ದೇಶದೆಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮಾಚರಣೆ: ಪರಸ್ಪರ ಶುಭಾಶಯ ಕೋರಿದ ಮುಸ್ಲಿಂ ಬಾಂಧವರು
ಇಂದು ದೇಶದೆಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ. ಸಾಮೂಹಿಕ ಪ್ರಾರ್ಥನೆಯ ಮೂಲಕ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗನ ಮಾಡಿ, ಶುಭಾಷಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು.
ಬೆಂಗಳೂರು (ಜು.10): ಇಂದು ದೇಶದೆಲ್ಲೆಡೆ ಬಕ್ರೀದ್ ಹಬ್ಬದ ಸಂಭ್ರಮ. ಸಾಮೂಹಿಕ ಪ್ರಾರ್ಥನೆಯ ಮೂಲಕ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗನ ಮಾಡಿ, ಶುಭಾಷಯ ವಿನಿಮಯ ಮಾಡಿಕೊಂಡಿದ್ದು ವಿಶೇಷವಾಗಿತ್ತು. ವಿಶ್ವದಾದ್ಯಂತ ಇಂದು ಬಕ್ರೀದ್ ಹಬ್ಬವನ್ನು ಆಚರಿಸಲಾಯ್ತು. ತ್ಯಾಗ ಬಲಿದಾನದ ಸಂಕೇತವಾಗಿ, ಪ್ರಾಣಿ ಅಂಗಾಂಗವನ್ನು ಮೂರು ಭಾಗವಾಗಿಸಿ, ಅದನ್ನ ಹಂಚುವ ಮೂಲಕ ಈ ಬಕ್ರೀದ್ ಹಬ್ಬವನ್ನು ಶ್ರದ್ಧೆ ಭಕ್ತಿಯಿಂದ ಮುಸ್ಲಿಂ ಬಾಂಧವರು ಆಚರಿಸುತ್ತಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಕ್ರೀದ್ ಹಬ್ಬದ ಆಚರಣೆ ಜೋರಾಗಿತ್ತು. ನಗರದ ಚಾಮರಾಜಪೇಟೆಯ ಆಟದ ಮೈದಾನದಲ್ಲಿ ಮಾಜಿ ಸಚಿವ ಜಮೀರ್ ಅಹಮ್ಮದ , ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಸಾವಿರಾರು ಮುಸಲ್ಮಾನರು ಪ್ರಾರ್ಥನೆ ಮಾಡುವ ಮೂಲಕ ಬಕ್ರೀದ್ ಹಬ್ಬವನ್ನು ಆಚರಿಸಿದರು. ಸಿದ್ದರಾಮಯ್ಯ ಅವರು ಕಪ್ಪು ಟೋಪಿಯನ್ನು ಧರಿಸಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು .ಇವತ್ತು ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
Eid-ul-Adha 2022: ಬಕ್ರೀದ್ ಯಾವಾಗ? ಏಕೆ ಆಚರಿಸಲಾಗುತ್ತದೆ?
ಇನ್ನು ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳು ಕೂಡ ಭಾಗಿಯಾಗಿ ನಮಾಜ್ ಮಾಡಿದ್ದು, ಬಕ್ರಿದ್ ಹಬ್ಬದ ಹಿನ್ನೆಲೆ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಬಿಗಿ ಪೊಲೀಸ್ ಬಂದ್ ಬಸ್ತೋ ಒದಗಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಆಗದಂತೆ 1 ಡಿಸಿಪಿ 3 ಎಸಿಪಿ 6 ಇನ್ಸ್ ಪೆಕ್ಟರ್ 11 ಪಿ ಎಸ್ ಐ 21 ಎ ಎಸ್ ಐ 500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.
ನಮಾಜ್ ಬಳಿಕ ಸಿದ್ದು ಟೆಂಪಲ್ ರನ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈದ್ಗಾ ಮೈದಾನದಲ್ಲಿ ನಡೆದ ನಮಾಜ್ನಲ್ಲಿ ಭಾಗವಹಿಸಿ ಪಕ್ಕದಲ್ಲಿ ಇದ್ದ ಮಲೆಮಹದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ದೇವರಿಗೆ ಪೂಜೆ ಸಲ್ಲಿಸಿ ಅಲ್ಲಿಂದ ತೆರಳಿದರು.
ಗೋಹತ್ಯೆ ಕಾನೂನು ಉಲ್ಲಂಘಿಸದೆ ಬಕ್ರೀದ್ ಬಲಿಗೆ ಸರ್ಕಾರ ಸೂಚನೆ: ಬಕ್ರೀದ್ ಹಬ್ಬದ ದಿನದ ಸಾಮೂಹಿಕ ಪ್ರಾರ್ಥನೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು, ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆಯಾಗದಂತೆ ಖುರ್ಬಾನಿಯನ್ನು (ಪ್ರಾಣಿ ಬಲಿದಾನ) ನೆರವೇರಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಮುಸ್ಲಿಂ ಬಾಂಧವರು ಭಾನುವಾರ ಬಕ್ರೀದ್ ಹಬ್ಬವನ್ನು ರಾಜ್ಯಾದ್ಯಂತ ಆಚರಿಸಲಿದ್ದಾರೆ ಎಂದು ರಾಜ್ಯ ಚಂದ್ರದರ್ಶನ ಸಮಿತಿ ಘೋಷಿಸಿದೆ.
Bengaluru News: ಬಕ್ರೀದ್: ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಸೂಚನೆ
ಹಬ್ಬದ ದಿನದಂದು ಮುಸ್ಲಿಂ ಬಾಂಧವರು ಈದ್ಗಾ ಮೈದಾನ, ಮಸೀದಿಯಲ್ಲಿ ಬೆಳಗ್ಗೆ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಧಾರ್ಮಿಕ ಆಚರಣೆಯ ಪ್ರಯುಕ್ತ ಹಬ್ಬದ ದಿನ ಸೇರಿದಂತೆ ಮೂರು ದಿನ ಖುರ್ಬಾನಿ ನೀಡುವ ಸಂಪ್ರದಾಯ ಇದೆ. ಹಬ್ಬವನ್ನು ಶಾಂತಿ, ಸುವ್ಯವಸ್ಥೆ ಮತ್ತು ಸಾಮರಸ್ಯದೊಂದಿಗೆ ಆಚರಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದೆ. ಖುರ್ಬಾನಿಯನ್ನು ಸಾರ್ವಜನಿಕ ಪ್ರದೇಶ, ರಸ್ತೆಗಳು, ಶಾಲಾ-ಕಾಲೇಜು, ಆಸ್ಪತ್ರೆ ಅವರಣ, ಉದ್ಯಾನವನ ಮತ್ತು ಇತರೆ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲಾಗಿದೆ.