ದಕ್ಷಿಣ ಭಾರತದ ಖ್ಯಾತ ನಟಿ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಸರೋಜಾದೇವಿ ಅವರ ಕಲಾ ಸೇವೆಯನ್ನು ಸ್ಮರಿಸಿ, ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.

ಬೆಂಗಳೂರು ದಕ್ಷಿಣ (ಜು.15): ಭಾರತ ಚಿತ್ರರಂಗದ ಅಭಿನಯ ಸರಸ್ವತಿ ಖ್ಯಾತಿಯ ನಟಿ ಬಿ. ಸರೋಜಾದೇವಿಯವರು ನನಗಿರುವ ಸಿನಿಮಾ ಮೇಲಿನ ಆಸಕ್ತಿಯನ್ನು ಕಂಡು ನಾನು ಮೊದಲ ಬಾರಿಗೆ ಸಚಿಒವನಾದಾಗ ಸಿನಿಮಾದಲ್ಲಿ ನಟಿಸುವಂತೆ ತಿಳಿಸಿದ್ದರು. ಅದು ಸಾಧ್ಯವಾಗಲಿಲ್ಲ. ನಮ್ಮ ಜಿಲ್ಲೆಯವರಾದ ಸರೋಜಾದೇವಿಯವರ ಕಲಾಸೇವೆಗಾಗಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶಾವಾರದಲ್ಲಿ ನಡೆದ ಬಿ. ಸರೋಜಾದೇವಿ ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದ ಡಿಸಿಎಂ ಶಿವಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ನಾವೆಲ್ಲರೂ ಇಂದು ದಕ್ಷಿಣ ಭಾರತದ ಖ್ಯಾತ ನಟಿ ಬಿ. ಸರೋಜಾದೇವಿ ಅವರ ಅಂತಿಮ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇವೆ. ಇವರು ದಕ್ಷಿಣ ಭಾರತದ ಖ್ಯಾತ ನಟರ ಜತೆ ತಲಾ 20 ರಿಂದ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರವಾದ ಕೀರ್ತಿ ಸಂಪಾದಿಸಿದ್ದಾರೆ. ಇಡೀ ಕರ್ನಾಟಕ ಸರ್ಕಾರ, ದಕ್ಷಿಣ ಭಾರತದ ಕಲಾವಿದರು ಅವರಿಗೆ ಗೌರವಪೂರ್ವಕವಾಗಿ ನಮನ ಅರ್ಪಿಸುವ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.

ನನಗೂ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದರು:

'ಸರೋಜಾದೇವಿ ಅವರು ನನಗೆ ಸಣ್ಣ ವಯಸ್ಸಿನಿಂದಲೂ ಬಹಳ ಪರಿಚಯ. ನಾನು ಆರಂಭದಲ್ಲಿ ಸಚಿವನಾದಾಗ, ನನ್ನನ್ನು ಕರೆದು ನೀನು ಸಿನಿಮಾಗಳಲ್ಲಿ ನಟನೆ ಮಾಡಬೇಕು ಎಂದು ಹೇಳಿದ್ದರು. ಅವರು ನಮ್ಮ ಜಿಲ್ಲೆಯವರು. ಅವರ ಅಂತಿಮ ಸಂಸ್ಕಾರವನ್ನು ಇಲ್ಲಿ ಮಾಡುತ್ತಿದ್ದೇವೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಸಾಧನೆ ಮಾಡುತ್ತೇವೆ ಅದು ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.

ಸರೋಜಾದೇವಿ ಅವರು ಬಹಳ ಚಿಕ್ಕ ವಯಸ್ಸಿಗೆ ಭಾರತ ಸರ್ಕಾರದ ಪದ್ಮ ವಿಭೂಷಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಆ ಕಾಲದಲ್ಲಿ ಆ ವಯಸ್ಸಿಗೆ ಯಾರೂ ಆ ಪ್ರಶಸ್ತಿ ಪಡೆದಿರಲಿಲ್ಲ. ಅವರ ಹೆಸರು ಶಾಶ್ವತವಾಗಿ ಉಳಿದುಕೊಳ್ಳಲು ರಸ್ತೆಗಳಿಗೆ ಅವರ ಹೆಸರಿಡುವ ಕಾರ್ಯಕ್ರಮವನ್ನು ರೂಪಿಸಬೇಕು ಎಂದು ನಮ್ಮ ಶಾಸಕರಾದ ಯೋಗೇಶ್ವರ್ ಒತ್ತಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಡಿಎ ಅಥವಾ ಪಾಲಿಕೆಯಲ್ಲಿ ಈ ವಿಚಾರ ಚರ್ಚೆ ಮಾಡಿ ಈ ಕೆಲಸ ಮಾಡುತ್ತೇವೆ' ಎಂದರು.

'ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಅವರು ಮಾಡಿರುವ ಅಪಾರವಾದ ಕಲಾ ಸೇವೆ ಅಪ್ರತಿಮವಾದುದ್ದು. ಅವರು ಎಂದಿಗೂ ಒಂದೇ ಒಂದು ವಿವಾದಕ್ಕೆ ಸಿಲುಕಲಿಲ್ಲ. ಎಲ್ಲಾ ವರ್ಗದ ಜನ ಅವರನ್ನು ಬಹಳ ಪ್ರೀತಿ, ಗೌರವದಿಂದ ಕಂಡಿದ್ದಾರೆ. ರಾಜ್ಯಕ್ಕೆ ಸಮಸ್ಯೆ ಎದುರಾದಾಗ ಅವರು ನಮ್ಮ ಜೊತೆ ನಿಂತು ರಾಜ್ಯದ ಹಿತ ಕಾಪಾಡಿದ್ದಾರೆ. ಕಲೆಗೆ ಹೆಚ್ಚಿಗೆ ಪ್ರೋತ್ಸಾಹ ನೀಡಿರುವುದನ್ನು ನಾವು ಸ್ಮರಿಸಬೇಕು. ಸರ್ಕಾರದ ಪರವಾಗಿ, ಈ ಜಿಲ್ಲೆಯವನಾಗಿ ಅವರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗುತ್ತಿದೆ' ಎಂದು ಹೇಳಿದರು.

ಅವರ ಪ್ರತಿಮೆ ನಿರ್ಮಾಣ ಮಾಡಲಾಗುವುದೇ ಎಂದು ಕೇಳಿದಾಗ, 'ಪ್ರತಿಮೆ ಮುಖ್ಯವಲ್ಲ. ಅವರ ವಿಚಾರದಲ್ಲಿ ಏನು ಮಾಡಬೇಕು ಎಂಬುದುನ್ನು ನಾವು ಚರ್ಚೆ ಮಾಡಿ ತಿಳಿಸುತ್ತೇವೆ. ಅವರ ಹೆಸರು ಉಳಿದುಕೊಳ್ಳುವಂತೆ ಏನುಬೇಕೋ ಅದನ್ನು ಮಾಡುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ತಿಳಿಸಿದರು.