ತಿರುಮಲದಲ್ಲಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿ ಕ್ಯೂ ಲೈನ್‌ನಲ್ಲಿ ಗಂಟೆಗಟ್ಟಲೇ ಕಾದು ನಿಲ್ಲುವ ಭಕ್ತರಿಗೆ ಸರಿಯಾದ ಸಮಯದಲ್ಲಿ ಅನ್ನಪ್ರಸಾದ ಪೂರೈಸುವ ಹೊಸ ವಿಧಾನವನ್ನು ಟಿಟಿಡಿ ಜಾರಿ ಮಾಡುತ್ತಿದೆ. ಪ್ರಯೋಗಾತ್ಮಕಾಗಿ ಈ ಯೋಜನೆ ಜಾರಿಯಾಗಿದ್ದು, ಭಕ್ತರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ತಿರುಮಲದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವುದೇ ಟೋಕನ್ ಇಲ್ಲದೆ ತಿರುಮಲಕ್ಕೆ ಆಗಮಿಸುವ ಸಾಮಾನ್ಯ ಭಕ್ತರ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಇಂತಹ ಭಕ್ತರ ದರ್ಶನಕ್ಕೆ 18ರಿಂದ 24 ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಈ ಕಾರಣದಿಂದ ಭಕ್ತರು ಗಂಟೆಗಟ್ಟಲೇ ಕ್ಯೂ ಲೈನ್‌ನಲ್ಲಿ ಕಾದು ನಿಲ್ಲಬೇಕಿದೆ. ಭಕ್ತರ ಸಂಖ್ಯೆಯನ್ನು ನಿರಂತರವಾಗಿ ಟ್ರ್ಯಾಕ್ ಮಾಡುವ ಟಿಟಿಡಿ, ಭಕ್ತರಿಗೆ ಕ್ಯೂ ಲೈನ್ ಗಳಲ್ಲಿಯೇ ಅಗತ್ಯವಾದ ಅನ್ನಪ್ರಸಾದಗಳನ್ನು ನೀಡುತ್ತಾ ಬಂದಿದೆ. ಆದರೆ ಭಕ್ತರ ಹೆಚ್ಚಾದಂತೆ ನಿಗದಿತ ಸಮಯದಲ್ಲಿ ಭಕ್ತರಿಗೆ ಅನ್ನಪ್ರಸಾದ ನೀಡುವುದು ಸವಾಲಾಗಿ ಪರಿಣಮಿಸಿದೆ. ಈ ಸಮಸ್ಯೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮತ್ತೊಂದು ವಿನೂತನ ವಿಧಾನವನ್ನು ಜಾರಿ ಮಾಡಲು ಮುಂದಾಗಿದೆ. ಏರ್ ಪೋರ್ಟ್ ಗಳಲ್ಲಿ ಪ್ರಯಾಣಿಕರ ಲಗೇಜ್ ಕನ್ವೇಯರ್ ಬೆಲ್ಟ್ ರೀತಿಯೇ ತಿರುಮಲದಲ್ಲೂ ಅನ್ನಪ್ರಸಾದ ನೀಡಲು ಮೂವಿಂಗ್ ಟೇಬಲ್ಸ್ ವಿಧಾನವನ್ನು ಜಾರಿ ಮಾಡಿದೆ.

ಮೂವಿಂಗ್ ಟೇಬಲ್ ವಿಧಾನ

ತಿರುಮಲದಲ್ಲಿ ಕ್ಯೂ ಲೈನ್‌ನಲ್ಲಿ ನಿಂತ ಭಕ್ತರ ಅನ್ನಪ್ರಸಾದ ಪೂರೈಕೆ ಮಾಡಲು ಟಿಟಿಡಿ ಎಂಜಿನಿಯರ್ ಗಳು ಮೂವಿಂಗ್ ಟೇಬಲ್ ವಿಧಾನವನ್ನು ಡಿಸೈನ್ ಮಾಡಿದ್ದಾರೆ. ಇದಕ್ಕೆ 10 ಲಕ್ಷ ರೂಪಾಯಿ ಖರ್ಚು ಮಾಡಿ, 7 ಮೀಟ್ ಉದ್ದದ ಯಂತ್ರವನ್ನು ತಯಾರಿಸಿದ್ದರೆ. ವಿಮಾನ ನಿಲ್ದಾಣದಲ್ಲಿ ಇರುವ ಲಗೇಜ್ ಕನ್ವೇರ್ ಬೆಲ್ಟ್ ರೀತಿಯೇ ಇದು ಕಾರ್ಯನಿರ್ವಹಿಸಲಿದೆ. ಭಕ್ತರು ಈ ಯಂತ್ರದ ಮೇಲಿರುವ ಆಹಾರ ಪ್ಲೇಟ್ ಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಪ್ಲ್ಯಾನ್ ಮಾಡಿದ್ದಾರೆ. ಈ ಹೊಸ ವಿಧಾನ ಶ್ರೀವಾರಿ ಸೇವಕರಿಗೆ ಸುಲಭವಾಗಿ ಕಾರ್ಯನಿರ್ವಹಿಸಲು ಸಹಕಾರಿಯಾಗಲಿದ್ದು, ಇದರಿಂದ ಸಮಯ ಉಳಿತಾಯ ಆಗಲಿದೆ. ಅಲ್ಲದೇ ವಿತರಣೆ ಸಂದರ್ಭದಲ್ಲಿ ನೂಕುನುಗ್ಗಲು ತಪ್ಪಲಿದೆ.

