Asianet Suvarna News Asianet Suvarna News

ಐತಿಹಾಸಿಕ ಧರ್ಮದ ಗುಡ್ಡದಲ್ಲಿ 'ದೇವರ ಬನ್ನಿ' ಉತ್ಸವ

ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಧರ್ಮದಗುಡ್ಡದಲ್ಲಿ ವಿಜಯನಗರ ಅರಸರ ಕಾಲದಿಂದಲೂ ಆಚರಣೆಯಲ್ಲಿರುವ  'ದೇವರ ಬನ್ನಿ' ಉತ್ಸವವನ್ನು ವಿಜಯನಗರ ಜಿಲ್ಲೆ, ನಾಡಿನ ಇತರೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಮಂಗಳವಾರ ಸಂಜೆ ಶಕ್ತಿ ದೇವತೆಗಳ ಸಮ್ಮಿಲನವನ್ನು ಕಣ್ತುಂಬಿಕೊಂಡು ಉತ್ಸವಕ್ಕೆ ಸಾಕ್ಷಿಯಾದರು.

Banni Utsav at the historic village Dharmada gudda at vijayanagar
Author
First Published Oct 5, 2022, 1:04 PM IST

ವಿಜಯನಗರ (ಅ.5) : ಹೊಸಪೇಟೆ ತಾಲೂಕಿನ ನಾಗೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಧರ್ಮದಗುಡ್ಡದಲ್ಲಿ ವಿಜಯನಗರ ಅರಸರ ಕಾಲದಿಂದಲೂ ಆಚರಣೆಯಲ್ಲಿರುವ  'ದೇವರ ಬನ್ನಿ' ಉತ್ಸವವನ್ನು ವಿಜಯನಗರ ಜಿಲ್ಲೆ, ನಾಡಿನ ಇತರೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಮಂಗಳವಾರ ಸಂಜೆ ಶಕ್ತಿ ದೇವತೆಗಳ ಸಮ್ಮಿಲನವನ್ನು ಕಣ್ತುಂಬಿಕೊಂಡು ಉತ್ಸವಕ್ಕೆ ಸಾಕ್ಷಿಯಾದರು.

ವಿಜಯ ದಶಮಿಯಂದು ಈ ಕಾರ್ಯ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!

ವಿಜಯದಶಮಿಗೂ ಮುನ್ನದಿನ ನವಮಿಯಂದು ಧರ್ಮದಗುಡ್ಡದಲ್ಲಿನ ಶ್ರೀ ಚನ್ನಬಸವೇಶ್ವರಸ್ವಾಮಿ ಮತ್ತು ಶ್ರೀ ನಿಜಲಿಂಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಬಸವನದುರ್ಗ ಗ್ರಾಮದಿಂದ ಆಗಮಿಸಿದ ಶ್ರೀ ಚನ್ನಬಸವೇಶ್ವರ ಸ್ವಾಮಿ ಉತ್ಸವಮೂರ್ತಿಯ ಪಲ್ಲಕ್ಕಿ ಜತೆಗೆ ತಾಲೂಕಿನ ವಿವಿಧೆಡೆಗಳಿಂದ ೨೦ಕ್ಕೂ ಅಧಿಕ ಶಕ್ತಿ ದೇವತೆಗಳ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಬಂದ ಭಕ್ತರು, ಗುಡ್ಡದ ಕೆಳಗಿರುವ ಶಮಿವೃಕ್ಷಕ್ಕೆ ಪ್ರದಕ್ಷಣೆ ಹಾಕಿ ಮೂಲ ಸ್ಥಳಕ್ಕೆ ತೆರಳುವ ಶಕ್ತಿದೇವತೆಗಳ ಉತ್ಸವ ಮೂರ್ತಿಗೆ ಭಕ್ತರು ನಮಿಸಿ ಭಕ್ತಿ ಸಮರ್ಪಿಸಿದರು.

