ಭಾಗ್ಯಲಕ್ಷ್ಮಿ ಸೀರಿಯಲ್ ಕುತೂಹಲದ ಹಂತ ತಲುಪಿದ್ದು ಆದಿಲಕ್ಷ್ಮಿ ಆಗುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏನಿದು ಟ್ವಿಸ್ಟ್? ಏನಿದು ಮಧ್ಯವಯಸ್ಸಿನ ಲವ್ ಸ್ಟೋರಿ?
ಭಾಗ್ಯಲಕ್ಷ್ಮಿಯ ತಂಗಿ ಪೂಜಾಳ ಮದುವೆಯ ಮಾತುಕತೆ, ಗೊಂದಲ ನಡೀತಿದೆ. ಇದೀಗ ಪೂಜಾಳನ್ನು ಲವ್ ಮಾಡ್ತಿದ್ದ ಕಿಶನ್ ಜೊತೆ ಮದುವೆಯ ಮಾತುಕತೆ ನಡೆಯುತ್ತಿದೆ. ಅದನ್ನೂ ತಪ್ಪಿಸಲು ತಾಂಡವ್ ನೋಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇಲ್ಲೊಂದು ಎಡವಟ್ಟು ಆಗಿದೆ. ಅದೇನೆಂದರೆ ಭಾಗ್ಯಳಿಗೆ ಸದಾ ಟಾರ್ಚರ್ ಕೊಡ್ತಿರೋ ಕನ್ನಿಕಾ ಅಣ್ಣನೇ ಕಿಶನ್. ಇದೀಗ ಅವಳು ಮದುವೆಗೆ ಅಡ್ಡಗಾಲು ಹಾಕಿ ಭಾಗ್ಯಳಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈದಿದ್ದಾಳೆ. ಇದನ್ನು ಕೇಳಿಸಿಕೊಂಡ ಪೂಜಾ ಉರಿದು ಹೋಗಿ, ನಿಮ್ಮ ಮನೆಗೆ ನಾನು ಸೊಸೆಯಾಗಿ ಬರುವುದಿಲ್ಲ, ಈ ಮದುವೆ ಆಗುವುದಿಲ್ಲ ಎಂದು ಸವಾಲು ಹಾಕಿ ಬಂದಿದ್ದಾಳೆ. ಆದರೆ ಈಗ ಆಗಿರೋದೇ ಬೇರೆ. ಪೂಜಾಳ ಮದುವೆಯನ್ನು ಆಕೆ ಇಷ್ಟಪಟ್ಟಿರುವ ಕಿಶನ್ ಜೊತೆ ಮಾಡಿಸಲು ಆತನ ಅಪ್ಪ ಒಪ್ಪಿಗೆ ನೀಡಿದ್ದಾನೆ. ಆದರೆ ಕನ್ನಿಕಾ ಹೇಗಾದ್ರೂ ಮದುವೆಯನ್ನು ತಪ್ಪಿಸಲು ಮುಂದಾಗಿದ್ದಾಳೆ. ಅದಕ್ಕಾಗಿ ತನ್ನ ಅಣ್ಣ ಆದಿಯ ನೆರವು ಪಡೆದುಕೊಂಡಿದ್ದಾಳೆ.
