ನನ್ನ ಸಿನಿಮಾ ಹಾಳು ಮಾಡಬೇಡಿ ಅಂತ ಖ್ಯಾತ ನಿರ್ದೇಶಕರೊಬ್ಬರು ಚಿರಂಜೀವಿಗೆ ನೇರವಾಗಿಯೇ ಹೇಳಿದ್ದರು. ಕೊನೆಗೆ ಆ ಚಿತ್ರದಿಂದ ಆ ನಿರ್ದೇಶಕ ಹೊರನಡೆದರು. ಆ ಸಿನಿಮಾದ ಫಲಿತಾಂಶ ಏನಾಯ್ತು ಗೊತ್ತಾ?

ಮೆಗಾಸ್ಟಾರ್ ಚಿರಂಜೀವಿ ಕೊನೆಯದಾಗಿ 'ವಾಲ್ತೇರು ವೀರಯ್ಯ' ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದರು. ಸದ್ಯ ಚಿರಂಜೀವಿ ನಟನೆಯ 'ವಿಶ್ವಂಭರ' ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಬಾಬಿ ನಿರ್ದೇಶನದಲ್ಲಿ ಮತ್ತೊಂದು ಚಿತ್ರ ಮಾಡಬೇಕಿದೆ. ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ಕೆಲವು ಸಂದೇಶಾತ್ಮಕ ಚಿತ್ರಗಳನ್ನು ಮಾಡಿದ್ದಾರೆ. ಅವುಗಳಲ್ಲಿ 'ಠಾಗೋರ್' ಸಿನಿಮಾ ಕೂಡ ಒಂದು. ಈ ಚಿತ್ರದ ಹಿಂದೆ ದೊಡ್ಡ ಕಥೆಯೇ ಇದೆ.

Add Asianetnews Kannada as a Preferred SourcegooglePreferred

ಮೊದಲು ಈ ಚಿತ್ರವನ್ನು ರಾಜಶೇಖರ್ ಮಾಡಬೇಕಿತ್ತು. ಆದರೆ ಆ ಸಿನಿಮಾ ಚಿರಂಜೀವಿ ಕೈಗೆ ಬಂತು. ಇದು 'ರಮಣ' ಎಂಬ ತಮಿಳು ಚಿತ್ರದ ರಿಮೇಕ್. ಮೂಲ ಆವೃತ್ತಿಯನ್ನು ಮುರುಗದಾಸ್ ನಿರ್ದೇಶಿಸಿದ್ದರು. ತೆಲುಗು ರಿಮೇಕ್ ಅನ್ನು ಕೂಡ ಮುರುಗದಾಸ್ ಅವರೇ ನಿರ್ದೇಶಿಸಬೇಕಿತ್ತು. ಆದರೆ ಚಿರಂಜೀವಿ ಜೊತೆಗಿನ ಭಿನ್ನಾಭಿಪ್ರಾಯಗಳಿಂದ ಮುರುಗದಾಸ್ ಈ ಚಿತ್ರದಿಂದ ಹೊರನಡೆದರು. ಹೀಗಾಗಿ 'ಠಾಗೋರ್' ನಿರ್ದೇಶಿಸುವ ಅವಕಾಶ ವಿ.ವಿ. ವಿನಾಯಕ್ ಅವರಿಗೆ ಸಿಕ್ಕಿತು.

ಈ ಚಿತ್ರಕ್ಕೆ ಕಮರ್ಷಿಯಲ್ ಅಂಶಗಳನ್ನು ಸೇರಿಸುವುದು ಮುರುಗದಾಸ್‌ಗೆ ಇಷ್ಟವಿರಲಿಲ್ಲ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಚಿರಂಜೀವಿ, 'ನಾವು ಮುರುಗದಾಸ್ ಬಳಿ ಈ ಸಿನಿಮಾ ಮಾಡಲು ಕೇಳಿದೆವು. ತಮಿಳಿನಲ್ಲಿರುವಂತೆ ಕ್ಲೈಮ್ಯಾಕ್ಸ್‌ನಲ್ಲಿ ಹೀರೋ ಸಾಯಬಾರದು ಎಂದು ಸಲಹೆ ನೀಡಿದೆವು. ಅದಕ್ಕೆ ಅವರು, 'ಸರ್, ಈ ಸಿನಿಮಾದಲ್ಲಿ ಹೀರೋ ಮಹಾನ್ ತ್ಯಾಗಿ. ಆತ ಸಾಯುವುದೇ ಸರಿ' ಎಂದರು. ನಾನು ಹಾಗೆ ಮಾಡಿದರೆ ಅಭಿಮಾನಿಗಳು ಸುಮ್ಮನಿರಲ್ಲ, ನಿರ್ಮಾಪಕ ಸತ್ತು ಹೋಗುತ್ತಾನೆ ಎಂದು ಹೇಳಿದೆ' ಎಂದಿದ್ದರು.

ಅದೇ ರೀತಿ ಸಿನಿಮಾದಲ್ಲಿ ಹಾಡುಗಳೂ ಇರಬೇಕು ಎಂದು ನಾವು ಹೇಳಿದೆವು. 'ಹಾಗೆ ಮಾಡಿದರೆ ಸಿನಿಮಾ ಹಾಳಾಗುತ್ತದೆ' ಎಂದು ಮುರುಗದಾಸ್ ಹೇಳಿದರು. ಇದರಿಂದಾಗಿ ಮುರುಗದಾಸ್ ಈ ಚಿತ್ರದಿಂದ ಹೊರನಡೆದರು ಎಂದು ಚಿರಂಜೀವಿ ವಿವರಿಸಿದರು. ಆದರೆ ವಿ.ವಿ. ವಿನಾಯಕ್ 'ಠಾಗೋರ್' ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳನ್ನು ಅಚ್ಚುಕಟ್ಟಾಗಿ ಸೇರಿಸಿ ಸಿನಿಮಾ ಬ್ಲಾಕ್‌ಬಸ್ಟರ್ ಆಗುವಂತೆ ಮಾಡಿದರು.

ಅತಿ ದೊಡ್ಡ ಮಾರುಕಟ್ಟೆ

ಚಿರಂಜೀವಿ ಮಾತನಾಡಿ, 'ನನ್ನ ಸಿನಿಮಾಗಳಲ್ಲಿ ಹೀರೋ ಸಾಯುವುದು, ಹಾಡುಗಳಿಲ್ಲದೆ ಇರುವುದು ಇಂತಹ ಪ್ರಯೋಗಗಳನ್ನು ಮಾಡಬಾರದು. ಯಾಕೆಂದರೆ ಹಿಂದಿ ನಂತರ ನಮಗೇ ಅತಿ ದೊಡ್ಡ ಮಾರುಕಟ್ಟೆ ಇರುವುದು. ಕೋಟ್ಯಂತರ ರೂಪಾಯಿ, ಎಷ್ಟೋ ಜನರ ಜೀವನ ಒಂದು ಸಿನಿಮಾದ ಮೇಲೆ ಅವಲಂಬಿತವಾಗಿರುತ್ತದೆ. ಕೇವಲ ಭಾವನಾತ್ಮಕವಾಗಿರಲಿ ಎಂದು ಪ್ರಯೋಗ ಮಾಡಿದರೆ ಸಿನಿಮಾ ಸೋಲುತ್ತದೆ. ಅದಕ್ಕಾಗಿಯೇ 'ಠಾಗೋರ್' ಚಿತ್ರದ ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ನಾನು ಬಯಸಲಿಲ್ಲ' ಎಂದು ಚಿರಂಜೀವಿ ಹೇಳಿದರು.