Survivor's Story: ಹಿಂದೂ- ಮುಸ್ಲಿಂ ಬೇರೆ ಬೇರೆ ನಿಲ್ಲಿ ಎಂದ್ರು... ಆಮೇಲೆ... ಅಪ್ಪನ ಸಾವಿನ ಭಯಾನಕತೆ ತೆರೆದಿಟ್ಟ ಬಾಲಕ

Synopsis
ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿಗೆ ಬಲಿಯಾದ ಪ್ರವಾಸಿಗರೊಬ್ಬರ ಮಗ ಅಂದು ನಡೆದ ಘಟನೆಯ ಬಗ್ಗೆ ವಿವರ ನೀಡಿದ್ದು ಹೀಗೆ...
'ನಾವು ಪಹಲ್ಗಾಮ್ ಹೋಗಿದ್ವಿ. ಅಲ್ಲಿ ಕುದುರೆ ಮೇಲೆ ಹೋಗಬೇಕಿತ್ತು. ಹೋಗುವಷ್ಟರಲ್ಲಿಯೇ ಭಯೋತ್ಪಾದಕರು ಅಲ್ಲಿಗೆ ಬಂದರು. ನಾವು ಅನೇಕ ಮಂದಿ ಇದ್ವಿ. ಉಗ್ರರು ಅಲ್ಲಿಗೆ ಬಂದವರೇ ಹಿಂದೂ ಮತ್ತು ಮುಸ್ಲಿಮರು ಬೇರೆ ಬೇರೆ ನಿಲ್ಲಿ ಎಂದರು. ಮುಸ್ಲಿಮರ ಕಡೆ ನಿಂತವರಿಗೆ ಕಲ್ಮಾ ಹೇಳುವಂತೆ ಹೇಳಿದರು. ನಂತರ ಹಿಂದೂಗಳು ಇದ್ದ ಕಡೆಗೆ ಗುಂಡಿನ ದಾಳಿ ನಡೆಸಿದರು. ನನ್ನ ಅಪ್ಪನೂ ಗುಂಡಿನ ದಾಳಿಗೆ ಬಲಿಯಾದರು. ಅವರು ನನ್ನ ಮತ್ತು ಅಮ್ಮನನ್ನು ಬೇರೆ ಕಡೆಗೆ ಕಳುಹಿಸಿದರು. ಅಷ್ಟರಲ್ಲಿ ನನ್ನ ಅಪ್ಪ ಸತ್ತು ಹೋಗಿದ್ದರು...'
ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ 26 ಮಂದಿಯ ಮಾರಣಹೋಮದಲ್ಲಿ ಜೀವ ಕಳೆದುಕೊಂಡ ಪ್ರವಾಸಿಗರೊಬ್ಬರ ಮಗ ತೆರೆದಿಟ್ಟ ಭಯಾನಕ ಸತ್ಯವಿದು! ತನ್ನ ಮತ್ತು ಅಮ್ಮನ ಕಣ್ಣೆದುರೇ ಅಲ್ಲಿದ್ದ ಹಿಂದೂಗಳನ್ನು ಹೇಗೆ ಕೊಂದರು ಎಂದು ಈ ಬಾಲಕ ಹೇಳಿದ್ದಾನೆ. ಹಿಂದೂ- ಮುಸ್ಲಿಮ್ ಭೇದಭಾವವೇ ಗೊತ್ತಿಲ್ಲದ ಈ ಎಳೆಯ ಮನಸ್ಸಿಗೆ ಈಗ ಯಾವ ರೀತಿಯ ಭಾವನೆ ಬಿತ್ತಿರಬಹುದು ಎಂಬ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಉಗ್ರರು ಪ್ರವಾಸಿಗರನ್ನು ಸಾಯಿಸುವ ಮುನ್ನ ನೀನು ಹಿಂದೂನಾ ಎಂದು ಕೇಳಿಯೇ ಇಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತೆಯೊಬ್ಬಳು ನಿನ್ನೆ, ಜೋರಾಗಿ ಭಾಷಣ ಮಾಡುತ್ತಿರುವ ವಿಡಿಯೋ ವೈರಲ್ ಆಗಿರುವ ನಡುವೆಯೇ ಈ ಬಾಲಕನ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆಗೆ ಇರುವ ಆ ಯುವತಿಗೆ ಈ ವಿಡಿಯೋ ಲಿಂಕ್ ಕಳುಹಿಸಿ ಎಂದು ಜಾಲತಾಣದಲ್ಲಿ ನಿಜವಾದ ಹಿಂದೂಗಳ ಆಗ್ರಹ ಜೋರಾಗಿ ಕೇಳಿಬರುತ್ತಿದೆ.
