ಇಡ್ಲಿ ಮತ್ತು ದೋಸೆ ಇಂಡೋನೇಷ್ಯಾದಿಂದ ಬಂದ ತಿನಿಸುಗಳಲ್ಲ, ಬದಲಿಗೆ ಇವುಗಳ ತವರು ನಮ್ಮ ಕರ್ನಾಟಕ. 9ನೇ ಶತಮಾನದ 'ವಡ್ಡಾರಾಧನೆ'ಯಲ್ಲಿ ಇಡ್ಲಿಯ ಉಲ್ಲೇಖವಿದ್ದರೆ, 3ನೇ ಶತಮಾನದ 'ಮಾನಸೋಲ್ಲಾಸ' ಕೃತಿಯಲ್ಲಿ ದೋಸೆಯ ಬಗ್ಗೆ ಹೇಳಲಾಗಿದೆ. ಜೊತೆಗೆ, ಉಪ್ಪಿಟ್ಟಿನ ಹುಟ್ಟಿನ ಹಿಂದಿರುವ ವಿಭಿನ್ನ ಇತಿಹಾಸವನ್ನೂ ಈ ಲೇಖನ ವಿವರಿಸುತ್ತದೆ.

ಇಡ್ಲಿ ಮತ್ತು ದೋಸೆ ದಕ್ಷಿಣ ಭಾರತದ, ಅದರಲ್ಲೂ ಮುಖ್ಯವಾಗಿ ತಮಿಳುನಾಡು ಮತ್ತು ಕರ್ನಾಟಕದ ಜನಪ್ರಿಯ ತಿನಿಸುಗಳಾಗಿವೆ. ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿಬಿಟ್ಟಿದೆ. ಹೊಟ್ಟೆ ತುಂಬುವ ತಿನ್ನಿಸು ಎಂದೂ ಫೇಮಸ್​ ಆಗಿರೋ ಇಡ್ಲಿ, ದೋಸೆಗಳಲ್ಲಿ ಇದೀಗ ವೆರೈಟಿ ವೆರೈಟಿ ಬಗೆಗಳಿವೆ. ಅದರಲ್ಲಿಯೂ ದೋಸೆಯಲ್ಲಂತೂ ನೂರಾರು ಬಗೆ ಇದ್ದು, ಈಗಲೂ ವಿಭಿನ್ನ ರೀತಿಯ ದೋಸೆಗಳನ್ನು ಜನರು ಟ್ರೈ ಮಾಡುತ್ತಲೇ ಇದ್ದಾರೆ. ಆದರೆ ನಿಮಗೆ ಗೊತ್ತೆ? ಇವೆರಡರ ತವರು ಕೂಡ ನಮ್ಮ ಕರುನಾಡು ಎನ್ನುವುದು!

Add Asianetnews Kannada as a Preferred SourcegooglePreferred

ಸಾವಿರಾರು ವರ್ಷಗಳ ಇತಿಹಾಸ

ಈ ತಿನಿಸುಗಳು ಇವು ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿವೆ.ಇಡ್ಲಿಯ ಮೂಲವು ಇಂಡೋನೇಷ್ಯಾದಿಂದ ಬಂದಿರಬಹುದು ಎಂದು ಆಹಾರ ಇತಿಹಾಸಕಾರರೂ ಈ ಹಿಂದೆ ಹೇಳಿದ್ದರೂ, ಅದು ಸತ್ಯವಲ್ಲ ಎಂದಿದ್ದಾರೆ ಡಾ.ಶ್ರೀದತ್ತ ಭದ್ರಿ. ಆರ್​ಜೆ ಸೌಜನ್ಯ ಅವರ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ರಿವೀಲ್​ ಮಾಡಿದ್ದಾರೆ. 9ನೇ ಶತಮಾನದ ವಡ್ಡಾರಾಧನೆಯಲ್ಲಿ ಇಡ್ಲಿಯ ಬಗ್ಗೆ ಉಲ್ಲೇಖವಿದೆ. ಇದು ಜೈನ ಗ್ರಂಥ. ಇದನ್ನು ಬರೆದವರು ಕನ್ನಡಿಗರು. ಈ ಕೃತಿಯಲ್ಲಿ ಇಡ್ಡಲಿಗೆ ಎಂದು ಉಲ್ಲೇಖವಾಗಿದೆ. ಇದೊಂದು ಹಬೆಯಲ್ಲಿ ಬೇಯಿಸುವ ಖಾದ್ಯ ಎಂದು ಇಡ್ಲಿ ಮಾಡುವ ವಿಧಾನವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಸಾಹಿತ್ಯಿಕವಾಗಿ ಅದರಲ್ಲಿ ಬರೆದಿದ್ದು, ಇಡ್ಲಿಯ ಸಂಪೂರ್ಣ ಕ್ರೆಡಿಟ್​ ಕನ್ನಡಿಗರಿಗೇ ಸಲ್ಲಬೇಕು ಎಂದಿದ್ದಾರೆ.

