ತಾಂಡವ್​ನ ಕಿತಾಪತಿಯಿಂದ ಬೇಸತ್ತ ಭಾಗ್ಯ ಕ್ಯಾಂಟೀನ್​ ಓನರ್​ ಆಗಿದ್ದಾಳೆ. ಪೂಜಾಳ ಮದುವೆಗೆ ಅಡ್ಡಿಯಾದ ಕನ್ನಿಕಾ, ಕಿಶನ್​ನ ಅಕ್ಕ ಎಂದು ತಿಳಿದು ಪೂಜಾ ಮದುವೆಯಿಂದ ಹಿಂದೆ ಸರಿದಿದ್ದಾಳೆ.

ಭಾಗ್ಯಳನ್ನು ಹೇಗಾದರೂ ಮಾಡಿ ತುಳಿಯಬೇಕು, ಗಂಡಸು ಇಲ್ಲದೆಯೇ ಹೆಣ್ಣು ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಬೇಕು, ನಾನಿಲ್ಲದೇ ಭಾಗ್ಯಳಿಗೆ ಸಂಸಾರ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಅಹಂನಲ್ಲಿದ್ದ ತಾಂಡವ್​ಗೆ ಭಾರಿ ಮುಖಭಂಗ ಆಗಿಯೇ ಬಿಟ್ಟಿದೆ. ತನ್ನ ಲವರ್​ ಶ್ರೇಷ್ಠಾಳನ್ನು ಭಾಗ್ಯ ಬಿಟ್ಟುಕೊಟ್ಟರೂ ತಾಂಡವ್​ಗೆ ಸಮಾಧಾನ ಇಲ್ಲ. ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದು ಅವನು ಹೇಳಿದ್ದ. ಆದರೆ ಈಗ ಸೌಟು ಹಿಡಿಯೋಳು ಸಂಸಾರವನ್ನು ನಿಭಾಯಿಸಬಲ್ಲುಳು ಎನ್ನೋದನ್ನು ತೋರಿಸಿಕೊಟ್ಟಿರೋ ಭಾಗ್ಯ, ತಾಂಡವ್​ ಕಚೇರಿಯಲ್ಲಿಯೇ ಕ್ಯಾಂಟೀನ್​ ಓನರ್​ ಆಗಿದ್ದಾಳೆ. ತಾಂಡವ್​ ಮತ್ತು ಶ್ರೇಷ್ಠಾ ಜೊತೆಗೂಡಿ ಭಾಗ್ಯಳಿಗೆ ಟಾರ್ಚರ್​ ಕೊಡುತ್ತಿರುವುದು ತಿಳಿದ ಕಾರಣಕ್ಕೆ, ಇಬ್ಬರನ್ನೂ ಕೆಲಸದಿಂದ ಟರ್ಮಿನೇಟ್​ ಮಾಡಿದ್ದರು. ಇಬ್ಬರ ಕೈಗೆ ಟರ್ಮಿನೇಷನ್​ ಲೆಟರ್​ ಕೊಟ್ಟಿದ್ದರು. ಕೊನೆಗೆ ಭಾಗ್ಯಳೇ ಮ್ಯಾನೇಜರ್​ಗೆ ಕಾಡಿ ಬೇಡಿ ಇಬ್ಬರ ಕೆಲಸವನ್ನು ವಾಪಸ್​​ ಕೊಡಿಸಿದ್ದಾಳೆ.

