವಿಶೇಷ ಎಂದರೆ, ಶೀತಲಾದೇವಿಗೆ ತಂಗಳನ್ನವೇ ಪ್ರಸಾದ. ಅಷ್ಟಕ್ಕೂ ಹಿಂದಿನ ದಿನದ ಅನ್ನಕ್ಕೆ ಮೊಸರು ಹಾಕಿ ಮಾರನೆಯ ದಿನ ಸೇವನೆ ಮಾಡಿದರೆ, ಅದೆಷ್ಟೋ ರೋಗಗಳು ವಾಸಿಯಾಗುತ್ತವೆ, ಇದೀಗ ಬಂದಿರುವ ಬಿ12 ಸಮಸ್ಯೆ ಸೇರಿದಂತೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳುವ ಗಟ್ಸ್ ಹೆಲ್ತ್ ಅಂದರೆ ಕರುಳಿನ ಆರೋಗ್ಯ ಎಲ್ಲದಕ್ಕೂ ತಂಗಳನ್ನವೇ ಬೇಕು. ಅದನ್ನು ಅಂದೇ ಈ ದೇವಿಯ ಮೂಲಕ ಮಾಡಲಾಗುತ್ತಿತ್ತು. ಇಂದಿಗೂ ಈ ದೇವಿಗೆ ಅದೇ ನೈವೇದ್ಯ!
ಸ್ಕಂದ ಪುರಾಣದಲ್ಲಿ ಚರ್ಚೆ
ಅಷ್ಟಕ್ಕೂ, ತಾಯಿ ಶೀತಲಾ ದೇವಿಯ ಬಗ್ಗೆ ಸ್ಕಂದ ಪುರಾಣದಲ್ಲಿ ವಿವರವಾಗಿ ಚರ್ಚಿಸಲಾಗಿದೆ. ಈಕೆಯನ್ನು ಆಗೆಲ್ಲಾ ಬೇಸಿಗೆ ದಿನಗಳಲ್ಲಿ ಹೆಚ್ಚಾಗುವ ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸುವ ದೇವತೆ ಎಂದೇ ಕರೆಯಲಾಗಿತ್ತು. ಉತ್ತರ ಭಾರತ ಸೇರಿದಂತೆ ದೇಶದ ಅನೇಕ ಸ್ಥಳಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ದಕ್ಷಿಣದ ಭಾಗಗಳಲ್ಲಿ ಈ ದೇವಿಯ ಆಚರಣೆ ಅಷ್ಟೊಂದು ಇಲ್ಲವಾದರೂ, ಸರ್ವರೋಗ ನಿವಾರಣೆಗೆ ಈಕೆಯ ಪೂಜೆ ತುಂಬಾ ಶ್ರೇಷ್ಠ ಎನ್ನಲಾಗುತ್ತದೆ.
ವಿಶೇಷ ಪೂಜೆ
ಶೀತಲಾ ದೇವಿ ದೇವಸ್ಥಾನದಲ್ಲಿ ಈ ದಿನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ದಿನ ಒಲೆಯನ್ನು ಹಚ್ಚುವುದಿಲ್ಲ. ಒಲೆಯಲ್ಲಿ ಯಾವುದೇ ರೀತಿಯ ಆಹಾರವನ್ನು ತಯಾರಿಸುವುದಿಲ್ಲ. ಶೀತಲಾಷ್ಟಮಿಯ ಹಿಂದಿನ ಆಹಾರವನ್ನು ತಯಾರಿಸಿಟ್ಟುಕೊಂಡು ಶೀತಲಾ ದೇವಿಗೂ ಈ ಆಹಾರವನ್ನೇ ಅರ್ಪಿಸಿ. ಅದೇ ಆಹಾರವನ್ನು ಸೇವಿಸುತ್ತಾರೆ. ನಾಳೆ ದೇವಿಗೆ ಒಂದೆರಡು ಬೇವಿನ ಎಲೆಗಳನ್ನು ಅರ್ಪಿಸಿ, ತಣ್ಣಗೆ ಇರುವ ಪದಾರ್ಥವನ್ನು ಆಕೆಗೆ ನೈವೇದ್ಯಕ್ಕೆ ಇಟ್ಟು ಪ್ರಾರ್ಥನೆ ಮಾಡಿಕೊಂಡರೆ ಅನಾರೋಗ್ಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎನ್ನುವುದು ನಂಬಿಕೆ.
ಈ ಒಂದು ಶ್ಲೋಕ ಪ್ರತಿನಿತ್ಯ ಹೇಳಿ
ನೀವು ಪ್ರತಿನಿತ್ಯ ಮಾತ್ರೆ, ಔಷಧಿ ಸೇವಿಸುವ ಮುನ್ನ ಈ ಒಂದು ಶ್ಲೋಕ ಹೇಳಿಕೊಂಡು ಸೇವನೆ ಮಾಡಿದರೆ ತುಂಬಾ ಒಳ್ಳೆಯ ಪರಿಣಾಮ ಬೀರುತ್ತದೆ ಎಂದೂ ಹೇಳಲಾಗುತ್ತದೆ.
ಶೀತಲೇತ್ಮಂ ಜಗನ್ಮಾತಾ
ಶೀತಲೇತ್ಮಂ ಜಗತ್ಪಿತಾ
ಶೀತಲೇತ್ಮಂ ಜಗದ್ಧಾತ್ರಿ
ಶೀತಲಾಯೈ ನಮೋನಮಃ
ಮುಹೂರ್ತ ಹೀಗಿದೆ
ದಿನಾಂಕ: ಬುಧವಾರ, ಮಾರ್ಚ್ 11, 2026
ಅಷ್ಟಮಿ ತಿಥಿ ಆರಂಭ: ಮಾರ್ಚ್ 11, 2026 ರಂದು ನಸುಕಿನ1:54
ಅಷ್ಟಮಿ ತಿಥಿ ಕೊನೆಗೊಳ್ಳುವುದು: ಮಾರ್ಚ್ 12, 2026 ರಂದು ನಸುಕಿನ 4:19
ಪೂಜೆ ಮುಹೂರ್ತ (ಸಮಯ): ಮಾರ್ಚ್ 11, 2026 ರಂದು ಬೆಳಿಗ್ಗೆ 6:36 ರಿಂದ ಸಂಜೆ 6:27 ರವರೆಗೆ

