Sridevi Biography Book: ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಪ್ರಿಯಾಂಕಾ ಚೋಪ್ರಾ ಅವರು 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ.

ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಪ್ರಿಯಾಂಕಾ ಚೋಪ್ರಾ ಅವರು 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ. ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ ಈ ಫೋಟೋವನ್ನು ಶ್ರೀದೇವಿ ಪತಿ ಬೋನಿ ಕಪೂರ್ ಕೂಡ ಮರುಹಂಚಿಕೊಂಡಿದ್ದಾರೆ.

ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ, ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು ಅವರ ಜೀವನಚರಿತ್ರೆ ಪುಸ್ತಕದ ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ. ಶ್ರೀದೇವಿ ಅವರ ಜೀವನ, ವೃತ್ತಿ ಮತ್ತು ಪರಂಪರೆಯನ್ನು ಕಟ್ಟಿಕೊಡುವ 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಪ್ರಿಯಾಂಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ.

ಧೀರಜ್ ಯು. ಕುಮಾರ್ ಈ ಪುಸ್ತಕವನ್ನು ಬರೆದಿದ್ದು, ವೆಸ್ಟ್‌ಲ್ಯಾಂಡ್ ಬುಕ್ಸ್ ಇದನ್ನು ಪ್ರಕಟಿಸುತ್ತಿದೆ. ಪುಸ್ತಕದ ಮುಖಪುಟದಲ್ಲಿ ಅಮಿತಾಭ್ ಬಚ್ಚನ್ ಅವರ ಮೆಚ್ಚುಗೆಯ ಮಾತಿದ್ದು, ಅವರು ಶ್ರೀದೇವಿಯನ್ನು "ಅದ್ಭುತ ಪ್ರತಿಭೆಯ ಪ್ರತೀಕ" ಎಂದು ಬಣ್ಣಿಸಿದ್ದಾರೆ. ಈ ಪುಸ್ತಕ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ.

ಮುಖಪುಟವನ್ನು ಹಂಚಿಕೊಂಡ ಪ್ರಿಯಾಂಕಾ, "ದಿ ಒನ್ ಆ್ಯಂಡ್ ಓನ್ಲಿ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಹ್ಯಾಪಿ ಹೆವನ್ಲಿ ಬರ್ತ್‌ಡೇ #Sridevi #Empress....ಶೀಘ್ರದಲ್ಲೇ ಬರಲಿದೆ" ಎಂದು ಬರೆದುಕೊಂಡಿದ್ದಾರೆ. ಶ್ರೀದೇವಿ ಅವರ ಪತಿ ಬೋನಿ ಕಪೂರ್, ಪ್ರಿಯಾಂಕಾ ಅವರ ಈ ಪೋಸ್ಟ್‌ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಮರುಹಂಚಿಕೊಂಡಿದ್ದಾರೆ. ವೆಸ್ಟ್‌ಲ್ಯಾಂಡ್ ಬುಕ್ಸ್ 2023ರಲ್ಲಿ ಶ್ರೀದೇವಿ ಅವರ ಅಧಿಕೃತ ಜೀವನಚರಿತ್ರೆಯನ್ನು ಪ್ರಕಟಿಸುವುದಾಗಿ ಘೋಷಿಸಿತ್ತು. ಈ ಪುಸ್ತಕವು ಭಾರತೀಯ ಚಿತ್ರರಂಗದಲ್ಲಿ ಶ್ರೀದೇವಿ ಅವರ ಪಯಣ, ಅವರ ವೈಭವದ ವೃತ್ತಿಜೀವನ, ವೈಯಕ್ತಿಕ ಜೀವನ ಮತ್ತು ಅವರು ಚಿತ್ರರಂಗದಲ್ಲಿ ಉಳಿಸಿಹೋದ ಪರಂಪರೆಯನ್ನು ವಿವರಿಸಲಿದೆ.

ಶ್ರೀದೇವಿ ಜೀವನ ಮತ್ತು ಸಿನಿಪಯಣದ ಒಂದು ಝಲಕ್

ಶ್ರೀದೇವಿ ಬಾಲನಟಿಯಾಗಿ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು. 1967ರಲ್ಲಿ, ತಮ್ಮ ನಾಲ್ಕನೇ ವಯಸ್ಸಿನಲ್ಲಿ 'ಕಂದನ್ ಕರುಣೈ' ಎಂಬ ತಮಿಳು ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ 1972ರಲ್ಲಿ 'ರಾನಿ ಮೇರಾ ನಾಮ್' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 1980 ಮತ್ತು 1990ರ ದಶಕಗಳಲ್ಲಿ ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ಮತ್ತು ಯಶಸ್ವಿ ನಟಿಯರಲ್ಲಿ ಒಬ್ಬರಾಗಿ ಶ್ರೀದೇವಿ ಮಿಂಚಿದರು.

1996ರಲ್ಲಿ ಅವರು ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಈ ದಂಪತಿಗೆ ಜಾನ್ವಿ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಅವರಿಬ್ಬರೂ ತಮ್ಮ ತಾಯಿಯ ಹಾದಿಯಲ್ಲೇ ಸಾಗಿ ಬಾಲಿವುಡ್‌ನಲ್ಲಿ ನಟನಾ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. 2018ರಲ್ಲಿ ದುಬೈನಲ್ಲಿ ಶ್ರೀದೇವಿ ದುರಂತ ಸಾವನ್ನಪ್ಪಿದರು. ಇನ್ನು ತಮ್ಮ ವೃತ್ತಿಜೀವನದಲ್ಲಿ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ. 2013ರಲ್ಲಿ ಭಾರತ ಸರ್ಕಾರ ಅವರಿಗೆ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ 'ಪದ್ಮಶ್ರೀ' ನೀಡಿ ಗೌರವಿಸಿತು.