ಸೈಬರ್ ವಂಚನೆಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗ್ತಿವೆ. ಹಾಗೆಯೇ ಇಲ್ಲೊಬ್ಬ ಮಹಿಳೆ ಒಂದು ಪ್ಲೇಟ್‌ಗೆ ಇನ್ನೊಂದು ಫುಡ್ ಥಾಲಿ  ಉಚಿತ ಎಂದು ತಿಳಿದು ಕರೆ ಮಾಡಲು ಹೋಗಿ ಅಕೌಂಟ್‌ನಲ್ಲಿದ್ದ ಹಣ ಕಳೆದುಕೊಂಡಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಒಂದು ಊಟಕ್ಕೆ ಇನ್ನೊಂದು ಊಟ ಫ್ರೀ, ಒಳ್ಳೆ ಆಫರ್‌ ಇದೆ, ಭರ್ಜರಿ ಊಟಾನೂ ಆಗುತ್ತೆ ಎಂದು ಮರುಳಾಗಿ ಸೈಬರ್‌ ವಂಚಕರು ಹೇಳಿದ ಆ್ಯಪ್‌ ಡೌನ್‌ಲೋಡ್‌ ಮಾಡಿದ ದೆಹಲಿಯ ಸವಿತಾ ಶರ್ಮಾ ಎಂಬ ಮಹಿಳೆ ತಮ್ಮ ಖಾತೆಯಲ್ಲಿದ್ದ ಬರೋಬ್ಬರಿ 90,000 ರು. ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಆಫರ್‌ ಇದ್ದ ನಂಬರ್‌ಗೆ ಕರೆ ಮಾಡಿದಾಗ ತಿಳಿಸಿದ ಆ್ಯಪ್‌ ಡೌನ್‌ಲೋಡ್‌ ಮಾಡಿದಾಗ ಫೋನ್‌ ಹ್ಯಾಕ್‌ ಆಗಿದೆ. ಬಳಿಕ ಅಕೌಂಟ್‌ನಿಂದ ಹಣ ಇಲ್ಲವಾಗಿದ್ದು, ಮೆಸೇಜ್‌ ಬಂದಿದೆ.

ಬ್ಯಾಂಕ್‌ನಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಸವಿತಾ ಶರ್ಮಾಗೆ, ಆಕೆಯ ಸಂಬಂಧಿ (Relatives)ಯೊಬ್ಬರು ಫೇಸ್‌ಬುಕ್‌ನಲ್ಲಿ ಆಫರ್ ಬಗ್ಗೆ ಮಾಹಿತಿ ನೀಡಿದರು. ಆ ನಂತರ ಸವಿತಾ ಈ ಬಗ್ಗೆ ತಿಳಿದುಕೊಳ್ಳಲು ಆಫರ್‌ನಲ್ಲಿ ಸೂಚಿಸಿದ್ದ ಬಗ್ಗೆ ವಿಚಾರಣೆ ಮಾಡಲು ಅಲ್ಲಿದ್ದ ನಂಬರ್‌ಗೆ ಕರೆ ಮಾಡಿದರು. ಈ ಸಂದರ್ಭದಲ್ಲಿ ಆಕೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗಲ್ಲಿಲ್ಲ. ಆದರೆ ಸ್ಪಲ್ಪ ಹೊತ್ತಿನ ನಂತರ ಅದೇ ನಂಬರ್‌ನಿಂದ ಕರೆ ಬಂದಿತ್ತು. 

ವಾಟ್ಸಾಪ್‌ಗೆ ಬಂದ ಲಿಂಕ್ ಕ್ಲಿಕ್ ಮಾಡಿ 6.16 ಲಕ್ಷ ಕಳೆದುಕೊಂಡ ಯುವಕ

'ಕರೆ ಮಾಡಿದವರು ಲಿಂಕ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಆಫರ್ ಅನ್ನು ಪಡೆಯಲು ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಲು ನನ್ನನ್ನು ಕೇಳಿದರು. ಅವರು ಅಪ್ಲಿಕೇಶನ್ ಅನ್ನು ಪ್ರವೇಶಿಸಲು ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ಸಹ ಕಳುಹಿಸಿದ್ದಾರೆ. ನಾನು ಆಫರ್ ಪಡೆಯಲು ಬಯಸಿದರೆ, ನಾನು ಇದರಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅವರು ನನಗೆ ಹೇಳಿದರು' ಎಂದು ಶರ್ಮಾ ಪಿಟಿಐಗೆ ತಿಳಿಸಿದರು.

