ಅಂಬಿ ಅಂತ್ಯಸಂಸ್ಕಾರ : ಸಾಮಾನ್ಯರಾದ ತಾರೆಯರು
ನೆಚ್ಚಿನ ಸ್ಯಾಂಡಲ್ವುಡ್ ಹಮ್ಮೀರ ಅಂಬಿ ಅಂತಿಮ ಸಂಸ್ಕಾರದಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟರು ಸೇರಿದಂತೆ ಎಲ್ಲಾ ತಾರೆಯರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.
ಬೆಂಗಳೂರು : ತಮ್ಮ ನೆಚ್ಚಿನ ಸ್ಯಾಂಡಲ್ವುಡ್ ಹಮ್ಮೀರ ಅಂಬಿ ಅಂತಿಮ ಸಂಸ್ಕಾರದಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್ ನಟರು ಸೇರಿದಂತೆ ಎಲ್ಲಾ ತಾರೆಯರೂ ಸಾಮಾನ್ಯರಲ್ಲಿ ಸಾಮಾನ್ಯರಂತೆ ಭಾಗವಹಿಸಿದ್ದರು.
ತೆಲುಗಿನ ಪ್ರಖ್ಯಾತ ನಟ ಡಾ. ಮೋಹನ್ ಬಾಬು ಕುಟುಂಬ ಸದಸ್ಯರೆಲ್ಲರೂ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಅಂತಿಮ ನಮನ ಸಲ್ಲಿಸುವಾಗ ಮೋಹನ್ಬಾಬು ಹಾಗೂ ಪತ್ನಿ, ಪುತ್ರ, ಪುತ್ರಿ ಎಲ್ಲರೂ ಕಣ್ಣೀರಿಟ್ಟರು. ಇದಕ್ಕೂ ಮೊದಲು ಅಂಬರೀಷ್ ಪಾರ್ಥೀವ ಶೀರರಕ್ಕೆ ಶವ ಸಂಸ್ಕಾರ ಪೂರೈಸಿದ ಬಳಿಕ ಕನ್ನಡದ ಸ್ಟಾರ್ ನಟರೆಲ್ಲರೂ ಸೇರಿ ಚಿತೆಯ ಮೇಲಿಡಲು ಹೆಗಲು ಕೊಟ್ಟರು. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಪುನೀತ್ರಾಜ್ಕುಮಾರ್, ದರ್ಶನ್, ಯಶ್, ನೆನಪಿರಲಿ ಪ್ರೇಮ್ ಸೇರಿದಂತೆ ಪ್ರಮುಖರು ಹೆಗಲು ನೀಡಿದರು. ಇದಕ್ಕೂ ಮೊದಲು ಎಲ್ಲಾ ಕಲಾವಿದರು ಅಂಬಿಯ ಅಂತಿಮ ದರ್ಶನ ಪಡೆದರು.
ಚಿತೆಯ ಕಟ್ಟೆಯಲ್ಲೂ ‘ಅಂಬಿ ಅಮರ’
ಚಿತೆಗಾಗಿ ಕಟ್ಟಿದ್ದ ಕಟ್ಟೆಯ ಮೇಲೆ ಅಂಬಿಯನ್ನು ನೆನೆದ ಕಲೆಯನ್ನು ಅರಳಿಸಲಾಗಿತ್ತು. ಕಲಾಕಾರರು ಚಿತೆಯ ಕಟ್ಟೆಯ ತುಂಬೆಲ್ಲ ಅಂಬರೀಷ್ ಅವರ ಚಿತ್ರ ಹಾಗೂ ಸೂರ್ಯ ಹಸ್ತಂಗತವಾಗುತ್ತಿರುವ ಚಿತ್ರವನ್ನು ಬಿಡಿಸಿದ್ದರು. ಜತೆಗೆ, ‘ಓ ಹೃದಯವಂತ ಮತ್ತೆ ಹುಟ್ಟಿಬಾ’ ‘ಕಲಿಯುಗದ ಕರ್ಣ ಕಾಲದಲ್ಲಿ ಕರಗಿ ಹೋದೆಯಾ’, ‘ಪಂಚಭೂತಗಳಲ್ಲಿ ಲೀನವಾದ ದೊಡ್ಡರಸಿನಕೆರೆ ಎಂ.ಹುಚ್ಚೇಗೌಡರ ಪುತ್ರರತ್ನ’, ‘ಅಮರನಾಥ ಅಮರ್ ರಹೇ’ ಎಂಬ ಬರಹಗಳನ್ನು ಬರೆದಿದ್ದರು.