Add Asianetnews Kannada as a Preferred SourcegooglePreferred

ಇದೀಗ ಭಾಗ್ಯಳ ತಂಗಿ ಪೂಜಾಳ ಮದುವೆಯ ಸಂಭ್ರಮ ನಡೀತಿದೆ. ಪೂಜಾಳನ್ನು ನೋಡಲು ಬಂದ ಹುಡುಗನ ಕಡೆಯವರಿಗೆ ಇಲ್ಲಸಲ್ಲದ್ದನ್ನು ಹೇಳಿ ತಾಂಡವ್​ ಮದುವೆ ತಪ್ಪಿಸಿದ್ದಾನೆ. ಇದೀಗ ಪೂಜಾಳನ್ನು ಲವ್​ ಮಾಡ್ತಿದ್ದ ಕಿಶನ್​ ಜೊತೆ ಮದುವೆಯ ಮಾತುಕತೆ ನಡೆಯುತ್ತಿದೆ. ಅದನ್ನೂ ತಪ್ಪಿಸಲು ತಾಂಡವ್ ನೋಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಕಿಷನ್​ ಬಗ್ಗೆ ಇಲ್ಲಸಲ್ಲದ ಕಥೆ ಕಟ್ಟಿದ್ದ. ಆದರೆ ಅದು ವರ್ಕ್​ಔಟ್​ ಆಗದೇ ಮದುವೆಯವರೆಗೂ ಬಂದಿದೆ. ಆದರೆ ಇಲ್ಲೊಂದು ಎಡವಟ್ಟು ಆಗಿದೆ. ಅದೇನೆಂದರೆ ಭಾಗ್ಯಳಿಗೆ ಸದಾ ಟಾರ್ಚರ್​ ಕೊಡ್ತಿರೋ ಕನ್ನಿಕಾ ಅಣ್ಣನೇ ಕಿಶನ್​. ಇದೀಗ ಅವಳು ಮದುವೆಗೆ ಅಡ್ಡಗಾಲು ಹಾಕಿ ಭಾಗ್ಯಳಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈದಿದ್ದಾಳೆ. ಇದನ್ನು ಕೇಳಿಸಿಕೊಂಡ ಪೂಜಾ ಉರಿದು ಹೋಗಿ, ನಿಮ್ಮ ಮನೆಗೆ ನಾನು ಸೊಸೆಯಾಗಿ ಬರುವುದಿಲ್ಲ, ಈ ಮದುವೆ ಆಗುವುದಿಲ್ಲ ಎಂದು ಸವಾಲು ಹಾಕಿ ಬಂದಿದ್ದಾಳೆ.

ಇಲ್ಲಿಯವರೆಗೆ ಸದ್ಯ ಸೀರಿಯಲ್​ ಬಂದು ನಿಂತಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ಸದ್ಯಕ್ಕಿದೆ. ಇದರ ಬಗ್ಗೆ ವಿವರಿಸಲು ಕುಸುಮಾ ಪಾತ್ರಧಾರಿ, ಪದ್ಮಜಾ ರಾವ್​ ಅವರು ನೇರ ಪ್ರಸಾರದಲ್ಲಿ ಬಂದು ವೀಕ್ಷಕರ ಜೊತೆ ಮಾತನಾಡಿದ್ದಾರೆ. ಮೊನ್ನೆ ಈ ಸಂಚಿಕೆಯ ಒಂದು ಗಂಟೆಯ ಕಾರ್ಯಕ್ರಮ ಇತ್ತು. ಅದರ ಬಗ್ಗೆ ಹೇಳಲು ಬಂದಿದ್ದ ನಟಿ, ಪೂಜಾ ಮತ್ತು ಭಾಗ್ಯಳ ಲೈಫ್​ ಹೇಗೆ ಟರ್ನ್​ ತೆಗೆದುಕೊಳ್ಳುತ್ತದೆ, ಏನು ಟ್ವಿಸ್ಟ್​ ಇದೆ ಎನ್ನುವ ಕುರಿತು ಮಾತನಾಡಿದ್ದಾರೆ. ಇಬ್ಬರ ಲೈಫ್​ನಲ್ಲಿ ಭಾರಿ ಟ್ವಿಸ್ಟ್​ ಇದೆ ಎಂದಿದ್ದಾರೆ. ಕಥೆಯನ್ನು ಪೂರ್ತಿ ಪದ್ಮಜಾ ಹೇಳದಿದ್ದರೂ ಪೂಜಾ ಮತ್ತು ಕಿಶನ್​ ಮದುವೆಯಾಗುತ್ತದೆ, ಆಗ ಕನ್ನಿಕಾ ಪೂಜಾಳಿಗೆ ಟಾರ್ಚರ್​ಕೊಡುವ ಮೂಲಕ ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳು ಹಾಗೆ ಕಾಣಿಸುತ್ತಿದೆ. ಒಟ್ಟಿನಲ್ಲಿ ಸೀರಿಯಲ್​ ಇನ್ನೂ ಕೆಲ ವರ್ಷ ಎಳೆಯುವ ಎಲ್ಲಾ ಮುನ್ಸೂಚನೆಗಳೂ ಇವೆ.

