ಬೆಂಗಳೂರಿನ ವರ್ತೂರು-ಬಳಗೆರೆ ರಸ್ತೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ತಾಂತ್ರಿಕ ದೋಷದಿಂದ ಈ ದುರಂತ ಸಂಭವಿಸಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ

ಮಹದೇವಪುರ / ವೈಟ್ ಫೀಲ್ಡ್ (ಜ.29): ಸಿಲಿಕಾನ್ ಸಿಟಿಯ ವರ್ತೂರು ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವರ್ತೂರು-ಬಳಗೆರೆ ರಸ್ತೆಯಲ್ಲಿರುವ SS VR ಕನ್ಸ್ಟ್ರಕ್ಷನ್ ಸೈಟ್‌ನಲ್ಲಿ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್ ಕುಸಿದು ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಟ್ಟಡದ ಮೇಲ್ಭಾಗಕ್ಕೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವೇಳೆ ತಾಂತ್ರಿಕ ದೋಷದಿಂದ ಲಿಫ್ಟ್ ದಿಢೀರನೆ ಕುಸಿದು ಈ ಅವಘಡ ಸಂಭವಿಸಿದೆ.

Add Asianetnews Kannada as a Preferred SourcegooglePreferred

ಸ್ಥಳದಲ್ಲೇ ಕೊನೆಯುಸಿರೆಳೆದ ಆಪರೇಟರ್, ಮೆಕ್ಯಾನಿಕ್

ಈ ಭೀಕರ ದುರಂತದಲ್ಲಿ ಲಿಫ್ಟ್ ಆಪರೇಟರ್ ಸತ್ಯ ಕುಮಾರ್ ಹಾಗೂ ಮೆಕ್ಯಾನಿಕ್ ಮುತ್ತಪ್ಪ ಎಂಬುವವರು ಮೃತಪಟ್ಟಿದ್ದಾರೆ. ಜನವರಿ 28ರಂದು ಕೆಲಸ ನಡೆಯುತ್ತಿದ್ದ ಸಂದರ್ಭದಲ್ಲಿ ಲಿಫ್ಟ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಈ ವೇಳೆ ಲಿಫ್ಟ್ ಅಡಿಯಲ್ಲೇ ಸಿಲುಕಿದ ಇಬ್ಬರೂ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆದರೆ, ಈ ಘಟನೆ ನಡೆದ 24 ಗಂಟೆಗಳ ನಂತರ ತಡವಾಗಿ ಬೆಳಕಿಗೆ ಬಂದಿದೆ.

ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಇಬ್ಬರು ಬಲಿ?

ಮೃತ ಸತ್ಯ ಕುಮಾರ್ ಅವರ ಪತ್ನಿ ಜನವರಿ 29ರಂದು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುತ್ತಿಗೆದಾರ ಸುಧೀರ್ ಹಾಗೂ ಸೈಟ್ ಇಂಜಿನಿಯರ್ ಅವರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮತ್ತು ಅವರ ನಿರ್ಲಕ್ಷ್ಯವೇ ಈ ಅನಾಹುತಕ್ಕೆ ನೇರ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕೂಲಿ ನಂಬಿ ಬಂದಿದ್ದ ಬಡ ಕಾರ್ಮಿಕರ ಬದುಕು ನಿರ್ಲಕ್ಷ್ಯಕ್ಕೆ ಬಲಿಯಾಗಿದೆ.

ಪೊಲೀಸ್ ತನಿಖೆ ಚುರುಕು

ದೂರಿನ ಹಿನ್ನೆಲೆಯಲ್ಲಿ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಘಟನೆಗೆ ಕಾರಣ ಏನೆಂಬುದು ವಿಚಾರಣೆ ಬಳಿಕ ತಿಳಿಯಲಿದೆ.