ಐತಿಹ್ಯ: ನಾಗೇನಹಳ್ಳಿ(Nagenahalli) ಗ್ರಾಪಂ ವ್ಯಾಪ್ತಿಯಲ್ಲಿನ ಐತಿಹಾಸಿಕ ಪ್ರಕೃತಿದತ್ತ ಧರ್ಮದಗುಡ್ಡದ(Dharmagudda) ಬಂಡೆಯ ಆಸರೆಯಲ್ಲಿ ನೆಲೆಸಿರುವ ಶ್ರೀಚನ್ನಬಸವೇಶ್ವರಸ್ವಾಮಿ(Channabasaveshwar swamy) ಮತ್ತು ನಿಜಲಿಂಗಮ್ಮ(Nijalingamma) ದೇವಿಯು ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಆಯುಧಪೂಜೆಯಂದು ನಡೆಯುವ ದೇವರ ಬನ್ನಿ ಉತ್ಸವ ಜಾತ್ರೆಯಂತೆ ನಡೆಯುವುದೇ ಇಲ್ಲಿನ ವಿಶೇಷ. 

ಧರ್ಮದಗುಡ್ಡದಲ್ಲಿ ಪಾಂಡವರು(Pandavaru) ನೆಲೆಸಿದ್ದರು. ಶಿವನು(Lord Shiva) ತಪಸ್ಸಿಗೆ ಹೋದಾಗ ನಂದಿ ಧರ್ಮದಗುಡ್ಡಕ್ಕೆ ಬಂದಿದ್ದನು ಎಂಬುದನ್ನು ಇಲ್ಲಿನ ಶಾಸನಗಳು ಹೇಳುತ್ತವೆ ಎಂಬುದು ಇತಿಹಾಸಕಾರರು ತಿಳಿಸುತ್ತಾರೆ. ನಾಗೇನಹಳ್ಳಿ ಗ್ರಾಮವನ್ನು ವಿಜಯನಗರ(Vijayanagara) ಅರಸರ ಕಾಲದಲ್ಲಿ ನಾಗಲಾದೇವಿಪುರ(Nagaladevipur) ಎಂದು ಕರೆಯಲಾಗುತ್ತಿತ್ತು. ವಿಜಯನಗರ ಅರಸ ಶ್ರೀಕೃಷ್ಣದೇವರಾಯ(Shri Krishnadevaraya)ನ ತಾಯಿ ನಾಗಲಾದೇವಿ(Nagaladevi)ಯ ಹೆಸರಿನಲ್ಲಿ ಈ ಗ್ರಾಮ ನಿರ್ಮಾಣವಾಗಿದೆ. ನಾಗೇನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲೆ ಆಚರಣೆ ನಡೆಯುತ್ತಿರುವುದು ಈ ಭಾಗದ ಜನರ ಸುದೈವ ಎಂದೆ ಭಾವಿಸುತ್ತಾರೆ.

