21ನೇ ಶತಮಾನದ ಸುದೀರ್ಘ ಸೂರ್ಯ ಗ್ರಹಣ ಸಂಭವಿಸಲಿದೆ. ಸುಮಾರು ಆರು ನಿಮಿಷಗಳ ಕಾಲ ಭೂಮಿಯ ಕೆಲವು ಭಾಗಗಳಲ್ಲಿ ಕತ್ತಲೆ ಆವರಿಸಲಿದ್ದು, ಇದು ಖಗೋಳ ಮತ್ತು ಧಾರ್ಮಿಕವಾಗಿ ಮಹತ್ವ ಪಡೆದಿದೆ. ಈ ಗ್ರಹಣವು ಎಲ್ಲೆಲ್ಲಿ ಗೋಚರಿಸುತ್ತವೆ?

ಈ 21ನೇ ಶತಮಾನದಲ್ಲಿ ಹುಟ್ಟಿರುವ ಜನರಿಗೆ ಅದೆಷ್ಟೋ ಸುಯೋಗಗಳು ಒದಗಿ ಬಂದಿವೆ. ಬದಲಾಗುತ್ತಿರುವ ಕಾಲಮಾನವನ್ನು, ಕಣ್ಣೆದುರೇ ಬದಲಾಗುತ್ತಿರುವ ಡಿಜಿಟಲ್​ ಮಾಯೆ ಸೇರಿದಂತೆ ಹಲವು ವಿಷಯಗಳನ್ನು ವೀಕ್ಷಿಸುವ ಅವಕಾಶ ಸಿಕ್ಕಿದೆ. ಇದೀಗ ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಈ ಜಗತ್ತು. ಅದೇ 21ನೇ ಶತಮಾನದ ಸುದೀರ್ಘ ಸೂರ್ಯ ಗ್ರಹಣ. ಹಗಲು ಸ್ವಲ್ಪ ಸಮಯದವರೆಗೆ ರಾತ್ರಿಯಾಗಿ ಬದಲಾಗುವ ಅಪರೂಪದ ಕ್ಷಣವಿದು. ಸುಮಾರು ಆರು ನಿಮಿಷಗಳ ಕಾಲ ಭೂಮಿಯ ಕೆಲವು ಭಾಗಗಳಲ್ಲಿ ಕತ್ತಲೆ ಆವರಿಸಿರುತ್ತದೆ, ಖಗೋಳಶಾಸ್ತ್ರಜ್ಞರು ಇದನ್ನು ಶತಮಾನದ ಅತ್ಯಂತ ಅದ್ಭುತ ಗ್ರಹಣ ಎಂದು ಹೇಳುತ್ತಾರೆ.

ಯಾವಾಗ ಸಂಭವಿಸುತ್ತದೆ?

ಇದು ಸಂಭವಿಸುವುದು, ಬರುವ ವರ್ಷ ಅರ್ಥಾತ್​ 2027ರ ಆಗಸ್ಟ್​​ 2ರಂದು. ಇದು ಪ್ರಕೃತಿಯ ವಿಸ್ಮಯ ಮಾತ್ರವಲ್ಲದೇ, ಧಾರ್ಮಿಕವಾಗಿಯೂ ಮಹತ್ವ ಸಾರುತ್ತದೆ ಎನ್ನಲಾಗಿದೆ. 2027 ಬಿಟ್ಟರೆ ಮತ್ತೆ ಇದು ಸಂಭವಿಸಿವುದು 2114ರಲ್ಲಿ! ಸದ್ಯ ಬದುಕಿರುವ ಯಾರೂ ಜೀವಿಸಿರಲು ಸಾಧ್ಯವಿಲ್ಲ. ಏಕೆಂದರೆ ಇದು ಸಂಭವಿಸುವುದೇ 100 ವರ್ಷಗಳಿಗೆ ಒಮ್ಮೆ. 2027 ರ ಸಂಪೂರ್ಣ ಸೂರ್ಯಗ್ರಹಣವು ಖಂಡಗಳಾದ್ಯಂತ ಲಕ್ಷಾಂತರ ಜನರಿಗೆ ಗೋಚರಿಸುವ ನಿರೀಕ್ಷೆಯಿದೆ.

ಗ್ರಹಣ ಎಲ್ಲಿ ಗೋಚರಿಸುತ್ತದೆ?

