*  ನಾಳೆಯಿಂದಲೇ ನೋಂದಣಿ, ಪಾಸಾದರೆ ಈ ವರ್ಷವೇ ಉನ್ನತ ಶಿಕ್ಷಣಕ್ಕೆ ಪ್ರವೇಶ*  ಫೇಲಾಗಿದ್ದರೆ ನಿರಾಶೆ ಬೇಡ: ಸಚಿವ ನಾಗೇಶ್‌*  ಮರುಮೌಲ್ಯಮಾಪನಕ್ಕೆ ಜು.6ರಿಂದ ಅರ್ಜಿ ಸಲ್ಲಿಕೆ 

ಬೆಂಗಳೂರು(ಜೂ.18): ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ನಿರಾಶರಾಗಬಾರದು. ಬರುವ ಆಗಸ್ಟ್‌ ತಿಂಗಳಲ್ಲಿ ಪೂರಕ ಪರೀಕ್ಷೆ ನಡೆಸಲಾಗುವುದು. ಈ ವೇಳೆ ಅನುತ್ತಿರ್ಣವಾಗಿರುವ ಪರೀಕ್ಷೆ ಬರೆದು ಉತ್ತಿರ್ಣರಾಗಿ ಈ ವರ್ಷವೇ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದರು.

ಜೂನ್‌ ಕೊನೆಯ ವಾರದಲ್ಲಿ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲಾಗುವುದು. ಪರೀಕ್ಷೆಗೆ ಸೋಮವಾರದಿಂದ ನೋಂದಣಿ ಆರಂಭವಾಗಲಿದ್ದು ಜೂನ್‌ 24ರ ವರೆಗೆ ದಂಡ ವಿಲ್ಲದೆ ನಿಗದಿತ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬಹುದು. ಆ ನಂತರ ಜುಲೈ 4ರ ವರೆಗೆ ದಂಡ ಶುಲ್ಕದೊಂದಿಗೆ ನೋಂದಣಿಗೆ ಅವಕಾಶವಿರುತ್ತದೆ. ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಪ್ರವರ್ಗ 1ರ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿ ವಿಷಯಕ್ಕೆ 140 ರು., ಎರಡು ವಿಷಯಕ್ಕೆ 270 ರು., ಮೂರು ಮತ್ತು ಹೆಚ್ಚಿನ ವಿಷಯಕ್ಕೆ 400 ರು. ಶುಲ್ಕ ನಿಗದಿಪಡಿಸಿದೆ. ಫಲಿತಾಂಶ ತಿರಸ್ಕರಣಾ ಶುಲ್ಕ ಒಂದು ವಿಷಯಕ್ಕೆ 175 ರು., ಎರಡನೇ ಬಾರಿ ಅಥವಾ ಅಂತಿಮ ಬಾರಿ ತಿರಸ್ಕರಣೆಗೆ 350 ರು. ನಿಗದಿ ಪಡಿಸಲಾಗಿದೆ.

SSLC Supplementary Exam 2022 ಜೂನ್ 27 ರಿಂದ ಪೂರಕ ಪರೀಕ್ಷೆ ಆರಂಭ

ಜುಲೈನಲ್ಲಿ ಮರು ಮೌಲ್ಯಮಾಪನ

ಪ್ರಸ್ತುತ ಪ್ರಕಟವಾಗಿರುವ ದ್ವಿತೀಯ ಪಿಯುಸಿ ಫಲಿತಾಂಶದ ತಮ್ಮ ಉತ್ತರ ಪತ್ರಿಕೆಗಳ ಸ್ಕಾ್ಯನ್‌ ಪ್ರತಿ, ಮರು ಮೌಲ್ಯಮಾಪನ ಮತ್ತು ಅಂಕ ಮರು ಎಣಿಕೆಗೆ ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸ್ಕಾ್ಯನ್‌ ಪ್ರತಿ ಪಡೆದವರಿಗೆ ಮಾತ್ರ ಮರು ಮೌಲ್ಯಮಾಪನ, ಅಂಕ ಮರು ಎಣಿಕೆಗೆ ಅವಕಾಶವಿರುತ್ತದೆ.

ಉತ್ತರ ಪತ್ರಿಕೆಗಳ ಸ್ಕಾ್ಯನಿಂಗ್‌ ಪ್ರತಿಗೆ ಅರ್ಜಿ ಸಲ್ಲಿಸಲು ಜೂ.18ರಿಂದ 30ರ ವರೆಗೆ ಅವಕಾಶ ನೀಡಲಾಗಿದ್ದು, ಸ್ಕಾ್ಯನ್‌ ಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಲು ಜು.6ರಿಂದ 10ರ ವರೆಗೆ ಅವಕಾಶವಿರುತ್ತದೆ. ಸ್ಕಾ್ಯನ್‌ ಪ್ರತಿ ಪಡೆದು ಪರಿಶೀಲಿಸಿದ ಬಳಿಕ ಅಗತ್ಯವೆನಿಸಿದವರು ಅಂಕ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಜುಲೈ 6ರಿಂದ 13ರವರೆಗೆ ಅರ್ಜಿ ಸಲ್ಲಿಸಬಹುದು. ಸ್ಕಾ್ಯನ್‌ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರು., ಪ್ರತಿ ವಿಷಯದ ಮರು ಮೌಲ್ಯಮಾಪನಕ್ಕೆ 1670 ರು. ಶುಲ್ಕ ನಿಗದಿಪಡಿಸಿದೆ. ಅಂಕ ಮರು ಎಣಿಕೆಗೆ ಶುಲ್ಕ ಇರುವುದಿಲ್ಲ ಎಂದು ಪಿಯು ಇಲಾಖೆ ನಿರ್ದೇಶಕ ರಾಮಚಂದ್ರನ್‌ ತಿಳಿಸಿದರು.

