ಕಾಶ್ಮೀರ ಪುರವಾಸಿನಿಯ ಉಗ್ರರೂಪ: ದೇಶದ್ರೋಹಿಗಳ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ...

Synopsis
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿರುವ ಉಗ್ರರ ದಾಳಿಯ ಕುರಿತು ಬ್ರಹ್ಮಾಂಡ ಗುರೂಜಿ ಹೇಳಿದ್ದೇನು? ದೇಶದ್ರೋಹಿಗಳ ಬಗ್ಗೆ ಅವರು ನುಡಿದ ಭವಿಷ್ಯವೇನು?
ಸೌಮ್ಯವಾಗಿರುವ ದೇವಿ ಉಗ್ರ ರೂಪ ತಾಳಲು ಕ್ರೌರ್ಯದಂಥ ಘಟನೆಗಳು ನಡೆಯುತ್ತವೆ. ಶತ್ರು ಸಂಹಾರ ಮಾಡುವ ಸಂದರ್ಭದಲ್ಲಿ ಕೆಲವು ಪ್ರಾಣಗಳಿಗೆ ಹಾನಿಯಾಗುತ್ತದೆ. ಕಾಶ್ಮೀರದ ಪಹಲ್ಗಾಮ್ನಲ್ಲಿ ಆಗಿರುವುದೂ ಅದೇ. ಅಲ್ಲಿ ಹಲವಾರು ಶತಮಾನಗಳ ಬಳಿಕ ತಾಯಿ ಶಾರದಾಂಬೆ ತನ್ನ ತವರು ಕಾಶ್ಮೀರದಲ್ಲಿ ವಿರಾಜಮಾನಳಾಗಿದ್ದಾಳೆ. ಕಾಶ್ಮೀರದ ಕುಪ್ವಾರದಲ್ಲಿ ಶ್ರೀ ಶೃಂಗೇರಿ ಶಾರದಾಪೀಠ ಮರುಸ್ಥಾಪಿಸಿದ, ಶಾರದಾಮಾತೆಯ ಮಂದಿರ ಉದ್ಘಾಟನೆಯಾಗಿದೆ. ದೇಶದ್ರೋಹಿಗಳ ಸರ್ವನಾಶಕ್ಕೆ ಆ ತಾಯಿಗೆ ಉಗ್ರರೂಪ ತಾಳುವ ಕಾಲ ಬಂದಿದೆ. ಈ ಘಟನೆ ಬಳಿಕ ಯುದ್ಧಕ್ಕಿಂತಲೂ ಮಿಗಿಲಾಗಿ ಪ್ರಕೃತಿಯೇ ಪಾಠ ಕಲಿಸುತ್ತದೆ. ಅದು ಘನಘೋರ ಆಗಿರುತ್ತದೆ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ.
ಪಹಲ್ಗಾಮ್ನಲ್ಲಿ ನಡೆದಿರುವ ನರಮೇಧದ ಕುರಿತು ಮಾಧ್ಯಮಗಳು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಮೂರನೆಯ ಮಹಾಯುದ್ಧ ನಡೆಯುತ್ತದೆ ಎಂದು ಎಂದೋ ಸಾರಿಯಾಗಿದೆ. ಆದರೆ ಕಾಶ್ಮೀರದ ಈ ಘಟನೆಯಲ್ಲಿ ಪ್ರಕೃತಿ ಪಾಠ ಕಲಿಸಲಿದೆ. ಕಾಶ್ಮೀರ ಪುರವಾಸಿನಿ ಪುನಃ ವಿರಾಜಮಾನಳಾಗಿದ್ದಾಳೆ. ಹಿಂದೂಗಳ ಮೇಲೆ ಆಗಿರುವ ದೌರ್ಜನ್ಯದ ಬಳಿಕ ಆಕೆ ಉಗ್ರರೂಪ ತೋರಿಸಲಿದ್ದಾಳೆ. ಇದು ದೇಶದ್ರೋಹಿಗಳಿಗೆ ಪ್ರಕೃತಿಯ ಮೂಲಕವೇ ಪಾಠ ಕಲಿಸಲಿದ್ದಾಳೆ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ. ದಂಡಂ ದಶಗುಣಂ ಎನ್ನುವುದು ಇಂಥವರಿಗೆ ಹೇಳಿ ಮಾಡಿಸಿರುವಂಥದ್ದು, ದಂಡದಿಂದಲೇ ಇವರಿಗೆ ಪ್ರಕೃತಿ ಮಾತೆ ಬುದ್ಧಿ ಕಲಿಸಲಿದ್ದಾಳೆ ಎಂದಿದ್ದಾರೆ.