ಕನ್ನಿಕಾ ಅಣ್ಣನಾಗಿ ನಟ ಹರೀಶ್ ಎಂಟ್ರಿಯಾಗಿದೆ. ಆದರೆ, ಈತ ಕಿಶನ್ ಅಣ್ಣ ಎಂದು ತಿಳಿಯದೇ ಕುಸುಮಾ ಮತ್ತು ಭಾಗ್ಯ ಗಾಡಿಯ ವಿಷಯದಲ್ಲಿ ಆದಿ ಜೊತೆ ಜಗಳವಾಡಿಕೊಂಡಿದ್ದಾರೆ. ಕುಸುಮಾ, ಆದಿಯ ಕಾರನ್ನು ಒಡೆದಿದ್ದಾಳೆ.ಕೊನೆಗೆ ಇವನೇ ಕಿಶನ್ ಅಣ್ಣ ಎಂದು ತಿಳಿದಾಗ ಇಬ್ಬರೂ ಕ್ಷಮೆ ಕೋರಿದ್ದಾರೆ. ಆದರೆ ಇವರಿಬ್ಬರ ಅಬ್ಬರ ನೋಡಿ, ಭಾಗ್ಯ ಮತ್ತು ಕುಸುಮಾ ಸರಿಯಿಲ್ಲ. ತನ್ನ ತಮ್ಮನ ಮದುವೆ ಅವಳ ಜೊತೆ ಸಾಧ್ಯನೇ ಇಲ್ಲ ಎಂದಿದ್ದಾನೆ ಆದಿ. ಆದರೆ ತಂದೆ ಮಾತ್ರ ಅವರು ತುಂಬಾ ಒಳ್ಳೆಯವರು, ನಿನಗೇ ಅರ್ಥ ಆಗುತ್ತದೆ ಎಂದಿದ್ದಾನೆ. ಆದರೆ ಆದಿ ಭಾಗ್ಯ ಸರಿಯಿಲ್ಲ ಎಂದು ನಿಮಗೆ ಪ್ರೂವ್ ಮಾಡಿ ತೋರಿಸುತ್ತೇನೆ. ಆಗ ಗೊತ್ತಾಗತ್ತೆ ಎಂದು ಚಾಲೆಂಜ್ ಮಾಡಿದ್ದಾನೆ.
ಈ ಚಾಲೆಂಜ್ ನಡುವೆಯೇ, ಭಾಗ್ಯ ಮತ್ತು ಆದಿಯ ನಡುವೆ ಲವ್ ಉಂಟಾಗುತ್ತದೆ ಎನ್ನುವುದು ವೀಕ್ಷಕರ ಅಭಿಮತ. ಭಾಗ್ಯಲಕ್ಷ್ಮಿ ಈಗ ಆದಿ ಲಕ್ಷ್ಮಿ ಆಗಲಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ತಾಂಡವ್ ಶ್ರೇಷ್ಠಾಳನ್ನು ಮದುವೆಯಾದ ಮೇಲೆ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸುವಂತೆ ನೆಟ್ಟಿಗರ ಒತ್ತಾಯ ಹೆಚ್ಚಾಗಿ ಕೇಳಿಬರುತ್ತಿದೆ. ಇದರ ನಡುವೆಯೇ ಹೊಸ ಪಾತ್ರದ ಎಂಟ್ರಿ ಆಗಿರುವ ಕಾರಣ, ಈತ ಭಾಗ್ಯಳ ಲೈಫ್ಗೂ ಎಂಟ್ರಿ ಕೊಡುತ್ತಾನೆ. ಭಾಗ್ಯಳಿಗೆ ಜೋಡಿ ಆಗುತ್ತಾನೆ, ಹಾಗೆಯೇ ಆಗಬೇಕು. ಭಾಗ್ಯಳಿಗೆ ಇನ್ನೊಂದು ಮದುವೆಯಾಗಬೇಕು ಎನ್ನುವುದು ನೆಟ್ಟಿಗರ ಆಶಯ. ನಿಜ ಜೀವನದಲ್ಲಿ ಇದೇ ಸ್ಥಿತಿ ಒಬ್ಬ ಹೆಣ್ಣಿಗೆ ಬಂದರೆ ಬಹುತೇಕ ಜನರು ಭಾಗ್ಯಳ ಅಮ್ಮ ಸುನಂದಾಳ ಅವತಾರವೇ ತಾಳುವುದು ಇದೆ. ಆದರೆ ಸೀರಿಯಲ್ನಲ್ಲಿಯಾದರೂ ಈ ರೀತಿಯ ಸ್ವತಂತ್ರ ಮನೋಭಾವ ಹೊಂದಿರುವುದು ತಿಳಿಯುತ್ತದೆ. ಬದಲಾಗುತ್ತಿರುವ ಸಮಾಜದ ಮನಸ್ಥಿತಿಗೂ ಇದೊಂದು ರೀತಿಯಲ್ಲಿ ಉದಾಹರಣೆ ಎನ್ನಬಹುದು.
