ಅಂಬಿ ಅಂತ್ಯಕ್ರಿಯೆ: ಒಂದಾಗಲೇ ಇಲ್ಲ ಈ ಸ್ಯಾಂಡಲ್ವುಡ್ ಸ್ಟಾರ್ಸ್
ಕನ್ನಡ ಚಿತ್ರರಂಗದ ಒಂದು ಪೀಳಿಗೆಯ ಕೊನೆಯ ಕೊಂಡಿಯೂ ಕಳಚಿದೆ. ಇನ್ನು ಮುಂದೆ ಚಿತ್ರರಂಗವನ್ನು ಹಿರಿಯಣ್ಣನಂತೆ ಮುಂದೆ ನಡೆಸುವವರು ಯಾರು ? ಎಂಬ ಪ್ರಶ್ನೆಯೂ ಎದುರಾಗಿದೆ. ಇದೆಲ್ಲದರ ನಡುವೆ ಸಾಮಾಜಿಕ ತಾಣದಲ್ಲಿ ಕಿಚ್ಚ ಸುದೀಪ್ ಮತ್ತು ದರ್ಶನ್ ವಿಷ್ಣೂ-ಅಂಬಿ ಜಾಗ ತುಂಬಬೇಕು ಎಂಬ ಮಾತು ಕೇಳಿಬರುತ್ತಿದೆ.
ಶೂಟಿಂಗ್ ಬಿಟ್ಟು ಸ್ವೀಡನ್ನಿಂದ ಬಂದ ದರ್ಶನ್ ಅಂಬಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಕಿಚ್ಚ ಸುದೀಪ್ ಕಂಠೀರವ ಕ್ರೀಡಾಂಗಣದಲ್ಲಿಯೇ ಅಂಬಿ ಅಂತಿಮ ದರ್ಶನ ಪಡೆದರು. ಯಶ್ ಆರಂಭದಿಂದ ಅಂತ್ಯದವರೆಗೂ ಅಂಬರೀಶ್ ಕುಟುಂಬದ ಜತೆಯಾಗೆ ಇದ್ದರು.
ಅಭಿಮಾನಿಗಳು ಮಾತ್ರ ತಮ್ಮದೇ ಆದ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ. ಸಣ್ಣ ಭಿನ್ನಾಭಿಪ್ರಾಯ ಇಬ್ಬರ ನಡುವೆ ಇದ್ದರೂ ಅದನ್ನು ಮೀರಿ ನಿಲ್ಲಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ. ಹಿಂದೆ ಅಂಬಿ ಜನ್ಮದಿನಾಚರಣೆ ವೇಳೆ ಇಬ್ಬರು ನಾಯಕರು ಕುಚಿಕು..ಕುಚಿಕು..ಹಾಡಿಗೆ ಒಟ್ಟಿಗೆ ಹೆಜ್ಜೆ ಹಾಕಿದ್ದರು. ಇನ್ನು ಮುಂದೆಯೂ ಅದೇ ರೀತಿ ಇರಬೇಕು ಎಂದು ಆಸೆ ಪಟ್ಟಿದ್ದಾರೆ.
ಅಂಬಿ ಅಂತ್ಯಸಂಸ್ಕಾರ : ಸಾಮಾನ್ಯರಾದ ತಾರೆಯರು
ಆದರೆ ಎಲ್ಲ ನಾಯಕರು ಒಟ್ಟಾಗಿ ಕಾಣಿಸಿಕೊಂಡಿದ್ದು ನಿಜ. ಅಂಬಿ ಅಂತ್ಯ ಸಂಸ್ಕಾರದ ವೇಳೆ ಯಶ್ ಮತ್ತು ದರ್ಶನ್ ಕೊನೆಯವರಿಗೆ ಇದ್ದರು. ಆದರೆ ಇಬ್ಬರ ನಡುವೆ ನಡೆದ ಮಾತುಕತೆ ಅಷ್ಟಕಷ್ಟೆ. ಇನ್ನು ಸುದೀಪ್ ಮತ್ತು ದರ್ಶನ್ ಮುಖಾಮುಖಿ ಆಗಲೇ ಇಲ್ಲ. ಒಂದು ಕಡೆ ನಿಧನದ ದುಖಃ ಇದ್ದರೂ ಇನ್ನೊಂದು ಕಡೆ ಚಿತ್ರೋದ್ಯಮದಲ್ಲಿ ಹೊಸ ಒಗ್ಗಟ್ಟು ಮೂಡಬಹುದು ಎಂದು ಭಾವಿಸಲಾಗಿತ್ತು.
ಕನ್ನಡ ಚಿತ್ರರಂಗದ ಭೀಷ್ಮ, ರೆಬಲ್ ಸ್ಟಾರ್ ಅಂಬರೀಶ್ ನವೆಂಬರ್ 24 ರ ರಾತ್ರಿ ನಿಧನರಾಗಿದ್ದರು. ಗಣ್ಯರು, ರಾಜಕಾರಣಿಗಳು, ಚಿತ್ರೋದ್ಯಮದ ಸಾವಿರಾರು ಜನ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದ್ದರು. ಅಂಬರೀಶ್ ಜತೆಗೆ ದರ್ಶನ್ ಮತ್ತು ಸುದೀಪ್ ಸಹ ಅಭಿನಯ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಜೂನಿಯರ್ ಅಂಬರೀಶ್ ಪಾತ್ರವನ್ನು ಕಿಚ್ಚ ಸುದೀಪ್ ನಿರ್ವಹಿಸಿದ್ದರು.