ಇದೇ ವೇಳೆ ಪದ್ಮಜಾ ಅವರಿಗೆ ಅಭಿಮಾನಿಗಳು ಶ್ಲಾಘನೆಗಳ ಮಹಾಪೂರ ಹರಿಸಿದ್ದಾರೆ. ಇದ್ದರೆ, ನಿಮ್ಮಂಥ ಅತ್ತೆ ಇರಬೇಕು ಎಂದು ಹೇಳಿದ್ದಾರೆ. ಕುಸುಮಾ ನಟನೆಯ ಬಗ್ಗೆಯೂ ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಿಜ ಜೀವನದಲ್ಲಿಯೂ ಇದೇ ರೀತಿ ಅತ್ತೆಯಾಗಿ ಎಂದು ವೀಕ್ಷಕರು ನಟಿಗೆ ತಿಳಿಸಿದ್ದಾರೆ. ನಟಿ ಪದ್ಮಜಾ ಕುರಿತು ಹೇಳುವುದಾದರೆ, ಇವರು ಮನೆಯಲ್ಲಿ ಹಿರಿಯ ಮಗಳು. ಮೊದಲ ಮದುವೆ ಮುರಿದು ಬಿತ್ತು. ಗಂಡನ ಮನೆಯಲ್ಲಿ ಕಿರುಕುಳ ಆಗಿತ್ತು ಜೊತೆಗೆ ನಟನೆಗೆ ಅವಕಾಶ ಸಿಗಲಿಲ್ಲ ಎಂದು ಹಿಂದೊಮ್ಮೆ ಇವರು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಡಿವೋರ್ಸ್​ ತೆಗೆದುಕೊಂಡು ಮತ್ತೊಂದು ಮದುವೆಯಾಗಿದ್ದಾರೆ. ಮೊದಲ ಮದುವೆಯಿಂದ ಸಂಜೀವ್‌ ಎನ್ನುವ ಮಗ ಇದ್ದಾರೆ. ಇವರು ಪ್ರಾಣಿ ಅಭಯ ಕೇಂದ್ರ ನಡೆಸುತ್ತಿದ್ದು, ನೂರಾರು ವಿವಿಧ ಪ್ರಾಣಿಗಳನ್ನು ಸಾಕುತ್ತಿದ್ದಾರೆ. ಎರಡನೆಯ ಮದುವೆಯಾದ ಬಳಿಕವಷ್ಟೇ ಇವರು ಕಿರುತೆರೆಗೆ ಮತ್ತೆ ವಾಪಸಾದರು. ಮೂಡಲ ಮನೆ ಧಾರಾವಾಹಿಯಲ್ಲಿ ಪಾತ್ರ ಗಿಟ್ಟಿಸಿಕೊಂಡರು. ಅಲ್ಲಿಂದ ಅವರು ಸಾಕಷ್ಟು ಕಿರುಚಿತ್ರಗಳಲ್ಲಿ ನಟಿಸಿದ್ದು ಮನೆ ಮಾತಾಗಿದ್ದಾರೆ. ಆದರೆ ಬಳಿಕ ಇವರ ಸುತ್ತಲೂ ಚೆಕ್​ಬೌನ್ಸ್​ ಪ್ರಕರಣ ಸುತ್ತುವರೆದಿತ್ತು.

View post on Instagram