21 ಶಕ್ತಿ ದೇವತೆಗಳ ಸಮ್ಮಿಲನ: ಬಸವನದುರ್ಗದ ಗುಡ್ಡದ ಚನ್ನಬಸವೇಶ್ವರ, ಬಾಣದಕೇರಿ ನಿಜಲಿಂಗಮ್ಮ, ತಳವಾರಕೇರಿ ರಾಂಪುರ ದುರ್ಗಮ್ಮ, ಮ್ಯಾಸಕೇರಿ ಹುಲಿಗೆಮ್ಮ, ಕಮಲಾಪುರ ಗೋನಾಳ್‌ಕೇರಿ  ನಿಜಲಿಂಗಮ್ಮ, ನಾಗೇನಹಳ್ಳಿ ಹುಲಿಗೆಮ್ಮ, ನಾಗೇನಹಳ್ಳಿ ಹರಿಜನಕೇರಿ ಹುಲಿಗೆಮ್ಮ, ನರಸಾಪುರ ಮಾಗಣಿಯ ಹಾಲಮ್ಮ, ಕೊಂಡನಾಯಕನಹಳ್ಳಿ ದುರ್ಗಮ್ಮ, ಮಲಪನಗುಡಿ ತಾಯಮ್ಮ, ಉಕ್ಕಡಕೇರಿ ಹುಲಿಗೆಮ್ಮ, ಹರಿಜನಕೇರಿ ಮಾಯಮ್ಮ, ರಾಂಪುರ ದುರುಗಮ್ಮ, ಜಂಬುನಾಥರಸ್ತೆ ಹರಿಜನಕೇರಿ ಹುಲಿಗೆಮ್ಮ, ಅನಂತಶಯನಗುಡಿ ಹರಿಜನಕೇರಿ ದುರ್ಗಮ್ಮ, ಚೆಲುವಾದಿಕೇರಿ ಯಲ್ಲಮ್ಮ, ೫ನೇ ವಾರ್ಡ್ ಕೆಂಚಮ್ಮ, ಚಿತ್ತವಾಡ್ಗಿ ವರಕೇರಿ ನಿಜಲಿಂಗಮ್ಮ, ಮನ್ಮಥಕೇರಿ ಕಮಲಾಪುರದ ನೆರಗಲ್ಲಮ್ಮ ದೇವಿ,  ಕಮಲಾಪುರ ಬಂಡಿಕೇರಿ ಹುಲಿಗೆಮ್ಮ ದೇವಿ, ಕಮಲಾಪುರ ತಿಮ್ಮನಾಥಕೇರಿ ತಾಯಮ್ಮ ದೇವಿ ಉತ್ಸವ ಮೂರ್ತಿಗಳ ಹೊತ್ತ ಪಲ್ಲಕ್ಕಿಗಳು ಶಮಿವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಮೂಲ ಸ್ಥಳಕ್ಕೆ ಮರಳಿದವು.

ದಸರಾ 2022: ವಿಜಯ ದಶಮಿ ಯಾವಾಗ? ಮುಹೂರ್ತ, ಪೂಜಾ ವಿಧಾನ ಇಲ್ಲಿದೆ..

ಪ್ರವಾಸೋದ್ಯಮ(Tourism) ಸಚಿವ ಆನಂದಸಿಂಗ್(Anand Singh), ಮಾಜಿ ಶಾಸಕ ಎಚ್.ಆರ್.ಗವಿಯಪ್ಪ(H.R.Gavisiddappa), ಆರ್.ರಾಜಶೇಖರ ಹಿಟ್ನಾಳ್, ಧರ್ಮೇಂದ್ರಸಿಂಗ್, ಸಂದೀಪ್‌ಸಿಂಗ್, ಸಿದ್ದಾರ್ಥಸಿಂಗ್, ನಗರಸಭೆ ಉಪಾಧ್ಯಕ್ಷೆ ಎಲ್.ಎಸ್.ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ನಾಗೇನಹಳ್ಳಿ ಗ್ರಾಪಂ ಅಧ್ಯಕ್ಷೆ ಟಿ.ಲಕ್ಷ್ಮಿ, ಉಪಾಧ್ಯಕ್ಷೆ ವೈ.ಜ್ಯೋತಿ, ಪಿಡಿಒ ರಾಜೇಶ್ವರಿ, ಬಸವನದುರ್ಗ, ನಾಗೇನಹಳ್ಳಿ, ಕಮಲಾಪುರ ಹಾಗೂ ಹೊಸಪೇಟೆ ಏಳು ಕೇರಿಯ ಮುಖಂಡರು ಸೇರಿದಂತೆ ತಾಲೂಕಿನ ವಿವಿಧೆಡೆಗಳಿಂದ ಜನಪ್ರತಿನಿಧಿಗಳು, ಸಮಾಜ ಸೇವಕರು, ಭಕ್ತರು ಆಗಮಿಸಿದ್ದರು. ಎಸ್.ಪಿ. ಡಾ.ಕೆ.ಅರುಣ್, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ನೇತೃತ್ವದಲ್ಲಿ ಪೊಲೀಸರು ಸೂಕ್ತ ಭದ್ರತೆ ಒದಗಿಸಿದ್ದರು.

Follow Us:
Download App:
  • android
  • ios