Rajamouli: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಸಿನಿಮಾ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದು, ಎಲ್ಲರ ಕಣ್ಣು ಈ ಚಿತ್ರದ ಮೇಲಿದೆ.

ಎಸ್.ಎಸ್. ರಾಜಮೌಳಿ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ 'ವಾರಣಾಸಿ' ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ನಟಿಸಲಿರುವ ಈ ಚಿತ್ರ, ಬಾಹುಬಲಿಯಂತೆ ಸರಣಿ ಸಿನಿಮಾ ಆಗಿರಲ್ಲ, ಬದಲಾಗಿ ಒಂದೇ ಭಾಗದಲ್ಲಿ ಮುಗಿಯಲಿದೆ ಎಂದು ರಾಜಮೌಳಿ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ಸಿನಿಮಾ 'ವಾರಣಾಸಿ' ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದು, ಎಲ್ಲರ ಕಣ್ಣು ಈ ಚಿತ್ರದ ಮೇಲಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಮತ್ತು ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಭಾರತದಲ್ಲೇ ತಯಾರಾಗುತ್ತಿರುವ ಅತ್ಯಂತ ದುಬಾರಿ ಚಿತ್ರಗಳಲ್ಲಿ ಇದೂ ಒಂದು ಎಂದು ಹೇಳಲಾಗುತ್ತಿದೆ. ಇದೀಗ ರಾಜಮೌಳಿ ಅವರು ಈ ಚಿತ್ರವನ್ನು ಫ್ರಾಂಚೈಸಿ ರೀತಿ ಮಾಡದೆ, ಒಂದೇ ಭಾಗದ ಸಿನಿಮಾವಾಗಿ ತೆರೆಗೆ ತರುವುದಾಗಿ ಖಚಿತಪಡಿಸಿದ್ದಾರೆ. ಅಂದರೆ, ಇಡೀ ಮಹಾಕಥೆ, ಭರ್ಜರಿ ಹಿನ್ನೆಲೆ ಸಂಗೀತ ಮತ್ತು ಅದ್ಭುತ ಸಂಭಾಷಣೆಗಳೆಲ್ಲವೂ ಒಂದೇ ಸಿನಿಮಾದಲ್ಲಿ ಪ್ಯಾಕ್ ಆಗಿರಲಿದೆ.

ಸದ್ಯಕ್ಕೆ ರಾಜಮೌಳಿ ಅವರು 'ವಾರಣಾಸಿ' ಶೂಟಿಂಗ್‌ನಿಂದ ಬ್ರೇಕ್ ತೆಗೆದುಕೊಂಡು ಯುರೋಪ್ ಪ್ರವಾಸದಲ್ಲಿದ್ದಾರೆ. ಫ್ರಾನ್ಸ್‌ನಲ್ಲಿ ನಡೆದ ಅನ್ನೆಸಿ ಅಂತರಾಷ್ಟ್ರೀಯ ಆನಿಮೇಷನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅವರ 'RRR' ಮತ್ತು 'ಈಗ' ಚಿತ್ರಗಳ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಜೂನ್ 27 ರಂದು ನಡೆದ ಮಾಸ್ಟರ್‌ಕ್ಲಾಸ್‌ನಲ್ಲಿ, ರಾಜಮೌಳಿ ಅವರು ಮಹೇಶ್ ಬಾಬು ಜೊತೆಗಿನ ತಮ್ಮ ಮುಂದಿನ ಚಿತ್ರದ ಬಗ್ಗೆ ಮಾತನಾಡಿದರು. 'ವಾರಣಾಸಿ' ಚಿತ್ರವು 'ಬಾಹುಬಲಿ'ಯಂತೆ ಸರಣಿ ಸಿನಿಮಾ ಆಗಿರದೆ, ಒಂದೇ ಭಾಗದ ಚಿತ್ರವಾಗಿರುತ್ತದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಈ ಮಹತ್ವಾಕಾಂಕ್ಷೆಯ ಯೋಜನೆಯಿಂದ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು ಎಂಬುದನ್ನು ಸಹ ಹಂಚಿಕೊಂಡರು.

'ವಾರಣಾಸಿ' ಬಗ್ಗೆ ರಾಜಮೌಳಿ ಹೇಳಿದ್ದೇನು?

ಸಂವಾದದ ವೇಳೆ ಮಾತನಾಡಿದ ಅವರು, "ನೀವು ಅಂಟಾರ್ಕ್ಟಿಕಾದ ಕೊರೆಯುವ ಚಳಿ ಮತ್ತು ಮಂಜುಗಡ್ಡೆಯನ್ನು ಅನುಭವಿಸಲಿದ್ದೀರಿ. ರಾಮಾಯಣದ ದೇವರುಗಳು, ನೈಸರ್ಗಿಕ ವಿಕೋಪಗಳು ಮತ್ತು ಅದ್ಭುತ ಅಂಶಗಳನ್ನು ನೋಡಲಿದ್ದೀರಿ. ಇದೆಲ್ಲದರ ಅನುಭವ ನಿಮಗೆ ಸಿಗಲಿದೆ. ಆದರೆ ಈ ಎಲ್ಲದರ ಮಧ್ಯೆ, ತಂದೆ-ಮಗನ ಭಾವನಾತ್ಮಕ ಸಂಬಂಧವೇ ಕಥೆಯ ಜೀವಾಳ. ಇದೆಲ್ಲವೂ ಸೇರಿ 'ವಾರಣಾಸಿ' ಚಿತ್ರ ನಿಮ್ಮದಾಗಲಿದೆ," ಎಂದರು. ಈ ಪ್ರಾಜೆಕ್ಟ್ ಒಂದೇ ಭಾಗವೋ ಅಥವಾ ಸರಣಿಯೋ ಎಂದು ಕೇಳಿದಾಗ, "ಒಂದೇ ಸಿನಿಮಾ. ಹೌದು, ಒಂದೇ ಸಿನಿಮಾ," ಎಂದು ಸ್ಪಷ್ಟವಾಗಿ ಉತ್ತರಿಸಿದರು.

ಚಿತ್ರದ ಬಗ್ಗೆ

ಎಸ್.ಎಸ್. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಅವರ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. 'RRR' ನ ಬ್ಲಾಕ್‌ಬಸ್ಟರ್ ಯಶಸ್ಸಿನ ನಂತರ ರಾಜಮೌಳಿ ಕೈಗೆತ್ತಿಕೊಂಡಿರುವ ಮೊದಲ ಫೀಚರ್ ಫಿಲ್ಮ್ ಇದಾಗಿದೆ. ಮಹೇಶ್ ಬಾಬು, ಪೃಥ್ವಿರಾಜ್ ಮತ್ತು ಪ್ರಿಯಾಂಕಾ ಚೋಪ್ರಾ ನಟಿಸಿರುವ ಈ ಚಿತ್ರವು ಸೈನ್ಸ್ ಫಿಕ್ಷನ್ ಮತ್ತು ಭಾರತೀಯ ಜಾನಪದ ಕಥೆಗಳ ಪರಿಪೂರ್ಣ ಮಿಶ್ರಣವಾಗಿದೆ ಎಂದು ಹೇಳಲಾಗುತ್ತಿದೆ.