3ನೇ ಶತಮಾನದ ದೋಸೆ

ಅದೇ ರೀತಿ, ದೋಸೆಯ ಬಗ್ಗೆಯೂ ಅವರು ವಿವರಿಸಿದ್ದಾರೆ. ದೋಸೆ ಎನ್ನುವ ಪದ ಸಂಸ್ಕೃತಲ್ಲಿ ಬರೆದಿದ್ದರೂ, ಇದು ಕನ್ನಡದಿಂದಲೇ ಬಂದಿರುವ ಖಾದ್ಯ. 3ನೇ ಶತಮಾನದಲ್ಲಿ ಸೋಮೇಶ್ವರ ರಾಜನ ಬಗ್ಗೆ ಕಲ್ಯಾಣಿ ಚಾಲುಕ್ಯ ಸಂಸ್ಕೃತದಲ್ಲಿ ಮಾನಸೋಲ್ಲಾಸ ಎನ್ನುವ ಕೃತಿ ರಚಿಸಿದ್ದಾನೆ. ಇದರಲ್ಲಿ ರಾಜನ ಅಡುಗೆ ಮನೆಯಲ್ಲಿ ಖಾದ್ಯದ ಬಗ್ಗೆ ವಿವರಿಸಲಾಗಿದೆ. ಅದರಲ್ಲಿ ದೋಸಕ ಎನ್ನುವ ಶಬ್ದ ಬಂದಿದ್ದು, ಅದು ದೋಸೆಯೇ ಆಗಿದೆ. ಇದು ಸಂಸ್ಕೃತದಲ್ಲಿ ಇದ್ದರೂ, ಇದನ್ನು ಬರೆದವರು ಕನ್ನಡಿಗ ಎಂದಿದ್ದಾರೆ. ಆದ್ದರಿಂದ ಇದರ ಕ್ರೆಡಿಟ್​ ಕೂಡ ಕನ್ನಡಿಗರಿಗೆ ಸೇರಬೇಕು ಎನ್ನುವುದು ಅವರ ಮಾತು. ಇಂಗ್ಲಿಷ್​ನಲ್ಲಿ ದೋಸಾ ಎನ್ನೋದು ತಪ್ಪು. ಅದು ದೋಸೆ ಎಂದಿದ್ದಾರೆ ಅವರು.

ಉಪ್ಪಿಟ್ಟಿನ ಇತಿಹಾಸ

ಇದೇ ವೇಳೆ ಉಪ್ಪಿಟ್ಟಿನ ಹುಟ್ಟಿನ ಬಗ್ಗೆಯೂ ತಿಳಿಸಿದ್ದಾರೆ ಅವರು. ಉಪ್ಪಿಟ್ಟು ವಿಧವೆಯರ ಆಹಾರವಾಗಿತ್ತಂತೆ! ಹಿಂದಿನ ಕಾಲದಲ್ಲಿ ಗಂಡ ಸತ್ತ ಬಳಿಕ ಹೆಣ್ಣಿನ ಮೇಲೆ ಅದ್ಯಾವ ಪರಿಯ ಶೋಷಣೆ ನಡೆಯುತ್ತಿತ್ತು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಗಂಡನ ಚಿತೆಯಲ್ಲಿ ಹೆಣ್ಣು ಸಾಯುವಂಥ ಹೀನಾತಿಹೀನ ಪದ್ಧತಿಯೂ ಇದ್ದ ಕಾಲವದು. ವಿಧವೆಯರು ಎಂದರೆ ಅತ್ಯಂತ ಹೀನಾಯವಾಗಿ ನೋಡುವ ಸ್ಥಿತಿಯಲ್ಲಿ ಹುಟ್ಟಿಕೊಂಡಿದ್ದಂತೆ ಈ ಉಪ್ಪಿಟ್ಟು. ಗಂಡ ಸತ್ತ ಬಳಿಕ ಹೆಣ್ಣಿಗೆ ಬೇರೆ ಗಂಡಿನ ಕಡೆ ಆಕರ್ಷಣೆಯಾಗಬಾರದು ಎನ್ನುವ ಕಾರಣಕ್ಕೆ ಆಕೆಯನ್ನು ಒಂದು ಕಡೆ ದೂರವೇ ಇಡುತ್ತಿದ್ದರು. ಉಪ್ಪು,ಹುಳಿ,ಖಾರ ತಿಂದರೆ ಆಕೆಗೆ ದೈಹಿಕ ವಾಂಛೆ ಶುರುವಾಗಬಹುದು ಎನ್ನುವ ಕಾರಣಕ್ಕೆ ಬಿಸಿನೀರಿನಲ್ಲಿ ರವೆಯನ್ನು ಹಾಕಿ ಸ್ವಲ್ಪ ಉಪ್ಪು ಹಾಕಿ ಕೊಡುತ್ತಿದ್ದರಂತೆ. ಉಪ್ಪಿನಿಂದ ಮಾಡಿದ ಈ ಹಿಟ್ಟಿನ ರೂಪದ ಆಹಾರವೇ ಉಪ್ಪಿಟ್ಟು ಆಗಿದೆ ಎಂದಿದ್ದಾರೆ. (ಉಪ್ಪಿಟ್ಟಿನ ಇತಿಹಾಸ ಈ ಕೆಳಗಿನ ಲಿಂಕ್​ನಲ್ಲಿ ಇದೆ)