ಖಗೋಳಶಾಸ್ತ್ರಜ್ಞರ ಪ್ರಕಾರ, ಗ್ರಹಣವು ಅಟ್ಲಾಂಟಿಕ್ ಸಾಗರದ ಮೇಲೆ ಪ್ರಾರಂಭವಾಗುತ್ತದೆ. ಹಿಂದೂ ಮಹಾಸಾಗರವನ್ನು ತಲುಪುತ್ತಿದ್ದಂತೆ, ಗ್ರಹಣವು ಮಸುಕಾಗಲು ಪ್ರಾರಂಭವಾಗುತ್ತದೆ ಮತ್ತು ತೀವ್ರತೆಯನ್ನು ಕಳೆದುಕೊಳ್ಳುತ್ತದೆ. ಸಂದರ್ಭಕ್ಕೆ ತಕ್ಕಂತೆ, ದಾಖಲಾದ ಇತಿಹಾಸದಲ್ಲಿ ಅತಿ ಉದ್ದವಾದ ಒಟ್ಟು ಸೂರ್ಯಗ್ರಹಣವು 7 ನಿಮಿಷ 28 ಸೆಕೆಂಡುಗಳ ಕಾಲ ನಡೆಯಲಿದೆ. ಇದು ಜಿಬ್ರಾಲ್ಟರ್ ಜಲಸಂಧಿ, ದಕ್ಷಿಣ ಸ್ಪೇನ್‌ನ ಕೆಲವು ಭಾಗಗಳು, ಉತ್ತರ ಮೊರಾಕೊ, ಉತ್ತರ ಅಲ್ಜೀರಿಯಾ, ಉತ್ತರ ಟುನೀಶಿಯಾ, ಈಶಾನ್ಯ ಲಿಬಿಯಾ, ಈಜಿಪ್ಟ್, ಸುಡಾನ್, ನೈಋತ್ಯ ಸೌದಿ ಅರೇಬಿಯಾ, ಯೆಮನ್, ಸೊಮಾಲಿಯಾ ಮತ್ತು ಮತ್ತು ಅರೇಬಿಯನ್ ಪರ್ಯಾಯ ದ್ವೀಪದ ಇತರ ಪ್ರದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಭಾರತದ ಜನರಿಗೆ ಇದನ್ನು ನೋಡುವ ಅದೃಷ್ಟ ಇಲ್ಲದಿದ್ದರೂ ಈ ಡಿಜಿಟಲ್​ ಯುಗದಲ್ಲಿ ಅದನ್ನು ನೋಡಲು ಸಾಧ್ಯವಾಗಿದೆ.

ಧಾರ್ಮಿಕ ಮಹತ್ವ

ಸಾಮಾನ್ಯವಾಗಿ ಹಿಂದೂ ಸಂಪ್ರದಾಯದಲ್ಲಿ ಗ್ರಹಣಕ್ಕೆ ಧಾರ್ಮಿಕ ಮಹತ್ವವನ್ನು ನೀಡಲಾಗುತ್ತದೆ. ಏಕೆಂದರೆ, ಇವು ಕೇವಲ ಖಗೋಳ ವಿದ್ಯಮಾನಗಳಲ್ಲ, ಬದಲಾಗಿ ಪ್ರಬಲ ಶಕುನಗಳಾಗಿ ಮತ್ತು ಆಧ್ಯಾತ್ಮಿಕವಾಗಿ ಮಹತ್ವದ ಘಟನೆಗಳಾಗಿ ಕಂಡುಬರುತ್ತವೆ. ಇದೇ ಕಾರಣಕ್ಕೆ, ಯಾವುದೇ ಗ್ರಹಣದ ಸಂದರ್ಭಗಳಲ್ಲಿ ದೇವಾಲಯಗಳ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ಆಚರಣೆಗಳು ಮತ್ತು ಪೂಜೆಗಳು ಸ್ಥಗಿತಗೊಳಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬೇಡಿ ಎನ್ನಲಾಗುತ್ತದೆ. ಇಂದು ಇವೆಲ್ಲಾ ಮೂಢನಂಬಿಕೆ ಎಂದು ಸಾರುವ ವರ್ಗವಿದ್ದರೂ, ನಮ್ಮ ಹಿರಿಯರು ಈ ಸಂಪ್ರದಾಯಕ್ಕೂ, ವೈಜ್ಞಾನಿಕ ಕಾರಣವನ್ನು ನೀಡುತ್ತಾರೆ.