ನಂದಮೂರಿ ಕುಟುಂಬದಿಂದ 15 ವರ್ಷಗಳ ಬಳಿಕ ಪೌರಾಣಿಕ ಸಿನಿಮಾವೊಂದು ಬರಲಿದೆ. ಯಂಗ್ ಟೈಗರ್ ಜೂ.ಎನ್ಟಿಆರ್ ನಟಿಸಲಿರುವ ಈ ಚಿತ್ರದ ಬಗ್ಗೆ ಮೇ 20ರಂದು ದೊಡ್ಡ ಸರ್ಪ್ರೈಸ್ ಸಿಗುವ ನಿರೀಕ್ಷೆ ಇದೆ.
ಟಾಲಿವುಡ್ನಲ್ಲಿ ಪೌರಾಣಿಕ ಚಿತ್ರಗಳೆಂದರೆ ಮೊದಲು ನೆನಪಾಗುವುದೇ ನಂದಮೂರಿ ತಾರಕ ರಾಮರಾವ್. ತೆಲುಗು ಪ್ರೇಕ್ಷಕರಿಗೆ ರಾಮ, ಕೃಷ್ಣ ಎಂದರೆ ಎನ್ಟಿಆರ್ ಮುಖವೇ ಕಣ್ಣ ಮುಂದೆ ಬರುತ್ತದೆ. ಆ ಪಾತ್ರಗಳಲ್ಲಿ ಅವರು ಅಷ್ಟು ಪ್ರಭಾವ ಬೀರಿದ್ದರು. ರಾಮ, ಕೃಷ್ಣ ಮಾತ್ರವಲ್ಲದೆ, ಎನ್ಟಿಆರ್ ಅವರು ಮಹಾಶಿವ, ವೆಂಕಟೇಶ್ವರ ಸ್ವಾಮಿ, ಅರ್ಜುನ, ರಾವಣನಂತಹ ಹಲವು ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು.

ಎನ್ಟಿಆರ್ ಅವರ ಪರಂಪರೆಯನ್ನು ಮಗ ಬಾಲಕೃಷ್ಣ ಕೂಡ ಮುಂದುವರಿಸಿದರು. ಅವರು ಕೆಲವು ಪೌರಾಣಿಕ ಪಾತ್ರಗಳಲ್ಲಿ ನಟಿಸಿದ್ದಾರೆ. ಬಾಲಯ್ಯ ಅವರು ಅಭಿಮನ್ಯು, ಕೃಷ್ಣ ಮತ್ತು ರಾಮನಾಗಿ ತೆರೆಮೇಲೆ ಕಾಣಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಟಾಲಿವುಡ್ನಲ್ಲಿ ಪೌರಾಣಿಕ ಚಿತ್ರಗಳು ಕಡಿಮೆಯಾಗಿವೆ. ನಂದಮೂರಿ ಕುಟುಂಬದಿಂದ ಕೊನೆಯದಾಗಿ 15 ವರ್ಷಗಳ ಹಿಂದೆ ಬಂದ ಪೌರಾಣಿಕ ಚಿತ್ರವೆಂದರೆ ಅದು ಬಾಲಕೃಷ್ಣ ನಟನೆಯ 'ಶ್ರೀರಾಮರಾಜ್ಯಂ'.
15 ವರ್ಷಗಳ ನಂತರ, ನಂದಮೂರಿ ಕುಟುಂಬದಿಂದ ಮತ್ತೊಂದು ಪೌರಾಣಿಕ ಚಿತ್ರಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಯಂಗ್ ಟೈಗರ್ ಜೂ.ಎನ್ಟಿಆರ್ ಈ ಚಿತ್ರದಲ್ಲಿ ನಟಿಸಲಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಎನ್ಟಿಆರ್ ಕಾಂಬಿನೇಷನ್ನಲ್ಲಿ 'ಗಾಡ್ ಆಫ್ ವಾರ್' ಎಂಬ ಸಿನಿಮಾ ಬರಲಿದೆ ಎಂದು ಬಹಳ ದಿನಗಳಿಂದ ಸುದ್ದಿಯಾಗುತ್ತಿದೆ. ಈ ಚಿತ್ರದ ಕಥೆಯು ಸುಬ್ರಹ್ಮಣ್ಯ ಸ್ವಾಮಿಗೆ ಸಂಬಂಧಿಸಿದ್ದಾಗಿದೆ. ಇದರಲ್ಲಿ ತಾರಕ್ ಅವರು ಸುಬ್ರಹ್ಮಣ್ಯ ಸ್ವಾಮಿಯ ಪಾತ್ರದಲ್ಲಿ ನಟಿಸಲಿದ್ದಾರೆ.
ವಿಡಿಯೋ ಬರುವ ಸಾಧ್ಯತೆ
ವಿಶೇಷವೆಂದರೆ, ಈ ಪಾತ್ರವನ್ನು ಸೀನಿಯರ್ ಎನ್ಟಿಆರ್ ಆಗಲಿ, ಬಾಲಕೃಷ್ಣ ಆಗಲಿ ಮಾಡಿರಲಿಲ್ಲ. ಆ ಅವಕಾಶ ಈಗ ತಾರಕ್ಗೆ ಸಿಕ್ಕಿದೆ. ಜೂನಿಯರ್ ಎನ್ಟಿಆರ್ ಅವರ ಹುಟ್ಟುಹಬ್ಬವಾದ ಮೇ 20 ರಂದು ಈ ಚಿತ್ರದ ಬಗ್ಗೆ ದೊಡ್ಡ ಘೋಷಣೆಯ ವಿಡಿಯೋ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಅತಿ ದೊಡ್ಡ ಬಜೆಟ್ನಲ್ಲಿ ನಿರ್ಮಿಸಲಾಗುತ್ತಿದೆ. ಕಣ್ಮನ ಸೆಳೆಯುವ ವಿಎಫ್ಎಕ್ಸ್ನೊಂದಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ ಎಂದು ತಿಳಿದುಬಂದಿದೆ. ತಾರಕ್ ಅಭಿಮಾನಿಗಳು ಈ ಚಿತ್ರದ ದೊಡ್ಡ ಘೋಷಣೆಗಾಗಿ ಕಾತರದಿಂದ ಕಾಯುತ್ತಿದ್ದಾರೆ.