ಕಾಶ್ಮೀರದಲ್ಲಿ ಉಗ್ರರು ನಡೆಸಿರುವ 26 ಮಂದಿಯ ನರಮೇಧಕ್ಕೆ ನಿಜವಾದ ಭಾರತೀಯರೆಲ್ಲರೂ ಕೊತಕೊತ ಕುದಿಯುತ್ತಿದ್ದಾರೆ. ಹಿಂದೂಗಳ ಮೇಲೆ ನಡೆದಿರುವ ಈ ಹತ್ಯಾಕಾಂಡಕ್ಕೆ ನಿಜವಾದ ದೇಶಪ್ರೇಮಿಗಳ ಮನದಲ್ಲಿ ಕಿಚ್ಚು ಹೊತ್ತಿ ಉರಿದಿದೆ. ಉಗ್ರರನ್ನು, ಅವರಿಗೆ ರಕ್ಷಣೆ ನೀಡುತ್ತಿರುವವರನ್ನು ಮಟ್ಟ ಹಾಕುವವರೆಗೂ ನಿಜವಾದ ಭಾರತೀಯರಿಗೆ ನೆಮ್ಮದಿ ಇಲ್ಲ. ಹೆಂಡತಿ- ಮಕ್ಕಳ ಎದುರಿನಲ್ಲಿಯೇ ಹಿಂದೂ ಗಂಡಸರನ್ನು ಕೊಲೆ ಮಾಡಿರುವ ಪಾತಕಿಗಳಿಗೆ ಏಳೇಳು ಜನ್ಮದಲ್ಲಿಯೂ ನಡುಕು ಹುಟ್ಟಿಸುವಂಥ ಶಿಕ್ಷೆ ಆಗಬೇಕು ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿರುವ ನರಮೇಧಕ್ಕೆ ಭಾರತ ಕೊಡುತ್ತಿರುವ ಮರ್ಮಾಘಾತ ಮುಂದುವರೆಯುತ್ತಲೇ ಇದೆ. ಹಿಂದೂಗಳ ಹತ್ಯೆ ಮಾಡಿದವರು ಕನಸಿನಲ್ಲಿಯೂ ಊಹಿಸಿಕೊಳ್ಳಲಾಗದ ಪೆಟ್ಟು ನೀಡುತ್ತೇನೆ ಎಂದು ಇದಾಗಲೇ ಪ್ರಧಾನಿ ನರೇಂದ್ರ ಮೋದಿ ಮಾತು ಕೊಟ್ಟಾಗಿದೆ. ಸಿಂಧೂ ಜಲ ಒಪ್ಪಂದ (ಇಂಡಸ್ ವಾಟರ್ಸ್ ಟ್ರೀಟಿ - ಐಎಬ್ಲ್ಯುಟಿ) ಎಂಬ ಸಿಂಧೂ ನದಿಯ ನೀರಿನ ಹಂಚಿಕೆಯ ಕುರಿತು ಪಾಕಿಸ್ತಾನದೊಡನೆ ಮಾಡಿಕೊಂಡಿದ್ದ 65 ವರ್ಷ ಹಳೆಯ ಒಪ್ಪಂದವನ್ನು ಭಾರತ ಇದಾಗಲೇ ಅಮಾನತುಗೊಳಿಸಿದೆ. ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ತನಕ ಸಿಂಧೂ ಜಲ ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಘೋಷಿಸಿದೆ. ದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್ನಿಂದ ಎಲ್ಲಾ ರಕ್ಷಣಾ, ನೌಕಾ ಮತ್ತು ವಾಯು ಸಲಹೆಗಾರರನ್ನು ಹೊರಹಾಕಿದೆ. ಈ ವ್ಯಕ್ತಿಗಳನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ ಮತ್ತು ಒಂದು ವಾರದೊಳಗೆ ದೇಶವನ್ನು ತೊರೆಯುವಂತೆ ಸೂಚಿಸಲಾಗಿದೆ. ಪಾಕಿಸ್ತಾನ ಸರ್ಕಾರದ ಎಕ್ಸ್ ಖಾತೆಯನ್ನು ಭಾರತ ಸ್ಥಗಿತಗೊಳಿಸಿದೆ. ಪಾಕಿಸ್ತಾನ ಹಾಗೂ ಇಂಥ ಉಗ್ರರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲ ಸೂಚಿಸುತ್ತಿರುವವರನ್ನು ಸಂಪೂರ್ಣ ಮಟ್ಟ ಹಾಕುವ ಕೂಗು ಕೂಡ ಜೋರಾಗಿದೆ.
ಪಾಕ್ಗೆ ಡಿಜಿಟಲ್ ಮರ್ಮಾಘಾತ ಕೊಟ್ಟ ಭಾರತ: ಇದು ಟ್ರೈಲರ್ ಅಷ್ಟೇ... ಪಿಚ್ಚರ್ ಇನ್ನೂ ಬಾಕಿ ಇದೆ...