ದಳಪತಿ ವಿಜಯ್ ಅವರ ರಾಜಕೀಯದ ಮೊದಲ ಹೆಜ್ಜೆ ಭರ್ಜರಿ ಯಶಸ್ಸು ಕಂಡಿದೆ. ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ.
ತಮಿಳು ಸೂಪರ್ಸ್ಟಾರ್ ದಳಪತಿ ವಿಜಯ್ ಅವರ ಪಕ್ಷ ಟಿವಿಕೆ, ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದು ದೊಡ್ಡ ಸಂಚಲನ ಸೃಷ್ಟಿಸಿದೆ. ಇದರ ಬೆನ್ನಲ್ಲೇ, ವಿಜಯ್ ಅವರು ನಟಿ ತ್ರಿಷಾ ಕೃಷ್ಣನ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನದಲ್ಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದಿಂದ ತ್ರಿಷಾ ಅವರನ್ನು ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಟಿವಿಕೆ ಪಕ್ಷ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ.
ದಳಪತಿ ವಿಜಯ್ ಅವರ ರಾಜಕೀಯದ ಮೊದಲ ಹೆಜ್ಜೆ ಭರ್ಜರಿ ಯಶಸ್ಸು ಕಂಡಿದೆ. ಅವರ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಈಗ ವಿಜಯ್ ಗೆಲುವಿನ ನಡುವೆಯೇ ಮತ್ತೊಂದು ದೊಡ್ಡ ಚರ್ಚೆ ಶುರುವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ನಟಿ ತ್ರಿಷಾ ಕೃಷ್ಣನ್ ಕೂಡ ಶೀಘ್ರದಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡಬಹುದು. ತಿರುಚಿರಾಪಳ್ಳಿ ಪೂರ್ವ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿಜಯ್ ಮತ್ತು ಟಿವಿಕೆ ನಾಯಕರು ತ್ರಿಷಾ ಅವರನ್ನು ಮನವೊಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ತ್ರಿಷಾಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ. ಸದ್ಯಕ್ಕೆ ರಾಜಕೀಯಕ್ಕೆ ಬರುವ ಬಗ್ಗೆ ಅವರಿಗೆ ಅಷ್ಟೊಂದು ಆಸಕ್ತಿ ಇಲ್ಲ ಎನ್ನಲಾಗಿದೆ.
ತ್ರಿಷಾಗೆ ಸಿಗುತ್ತಾ ಅವಕಾಶ?
ವರದಿಗಳ ಪ್ರಕಾರ, ದಳಪತಿ ವಿಜಯ್ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಗೆಲುವು ಸಾಧಿಸಿದ್ದಾರೆ. ಒಂದು ಚೆನ್ನೈನ ಪೆರಂಬೂರ್ ಮತ್ತು ಇನ್ನೊಂದು ತಿರುಚಿರಾಪಳ್ಳಿ ಪೂರ್ವ. ನಿಯಮಗಳ ಪ್ರಕಾರ, ಅವರು ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ 14 ದಿನಗಳೊಳಗೆ ಒಂದು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಪೆರಂಬೂರ್ ಕ್ಷೇತ್ರದಲ್ಲಿ ವಿಜಯ್ ದೊಡ್ಡ ಅಂತರದಿಂದ ಗೆದ್ದಿದ್ದಾರೆ ಮತ್ತು ಆ ಕ್ಷೇತ್ರ ರಾಜ್ಯ ಸಚಿವಾಲಯಕ್ಕೆ ಹತ್ತಿರದಲ್ಲಿದೆ. ಹಾಗಾಗಿ, ಅವರು ಪೆರಂಬೂರ್ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆಗ ತಿರುಚಿರಾಪಳ್ಳಿ ಪೂರ್ವ ಕ್ಷೇತ್ರ ಖಾಲಿಯಾಗಲಿದ್ದು, ಅಲ್ಲಿ ಉಪಚುನಾವಣೆ ನಡೆಯಲಿದೆ. ಇದೇ ಕ್ಷೇತ್ರದಿಂದ ತ್ರಿಷಾ ಕೃಷ್ಣನ್ ಅವರನ್ನು ಕಣಕ್ಕಿಳಿಸುವ ಚರ್ಚೆ ಜೋರಾಗಿದೆ.
ತ್ರಿಷಾ ಸದ್ಯಕ್ಕೆ ರೆಡಿ ಇಲ್ಲ!
ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ಮತ್ತು ಟಿವಿಕೆಯ ಹಿರಿಯ ನಾಯಕರು ತ್ರಿಷಾ ಕೃಷ್ಣನ್ ಅವರನ್ನು ರಾಜಕೀಯಕ್ಕೆ ತರಲು ನಿರಂತರವಾಗಿ ಮಾತುಕತೆ ನಡೆಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ತ್ರಿಷಾಗೆ ದೊಡ್ಡ ಅಭಿಮಾನಿ ಬಳಗ ಇರುವುದರಿಂದ, ಅವರು ಉಪಚುನಾವಣೆಯಲ್ಲಿ ಅಭ್ಯರ್ಥಿಯಾದರೆ ಪಕ್ಷಕ್ಕೆ ಲಾಭವಾಗಲಿದೆ ಎಂಬುದು ಟಿವಿಕೆ ಲೆಕ್ಕಾಚಾರ. ಆದರೆ, ತ್ರಿಷಾ ಸದ್ಯಕ್ಕೆ ರಾಜಕೀಯಕ್ಕೆ ಬರಲು ಪೂರ್ತಿಯಾಗಿ ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ. ಅವರಿಗೆ ರಾಜಕೀಯ ಅನುಭವ ಇಲ್ಲದಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಆದರೂ, ತ್ರಿಷಾ ಚುನಾವಣೆಗೆ ನಿಂತರೆ ಅದು ಟಿವಿಕೆ ಪಕ್ಷಕ್ಕೆ ದೊಡ್ಡ ರಾಜಕೀಯ ಶಕ್ತಿ ಮತ್ತು ಸ್ಟಾರ್ ಪವರ್ ತಂದುಕೊಡಲಿದೆ ಎಂದು ವಿಜಯ್ ಆಪ್ತರು ನಂಬಿದ್ದಾರೆ.
ಈಗ ಸರ್ಕಾರ ರಚನೆಗೆ ತಯಾರಿ
ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118ಕ್ಕಿಂತ 10 ಸ್ಥಾನಗಳು ಕಡಿಮೆ ಇವೆ. ಹೀಗಾಗಿ, ಮೈತ್ರಿ ರಾಜಕಾರಣ ಬಹಳ ಮುಖ್ಯವಾಗಿದೆ. 59 ಸ್ಥಾನಗಳನ್ನು ಗೆದ್ದಿರುವ ಡಿಎಂಕೆ ಜೊತೆ ಟಿವಿಕೆ ಕೈಜೋಡಿಸಬಹುದು ಎಂದು ಕೆಲವು ವರದಿಗಳು ಹೇಳುತ್ತಿವೆ. ಮತ್ತೊಂದೆಡೆ, ಎಐಎಡಿಎಂಕೆ ಜೊತೆಗಿನ ಮೈತ್ರಿ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ರಚಿಸಲು ಅವಕಾಶ ಕೋರಿ ವಿಜಯ್ ಅವರು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಗಳು ಹೇಳಿವೆ. ಮೇ 7 ರಂದು ವಿಜಯ್ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದರೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


