ಬಂಧುವಿನ ಜಾಮೀನಿಗಾಗಿ ಸ್ಮಶಾನದಲ್ಲಿ ಹೈಕೋರ್ಟ್ ಚೀಫ್ ಜಸ್ಟೀಸ್ ಫೋಟೋ ಇಟ್ಟು ಕ್ಷುದ್ರ ಪೂಜೆ ನಡೆಸಲಾಗಿದೆ. ಆದರೆ ಪೂಜೆಯಲ್ಲಿ ಕೆಲ ಎಡವಟ್ಟುಗಳು ಸಂಭವಿಸಿದೆ. ಇದರ ಬೆನ್ನಲ್ಲೇ ತಂತ್ರಿ ಸೇರಿ ಇಬ್ಬರು ಅರೆಸ್ಟ್ ಆದ ಘಟನೆ ನಡೆದಿದೆ.
ರಾಯ್ಪುರ್ (ಆ.09) ಕಾರ್ಯಸಾಧಿಸಲು ಮಾಟ ಮಂತ್ರ ಮಾಡುವುದು ಭಾರತದಲ್ಲಿ ಈಗಲೂ ನಡೆಯುತ್ತಿದೆ.ಈ ಕುರಿತು ಪ್ರಕರಣಗಳು ದಾಖಲಾಗಿದೆ. ಇದೀಗ ತನ್ನ ಸಂಬಂಧಿಕನ ಜಾಮೀನಿಗಾಗಿ ವ್ಯಕ್ತಿಯೊಬ್ಬ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಫೋಟೋ ಇಟ್ಟು ಸ್ಮಶಾನದಲ್ಲಿ ಮಾಟ ಮಂತ್ರ ಮಾಡಿಸಿದ್ದಾನೆ. ಕ್ಷುದ್ರ ಪೂಜೆಯನ್ನು ಕೈಗೊಂಡಿದ್ದಾನೆ.ಆದರೆ ಪೂಜೆಯಲ್ಲಿ ಕೆಲ ಅನಾಚಾರಗಳು ನಡೆದಿದೆ. ಮಂತ್ರಗಳು ತಪ್ಪಾಗಿದೆ. ಪದ್ಧತಿ ಅದಲು ಬದಲಾಗಿದೆ. ಈ ಪೂಜೆ ಮುಗಿಯುವ ಮೊದಲೇ ಪೂಜೆ ನೇರವೇರಿಸಿದ ಮಾಂತ್ರಿಕ, ಪೂಜೆ ಮಾಡಿಸಿದ ವ್ಯಕ್ತಿ ಇಬ್ಬರು ಅರೆಸ್ಟ್ ಆದ ಘಟನೆ ಚತ್ತೀಸಘಡದ ಬಿಲಾಸಪುರದಲ್ಲಿ ನಡೆದಿದೆ.
ವಕೀರಲ ಬದಲು ಮಾಟ ಮಂತ್ರದ ಮೊರೆ
ದೇವ್ರಿ ಗ್ರಾಮದ ರಿಷಿಕೇಶ್ ಕುಮಾರ್ ಸಂಬಂಧಿ ಜೈಲಿನಲ್ಲಿ ಬಂಧಿಯಾಗಿದ್ದರು. ಈತನ ಜಾಮೀನಿಗಾಗಿ ವಕೀಲರು, ಕೋರ್ಟ್ ಮೊರೆ ಹೋಗುವ ಬದಲು ರಿಷಿಕೇಶ್ ಕುಮಾರ್ಗೆ ಕೆಲ ಆಪ್ತರು ಮಾಟ ಮಂತ್ರ ಹಾಗೂ ಕ್ಷುದ್ರ ಪೂಜೆ ಸಲಹೆ ನೀಡಿದ್ದಾರೆ. ಖರ್ಚು ಕೊಂಚ ದುಬಾರಿಯಾದರೂ ಜಾಮೀನು ಯಾಕೆ ದೋಷ ಮುಕ್ತನಾಗಿ ಬಿಡುಗಡೆಯಾಗುತ್ತಾನೆ ಎಂದಿದ್ದಾರೆ. ಈ ಮಾತು ಕೇಳಿದ ರಿಷಿಕೇಶ್ ಕುಮಾರ್ ಎಲ್ಲಾ ಏರ್ಪಾಡು ಮಾಡಿದ್ದಾನೆ.