'ನಾನು ಲಿಂಕ್ ಅನ್ನು ಕ್ಲಿಕ್ ಮಾಡಿದೆ. ಅಪ್ಲಿಕೇಶನ್ ಡೌನ್‌ಲೋಡ್ ಆಗಿತ್ತು. ನಂತರ ನಾನು ಯೂಸರ್ ಐಡಿ ಮತ್ತು ಪಾಸ್‌ವರ್ಡ್ ನಮೂದಿಸಿದೆ. ತಕ್ಷಣ ನನ್ನ ಫೋನ್‌ ಹ್ಯಾಕ್ ಮಾಡಲಾಗಿತ್ತು. ನಂತರ ನನ್ನ ಖಾತೆಯಿಂದ ರೂ 40,000 ಡೆಬಿಟ್ ಆಗಿದೆ ಎಂಬ ಸಂದೇಶ ನನಗೆ ಬಂತು' ಎಂದು ಶರ್ಮಾ ಹೇಳಿದರು. ಕೆಲವು ಸೆಕೆಂಡುಗಳ ನಂತರ ತನ್ನ ಖಾತೆಯಿಂದ ರೂ 50,000 ಹಿಂಪಡೆಯಲಾಗಿದೆ ಎಂದು ಮತ್ತೊಂದು ಸಂದೇಶ ಬಂತು ಎಂದು ಅವರು ಹೇಳಿದರು.

"ನನ್ನ ಕ್ರೆಡಿಟ್ ಕಾರ್ಡ್‌ನಿಂದ ನನ್ನ ಪೇಟಿಎಂ ಖಾತೆಗೆ ಹಣ ಹೋಗಿದ್ದು, ನಂತರ ವಂಚಕನ ಖಾತೆಗೆ ಸ್ಥಳಾಂತರಗೊಂಡಿರುವುದು ನನಗೆ ತುಂಬಾ ಆಶ್ಚರ್ಯಕರವಾಗಿತ್ತು. ನಾನು ಈ ಯಾವುದೇ ವಿವರಗಳನ್ನು ಕರೆ ಮಾಡಿದವರೊಂದಿಗೆ ಎಂದಿಗೂ ಹಂಚಿಕೊಂಡಿಲ್ಲ" ಎಂದು ಶರ್ಮಾ ಹೇಳಿಕೊಂಡಿದ್ದು, ಅವರು ತಕ್ಷಣವೇ ತನ್ನ ಕ್ರೆಡಿಟ್ ಅನ್ನು ನಿರ್ಬಂಧಿಸಿದ್ದಾರೆ. 

Cyber Fraud ಒಟಿಪಿ ಶೇರ್ ಮಾಡ್ಲಿಲ್ಲ, ಆದ್ರೂ 3.63 ಲಕ್ಷ ರೂಪಾಯಿ ಕಳೆದುಕೊಂಡ ಮಹಿಳೆ!

ಮಹಿಳೆಯ ದೂರಿನ ಮೇರೆಗೆ ಸೈಬರ್ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇತರ ನಗರಗಳಿಂದ ಜನರು ಸಾವಿರಾರು ರೂಪಾಯಿಗಳನ್ನು ಕಳೆದುಕೊಂಡಿರುವ ಇದೇ ರೀತಿಯ ವಂಚನೆ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ. ಸಾಗರ ರತ್ನ ರೆಸ್ಟೋರೆಂಟ್‌ನ ಪ್ರತಿನಿಧಿಯನ್ನು ಸಂಪರ್ಕಿಸಿದಾಗ, ಗ್ರಾಹಕರಿಂದ ಇಂತಹ ಹಲವು ದೂರುಗಳು ಬಂದಿವೆ ಎಂದು ಒಪ್ಪಿಕೊಂಡರು.

'ನಮ್ಮ ರೆಸ್ಟೋರೆಂಟ್‌ನ ಹೆಸರಿನಲ್ಲಿ ಲಾಭದಾಯಕ ಕೊಡುಗೆಗಳನ್ನು ಜಾಹೀರಾತು ಮಾಡುವವರಿಂದ ಜನರು ವಂಚಿಸಿದ್ದಾರೆ ಎಂದು ಜನರು ದೂರಿರುವ ಅನೇಕ ಕರೆಗಳನ್ನು ನಾವು ಸ್ವೀಕರಿಸಿದ್ದೇವೆ. ನಾವು ಫೇಸ್‌ಬುಕ್ ಮೂಲಕ ಜನರಿಗೆ ಆಫರ್‌ಗಳನ್ನು ನೀಡುವುದಿಲ್ಲವಾದ್ದರಿಂದ ಅಂತಹ ಯಾವುದೇ ಲಾಭದಾಯಕ ವ್ಯವಹಾರದ ಬಗ್ಗೆ ಎಚ್ಚರದಿಂದಿರಿ ಎಂದು ನಾವು ಜನರಿಗೆ ಎಚ್ಚರಿಕೆ ನೀಡಿದ್ದೇವೆ' ಎಂದು ಪ್ರತಿನಿಧಿ ಹೇಳಿದರು. ಹುಷಾರು ಕಣ್ರೀ, ಫ್ರೀ ವಾಂಗಿಬಾತು, ಬೇಳೇಬಾತು ಅಂತಾ ಆಫರ್‌ ಬಂದರೆ ಈ ಸುದ್ದಿ ನೆನಪು ಮಾಡ್ಕೊಳಿ.