ತಿರುಮಲದಲ್ಲಿ ಭಕ್ತರು ಹೆಚ್ಚು ಸಮಯ ಕಾದು ನಿಲ್ಲುವ ಕ್ಯೂ ಲೈನ್ ಪಕ್ಕದಲ್ಲಿಯೇ ಈ ಟೇಬಲ್ ಗಳನ್ನು ಅಳವಡಿಸಲಾಗಿದೆ. ಶ್ರೀವಾರಿ ಸೇವಕರು ಮೊದಲೇ ಪ್ಲೇಟ್ ಗಳಲ್ಲಿ ಅನ್ನಪ್ರಸಾದವನ್ನು ಸಿದ್ಧ ಮಾಡಿರುತ್ತಾರೆ. ಆ ಬಳಿಕ ಅನ್ನಪ್ರಸಾದ ಪ್ಲೇಟ್ ಗಳನ್ನು ಮ್ಯೂವಿಂಗ್ ಟೇಬಲ್ ಮೇಲಿಡುತ್ತಾರೆ. ಖಾಲಿಯಾದ ಸ್ಥಳದಲ್ಲಿ ಮತ್ತೆ ಅನ್ನಪ್ರಸಾದ ಪ್ಲೇಟ್ ಗಳನ್ನು ನೀಡಲು ಅನುಕೂಲವಾಗಲಿದೆ.

ಭಕ್ತರ ಸಂತಸ

ಈ ಮೂವಿಂಗ್ ಟೇಬಲ್ ಗಳನ್ನು ಮೊದಲು ಪ್ರಯೋಗಾತ್ಮಕವಾಗಿ ತಿರುಮಲದ ರಿಂಗ್ ರೋಡ್ ಬಳಿ ಅಳವಡಿಕೆ ಮಾಡಿ ಪರಿಶೀಲನೆ ಮಾಡಲಾಗುತ್ತಿದೆ. ಕ್ಯೂ ಲೈನ್ ಪಕ್ಕದಲ್ಲಿಯೇ ಟೇಬಲ್ ಏರ್ಪಡಿಸಿರುವುದರಿಂದ ಭಕ್ತರಿಗೆ ಸುಲಭವಾಗಿ ಅನ್ನಪ್ರಸಾದ ಸಿಗಲಿದೆ. ಈ ಪದ್ಧತಿ ಬಗ್ಗೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಭಕ್ತರ ಸಂಖ್ಯೆ ಹೆಚ್ಚಾಗಿರುವ ಕ್ಯೂ ಲೈನ್ ಬಳಿಯೇ ಈ ಮೂವಿಂಗ್ ಟೇಬಲ್ ಗಳನ್ನು ಅಳವಡಿಕೆ ಮಾಡಲಾಗುತ್ತಿದೆ.

ತಿರುಮಲದಲ್ಲಿರುವ ವೈಕುಂಠ ಕ್ಯೂ ಕಾಂಪ್ಲೇಕ್ಸ್ 01, ಕ್ಯೂಕಾಂಪ್ಲೇಕ್ಸ್ 02, ನಾರಾಯಣಗಿರಿ ಬಳಿ ಶೇಡ್ ಗಳು ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಅಳವಡಿಕೆ ಮಾಡಲು ಟಿಟಿಡಿ ಯೋಜನೆಯನ್ನು ಸಿದ್ಧಪಡಿಸಿದೆ. ಇನ್ನು ಪ್ರಯೋಗಿಕ ಪರಿಶೀಲನೆ ಸಮಯದಲ್ಲಿ ಎದುರಾದ ಕೆಲವು ಸಮಸ್ಯೆಗಳನ್ನು ಗುರುತಿಸಿರುವ ಅಧಿಕಾರಿಗಳು ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದಾರೆ. ಈಗ ಇರುವ ಟೇಬಲ್ ಉದ್ದವನ್ನು 07 ಮೀಟರ್ ನಿಂದ 12 ಅಥವಾ 15 ಮೀಟರ್‌ಗೆ ಹೆಚ್ಚು ಮಾಡಲು ನಿರ್ಧಾರಿಸಿದ್ದಾರೆ. ಇದರೊಂದಿಗೆ ಶೀಘ್ರದಲ್ಲಿಯೇ ಭಕ್ತರಿಗೆ ಅನ್ನಪ್ರಸಾದವನ್ನು ಸುಲಭವಾಗಿ ನೀಡುವ ವಿಧಾನವನ್ನು ಟಿಟಿಡಿ ಜಾರಿ ಮಾಡಲಿದೆ.