6810 ಮಕ್ಕಳಿಗೆ ಗ್ರೇಸ್‌ ಅಂಕ

ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ 6810 ವಿದ್ಯಾರ್ಥಿಗಳು ಕನಿಷ್ಠ 1ರಿಂದ ಗರಿಷ್ಠ 5 ಗ್ರೇಸ್‌ ಅಂಕ ಪಡೆದು ಪಾಸಾಗಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ. 2014ರಿಂದ ಕೃಪಾಂಕ ನೀಡುವ ಪದ್ಧತಿ ಇಲಾಖೆಯಲ್ಲಿ ಜಾರಿಯಲ್ಲಿದೆ. ಅದರಂತೆ ಈ ಬಾರಿ 6,810 ಮಕ್ಕಳಿಗೆ ಅವರು ಅನುತ್ತಿರ್ಣವಾಗಿದ್ದ ಒಂದು ವಿಷಯದಲ್ಲಿ ಮಾತ್ರ ಕೃಪಾಂಕ ನೀಡಿ ಪಾಸು ಮಾಡಲಾಗಿದೆ. ಗರಿಷ್ಠ 6 ಕೃಪಾಂಕ ನೀಡಲು ಅವಕಾಶವಿತ್ತು. ಆದರೆ, ಅಷ್ಟುಅಂಕಗಳನ್ನು ಯಾರೂ ಪಡೆದಿಲ್ಲ. ಯಾವುದೇ ವಿದ್ಯಾರ್ಥಿ ಐದು ವಿಷಯದಲ್ಲಿ ಉತ್ತೀರ್ಣವಾಗಿ ಒಂದು ವಿಷಯದಲ್ಲಿ ಅನುತ್ತಿರ್ಣನಾಗಿದ್ದರೆ ಅಂತಹ ವಿದ್ಯಾರ್ಥಿಗೆ 5 ಅಂಕ ನೀಡಿದಲ್ಲಿ ಆ ಅನುತ್ತಿರ್ಣ ವಿಷಯವೂ ಪಾಸಾಗುವುದಿದ್ದರೆ ಮಾತ್ರ ಗ್ರೇಸ್‌ ಅಂಕ ನೀಡಲಾಗಿದೆ ಎಂದು ವಿವರಿಸಿದರು. 2020ರಲ್ಲಿ 9000 ಮಕ್ಕಳಿಗೆ ಗ್ರೇಸ್‌ ಅಂಕ ನೀಡಲಾಗಿತ್ತು. ಈ ಬಾರಿ ಈ ಸಂಖ್ಯೆ ಕಡಿಮೆಯಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ SSLC ಪೂರಕ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್

ಶಿಕ್ಷಣ ಸಚಿವರ ಜಿಲ್ಲೆ ಫಲಿತಾಂಶ ಕುಸಿತ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರು ಪ್ರತಿನಿಧಿಸುವ ತುಮಕೂರು ಜಿಲ್ಲೆಯ ಫಲಿತಾಂಶ ಕುಸಿತವಾಗಿದೆ. 2020ರಲ್ಲಿ ಶೇ.62.26ರಷ್ಟುಫಲಿತಾಂಶದೊಂದಿಗೆ 23ನೇ ಸ್ಥಾನದಲ್ಲಿದ್ದ ಜಿಲ್ಲೆಯ ಫಲಿತಾಂಶ ಈ ಬಾರಿ ಶೇ.58.90ರಷ್ಟುಮಕ್ಕಳ ಉತ್ತೀರ್ಣದೊಂದಿಗೆ 28ನೇ ಸ್ಥಾನಕ್ಕೆ ಕುಸಿದಿದೆ. 2019ರಲ್ಲಿ ಜಿಲ್ಲೆಯ ಸ್ಥಾನ 17 ರಲ್ಲಿತ್ತು ಎಂಬುದು ಗಮನಾರ್ಹ. ಜಿಲ್ಲಾವಾರು ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆ ಈಗ ಪ್ರಥಮ ಸ್ಥಾನಕ್ಕೇರಿದೆ. ಕೊನೆಯ ಸ್ಥಾನದಲ್ಲಿದ್ದ ವಿಜಯಪುರ ಮೂರನೇ ಸ್ಥಾನಕ್ಕೆ ಜಿಗಿದಿದೆ. ಚಿತ್ರದುರ್ಗ ಜಿಲ್ಲೆ ಕೊನೆಯ ಸ್ಥಾನಕ್ಕೆ ಇಳಿದಿದೆ.

ನಾಳೆ ಕಾಲೇಜಲ್ಲಿ ಫಲಿತಾಂಶ

ಶನಿವಾರ ಬೆಳಗ್ಗೆ 11.30ರಿಂದಲೇ ಫಲಿತಾಂಶ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿದೆ. ಜೊತೆಗೆ ವಿದ್ಯಾರ್ಥಿಗಳು ಇಲಾಖೆಯಲ್ಲಿ ನೋಂದಾಯಿಸಿರುವ ಮೊಬೈಲ್‌ ಸಂಖ್ಯೆಗೂ ಅವರ ಫಲಿತಾಂಶ ಸಂದೇಶದ ಮೂಲಕ ಕಳುಹಿಸಲಾಗಿದೆ. ಭಾನುವಾರ ರಜಾ ದಿನವಾದ್ದರಿಂದ ಸೋಮವಾರ ಬೆಳಗ್ಗೆ ಎಲ್ಲ ಪಿಯು ಕಾಲೇಜುಗಳ ನೋಟಿಸ್‌ ಬೋರ್ಡ್‌ನಲ್ಲೂ ಫಲಿತಾಂಶ ಪ್ರಕಟಿಸಲು ಆಯಾ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.