ಆರ್ಟಿಕಲ್ 370 ರದ್ದುಗೊಳಿಸಿದ ಬಳಿಕ, ಅಂದಹಾಗೆ, 2023ರ ಜನವರಿಯಲ್ಲಿ ಜಮ್ಮು ಕಾಶ್ಮೀರದ ಭಾರತ- ಪಾಕ್ ಗಡಿ ನಿಯಂತ್ರಣ ರೇಖೆ ಬಳಿ ಶಾರದಾ ದೇವಿ ಮಂದಿರವನ್ನು ಪುನರ್ ನಿರ್ಮಿಸಲಾಗಿದೆ. ಇದರ ಜೊತೆಗೆ, ಜಮ್ಮು ಕಾಶ್ಮೀರದಲ್ಲಿ ದೇವಸ್ಥಾನ ಮತ್ತು ಸೂಫಿ ಸ್ಥಳಗಳೂ ಸೇರಿದಂತೆ ಒಟ್ಟು 123 ಕ್ಷೇತ್ರಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಇನ್ನು ಇದರ ಇತಿಹಾಸದ ಕುರಿತು ಹೇಳುವುದಾದರೆ, ಶತಮಾನಗಳ ಹಿಂದೆ ಶಂಕರಾಚಾರ್ಯರು ಕಾಶ್ಮೀರದ ತಿತ್ವಾಲ್ ನಲ್ಲಿ ಸ್ಥಾಪಿಸಿದ್ದ ಶಾರದಾಂಬೆ ದೇಗಲು 1948ರಲ್ಲಿ ಸಂಪೂರ್ಣ ಹಾಳಾಗಿತ್ತು. ಕಾಶ್ಮೀರಿ ಪಂಡಿತರು ಎರಡ್ಮೂರು ಬಾರಿ ಶೃಂಗೇರಿಗೆ ಭೇಟಿ ನೀಡಿ, ಕಾಶ್ಮೀರದ ದೇಗುಲವನ್ನು ಪುನರ್ ಪ್ರತಿಷ್ಠಾಪಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದರು. ಕಾಶ್ಮೀರಿ ಪಂಡಿತರ ಮನವಿಯಂತೆ ಶೃಂಗೇರಿ ಜಗದ್ಗುರುಗಳು ತಿತ್ವಾಲ್ ನಲ್ಲಿ ಶೃಂಗೇರಿ ಶಾರದಾಂಬೆಯ ದೇಗುಲವನ್ನು ಪುನರ್ ಪ್ರತಿಷ್ಠಾಪಿಸಲು ಸಹಕಾರ ನೀಡಿದ್ದರು. ಅದರಂತೆ, ಶೃಂಗೇರಿಯಿಂದಲೇ ಪಂಚಲೋಹದ ಶಾರದಾಂಬೆ ಮೂರ್ತಿ ನಿರ್ಮಾಣಗೊಂಡು ಕಾಶ್ಮೀರಕ್ಕೆ ತೆಗೆದುಕೊಂಡು ಹೋಗಿ ಪ್ರತಿಷ್ಠಾಪಿಸಲಾಗಿದೆ.
ಶಾರದಾಂಬೆ ವಿಗ್ರಹದ ಪುನರ್ ಪ್ರತಿಷ್ಠಾಪನೆಗೆ ಶೃಂಗೇರಿ ಮಠದಿಂದಲೇ ಋತ್ವಿಜರ ತಂಡವನ್ನು ಕಳಿಸಲಾಗಿತ್ತು. ವಾಸ್ತುಹೋಮ, ಕಲಾ ಹೋಮ ಸೇರಿದಂತೆ ತಿತ್ವಾಲ್ ನ ಶಾರದಾಂಬೆ ದೇಗುಲದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ಗಣಹೋಮ ದೊಂದಿಗೆ ಕಾರ್ಯಕ್ರಮ ಆರಂಭಗೊಂಡು ವಿಧುಶೇಖರ ಶ್ರೀಗಳ ಸಮ್ಮುಖದಲ್ಲಿ ಶಾರದಾಂಬೆ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಕುಂಭಾಭಿಷೇಕ ಹಾಗೂ ಕಲಶೋತ್ಸವ ಕಾರ್ಯಕ್ರಮ ನಡೆದಿತ್ತು. ಈ ಶಾರದಾಂಬೆಯೀಗ ಉಗ್ರರೂಪ ತಾಳಿದ್ದು, ಉಗ್ರರನ್ನು ಮಟ್ಟ ಹಾಕಲಿದ್ದಾಳೆ ಎಂದಿದ್ದಾರೆ ಬ್ರಹ್ಮಾಂಡ ಗುರೂಜಿ.