ತಡ ರಾತ್ರಿ ಸ್ಮಶಾನದಲ್ಲಿ ಪೂಜೆ
ಪೂಜೆ ಮಾಡುವ ವ್ಯಕ್ತಿ ಒಂದು ದೊಡ್ಡ ಪಟ್ಟಿ ನೀಡಿದ್ದಾನೆ. ಹೈಕೋರ್ಟ್ನಲ್ಲಿ ಜಾಮೀನು ವಿಚಾರವಾಗಿರುವ ಕಾರಣ ಹೈಕೋರ್ಡ್ ನ್ಯಾಯಮೂರ್ತಿ ಫೋಟೋ ಬೇಕು ಎಂದಿದ್ದಾನೆ. ಹೀಗಾಗಿ ರಿಷಿಕೇಶ್ ಕುಮಾರ್ ನಗರಕ್ಕೆ ತೆರಳಿ ಲಿಸ್ಟ್ನಲ್ಲಿ ಸಾಮಾಗ್ರಿಗಳ ಪೈಕಿ ಚತ್ತೀಸಘಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಫೋಟೋ ಫ್ರೇಮ್ ಹಾಕಿಸಿ ತಂದಿದ್ದಾನೆ. ಬಳಿಕ ತಡ ರಾತ್ರಿ ಸ್ಮಶಾನದಲ್ಲಿ ಪೂಜೆಗಳು ಆರಂಭಗೊಂಡಿದೆ. ಮಾಟ ಮಂತ್ರದಲ್ಲಿ ಪ್ರಮುಖ ವಸ್ತು ನಿಂಬೆ ಸೇರಿದಂತೆ ಹಲವು ವಸ್ತುಗಳು, ಕುಂಕುಮ ಸೇರಿದಂತೆ ಹಲವು ವಸ್ತುಗಳು, ಅಗ್ನಿ ಕುಂಡಗಳನ್ನಿಟ್ಟು ಕ್ಷುದ್ರ ಪೂಜೆ, ಮಾಟ ಮಂತ್ರಗಳು ಆರಂಭಗೊಂಡಿದೆ.
ಹೈಕೋರ್ಟ್ ಜಡ್ಜ್ ಫೋಟೋ ಇಟ್ಟು ಸಂಬಂಧಿಕನ ಜಾಮೀನಿಗಾಗಿ ಮಾಟ ಮಂತ್ರ ಜೊತೆಗೆ ಕ್ಷುದ್ರ ಪೂಜೆ ಆರಂಭಗೊಂಡಿದೆ. ಇದೇ ವೇಳೆ ಸ್ಥಳೀಯರಿಗೆ ತಡ ರಾತ್ರಿಯಲ್ಲಿ ಅನುಮಾನಸ್ಪದ ನಡೆ ಗಮನಕ್ಕೆ ಬಂದಿದೆ. ಹೀಗಾಗಿ ಸ್ಥಳೀಯರು ಒಂದಷ್ಟು ಜನ ನೇರವಾಗಿ ಸ್ಮಶಾನದತ್ತ ಮೇಲ್ಲನೆ ಆಗಮಿಸಿದ್ದಾರೆ. ಈ ವೇಳೆ ಗುಟ್ಟಾಗಿ ಏನೋ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಯಾರನ್ನೋ ಹತ್ಯೆ ಮಾಡಿ ಹೂತು ಹಾಕುವ ಪ್ರಯತ್ನ ಎಂದು ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸ್
ಸ್ಥಳೀಯರು ನೀಡಿದ ಮಾಹಿತಿ ಪಡೆದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಈ ವೇಳೆ ರಿಷಿಕೇಶ್ ಕುಮಾರ್ ಆಪ್ತರು ಪರಾರಿಯಾಗಿದ್ದಾರೆ. ಪೂಜೆ ನಡೆಸಿದ ವ್ಯಕ್ತಿ ಹಾಗೂ ರಿಷಿಕೇಶ್ ಕುಮಾರ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸ್ಥಳದಿಂದ ಹೈಕೋರ್ಟ್ ನ್ಯಾಯಮೂರ್ತಿ ಫೋಟೋ ಸೇರಿದಂತೆ ಹಲವು ವಸ್ತಗಳ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ವೃತದಲ್ಲಿ ಎಡವಟ್ಟು ಎಂದ ಹಲವರು
ಅರೆಸ್ಟ್ ಘಟನೆ ಗ್ರಾಮದಲ್ಲಿ ಹಬ್ಬಿದೆ. ಇತ್ತ ಮಾಟ ಮಂತ್ರಗಳಲ್ಲಿ ಜನಪ್ರಿಯನಾಗಿದ್ದ ಮಾಂತ್ರಿಕ ಕೂಡ ಅರೆಸ್ಟ್ ಆಗಿರುವುದು ಹಲವು ಚರ್ಚೆಗೆ ಕಾರಣವಾಗಿತ್ತು. ಮಾಂತ್ರಿಕ ಪೂಜೆ ಸರಿಯಾಗಿ ಮಾಡಲಿಲ್ಲ, ನಿರ್ಲಕ್ಷ್ಯವಹಿಸಿದ್ದಾರೆ ಎಂದರೆ, ಮತ್ತೆ ಕೆಲವರು ರಿಷಿಕೇಶ್ ಕುಮಾರ್ ವೃತ ಕೈಗೊಂಡಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇಷ್ಟಾದರೂ ಜಾಮೀನಿಗಾಗಿ ಮಾಟ ಮಂತ್ರ ಬಿಟ್ಟು ವಕೀರಲ ಬಳಿ ಹೋಗಬೇಕಿತ್ತು ಎಂದವರು ವಿರಳ.

