Bengaluru News: ಬಕ್ರೀದ್: ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಸೂಚನೆ
Bakrid Festival Guidelines in Bengaluru: ನಗರದ ಪ್ರತಿ ಏರಿಯಾಗಳಿಗೆ ತೆರಳಿ ಪೊಲೀಸರು ಬಕ್ರೀದ್ ಹಬ್ಬ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅನೌನ್ಸ್ ಮಾಡುತ್ತಿದ್ದಾರೆ.
ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು
ಬೆಂಗಳೂರು (ಜು. 08): ಬೆಂಗಳೂರಿನಲ್ಲಿ ಬಕ್ರೀದ್ ಹಬ್ಬ (Bakrid Festival) ಆಚರಣೆ ಹಿನ್ನಲೆ ಪೊಲೀಸ್ ಇಲಾಖೆಯಿಂದ ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ (Bengaluru) ಪ್ರತಿ ಏರಿಯಾಗಳಿಗೆ ತೆರಳಿ ಪೊಲೀಸರು ಬಕ್ರೀದ್ ಹಬ್ಬ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಅನೌನ್ಸ್ ಮಾಡುತ್ತಿದ್ದಾರೆ. ಬಕ್ರೀದ್ ಹಬ್ಬ ಆಚರಣೆ ಮಾಡಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸರು ತಿಳಿಸಿಕೊಡುತ್ತಿದ್ದಾರೆ. ಹೆಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಮೈಕ್ ಮೂಲಕ ಅನೌನ್ಸ್ ಮಾಡುತ್ತಿದ್ದಾರೆ.
ಇನನ್ನು ರಾಜ್ಯ ಸರ್ಕಾರ ಬಕ್ರೀದ್ ಹಬ್ಬ ಆಚರಣೆ ಬಗ್ಗೆ ಸುತ್ತೋಲೆ ಹೊರಡಿಸಿದೆ. ಬಕ್ರೀದ್ ಹಬ್ಬದ ದಿನ ಕೋವಿಡ್ -19 ಮಾರ್ಗ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಕರ್ನಾಟಕ ಜಾನುವಾರ ಹತ್ಯೆ ಪ್ರತಿಬಂಧಕ ಕಾಯ್ದೆ ನಿಯಮ ಉಲ್ಲಂಘನೆಯಾಗದಂತೆ ಖುರ್ಬಾನಿ (ಪ್ರಾಣಿ ಬಲಿದಾನ) ಮಾಡಬೇಕು. ಖುರ್ಬಾನಿ ಮಾಡುವಾಗ ಸಾರ್ವಜನಿಕ ಪ್ರದೇಶ,ರಸ್ತೆಗಳು ,ಶಾಲಾ ಕಾಲೇಜು ,ಆಸ್ಪತ್ರೆ ಆವರಣ ,ಉದ್ಯಾನ ನಿಷೇಧಿಸಲಾಗಿದೆ. ಜಿಲ್ಲಾಡಳಿತ ,ಸ್ಥಳೀಯ ಆಡಳಿತ ಸಂಸ್ಥೆಯ ನಿಗಧಿಪಡಿಸಿದ ಸ್ಥಳಗಳಲ್ಲಿ ಮಾತ್ರ ಖುರ್ಬಾನಿ ಮಾಡುವಂತೆ ತಿಳಿಸಲಾಗಿದೆ. ಪೊಲೀಸ್ ಇಲಾಖೆ, ಪಶು ಪಾಲನಾ ,ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ಪಾಲಿಸುವುದು ಕಡ್ಡಾಯವಾಗಿದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬಕ್ರೀದ್ ಹಬ್ಬದಲ್ಲಿ ಗೋವುಗಳ ಸಾಗಾಟಕ್ಕೆ ಕಡಿವಾಣ: ಸಚಿವ ಪ್ರಭು ಚವ್ಹಾಣ್
ರಸ್ತೆಯಲ್ಲಿ ಪ್ರಾರ್ಥನೆಗೆ ಅವಕಾಶ ಇಲ್ಲ: :ಬಕ್ರೀದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ರಸ್ತೆಗಳನ್ನು ಬಂದ್ ಮಾಡಿ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುವಂತೆ ಹಬ್ಬದ ಪ್ರಾರ್ಥನೆ ಮಾಡುವಂತಿಲ್ಲ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಬ್ಬದ ಪ್ರಾರ್ಥನೆಗೆ ರಸ್ತೆ ಬಂದ್ ಮಾಡುವುದು. ಟ್ರಾಫಿಕ್ ಸಿಗ್ನಲ್ನಲ್ಲಿ ಚಾಪೆ ಹಾಸುವುದಕ್ಕೆ ಅವಕಾಶ ಇಲ್ಲ. ಸಂಚಾರ ದಟ್ಟಣೆಯಾಗದಂತೆ ತಡೆಯುವುದು ಪೊಲೀಸ್ ಇಲಾಖೆ ಕರ್ತವ್ಯ. ಅವರು ಬಿಬಿಎಂಪಿಯಿಂದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಯಾವುದೇ ಸಹಕಾರ ಕೇಳಿದರೂ ಸ್ಪಂದಿಸುತ್ತೇವೆ.
ಅವರು ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ಚಾಮರಾಜಪೇಟೆಯ ಈದ್ಗಾ ಮೈದಾನ ಯಾರ ಸ್ವತ್ತು ಎನ್ನುವ ವಿವಾದದ ನಡುವೆಯೇ ಈದ್ಗಾ ಮೈದಾನದಲ್ಲಿ ಬಕ್ರೀದ್ ಪ್ರಾರ್ಥನೆಗೆ ಯಾವುದೇ ಅಡ್ಡಿಯಿಲ್ಲ. ಅಲ್ಲಿ ನಮಾಜ್ ಮಾಡಲು ಸುಪ್ರೀಂ ಕೋರ್ಚ್ ಅವಕಾಶ ನೀಡಿದೆ. ಹೀಗಾಗಿ ಮುಸ್ಲಿಮ್ ಸಮುದಾಯದ ಹಬ್ಬದ ಪ್ರಾರ್ಥನೆಗೆ ಅಡ್ಡಿಯಿಲ್ಲ. ಪ್ರತಿ ವರ್ಷದಂತೆ ಈ ಬಾರಿಯೂ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅವರಿಗೆ ಅನುಮತಿ ಕೊಡಬೇಕೋ, ಬೇಡವೋ ಎಂಬ ಪ್ರಶ್ನೆ ಬಿಬಿಎಂಪಿಯ ಮುಂದಿಲ್ಲ ಎಂದು ತಿಳಿಸಿದರು.