ಇದರ ನಡುವೆಯೇ, ಇಂತಿಪ್ಪ ಭಾಗ್ಯಲಕ್ಷ್ಮಿ ಇದೀಗ 800 ಸಂಚಿಕೆಗಳನ್ನು ಮುಗಿಸಿದೆ. 2022 ಅಕ್ಟೋಬರ್ 10ರಿಂದ ಈ ಸೀರಿಯಲ್ ಆರಂಭವಾಗಿತ್ತು. ಎರಡೂವರೆ ವರ್ಷ ಮುಗಿದಿದ್ದು, ಟಿಆರ್ಪಿಯಲ್ಲಿಯೂ ಮುಂದಿದೆ. ಭಾಗ್ಯಲಕ್ಷ್ಮಿ ಸೀರಿಯಲ್ ಇದೀಗ ಕುತೂಹಲದ ಘಟ್ಟಕ್ಕೆ ಬಂದು ಮುಟ್ಟಿದೆ. ಭಾಗ್ಯಳನ್ನು ಹೇಗಾದರೂ ಮಾಡಿ ತುಳಿಯಬೇಕು, ಗಂಡಸು ಇಲ್ಲದೆಯೇ ಹೆಣ್ಣು ಏನೂ ಮಾಡಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಬೇಕು, ನಾನಿಲ್ಲದೇ ಭಾಗ್ಯಳಿಗೆ ಸಂಸಾರ ನಡೆಸಲು ಸಾಧ್ಯವೇ ಇಲ್ಲ ಎನ್ನುವ ಅಹಂನಲ್ಲಿದ್ದ ತಾಂಡವ್ಗೆ ಭಾರಿ ಮುಖಭಂಗ ಆಗಿಯೇ ಬಿಟ್ಟಿದೆ. ತನ್ನ ಲವರ್ ಶ್ರೇಷ್ಠಾಳನ್ನು ಭಾಗ್ಯ ಬಿಟ್ಟುಕೊಟ್ಟರೂ ತಾಂಡವ್ಗೆ ಸಮಾಧಾನ ಇಲ್ಲ. ಸಂಸಾರ ನಡೆಸುವುದು ಎಂದರೆ ಅಡುಗೆ ಮನೆಯಲ್ಲಿ ಸೌಟು ಆಡಿಸಿದಂತೆ ಅಲ್ಲ ಎಂದು ಅವನು ಹೇಳಿದ್ದ. ಆದರೆ ಈಗ ಸೌಟು ಹಿಡಿಯೋಳು ಸಂಸಾರವನ್ನು ನಿಭಾಯಿಸಬಲ್ಲುಳು ಎನ್ನೋದನ್ನು ತೋರಿಸಿಕೊಟ್ಟಿರೋ ಭಾಗ್ಯ, ತಾಂಡವ್ ಕಚೇರಿಯಲ್ಲಿಯೇ ಕ್ಯಾಂಟೀನ್ ಓನರ್ ಆಗಿದ್ದಾಳೆ. ಇವೆಲ್ಲ ವಿಷಯ ತಿಳಿದುಕೊಂಡ ಮೇಲೆ ಆದಿಗೆ ಭಾಗ್ಯಳ ಮೇಲೆ ಪ್ರೀತಿ ಹುಟ್ಟುತ್ತದೆ ಎಂದೇ ಹೇಳಲಾಗುತ್ತಿದೆ, ಹಾಗೆ ಆಗಬೇಕು ಎನ್ನುವುದೇ ಬಹುತೇಕ ಮಂದಿಯ ಆಶಯ.
