ದ್ವಿತೀಯ ಪಿಯುಸಿ ಕಂಪ್ಯೂಟರ್‌ ಸೈನ್ಸ್ ಪರೀಕ್ಷೆ ವೇಳೆ, ಆರು ವಿದ್ಯಾರ್ಥಿನಿಯರಿಗೆ ಪುನರಾವರ್ತಿತ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆ ನೀಡಿ ಅನ್ಯಾಯ ಮಾಡಲಾಗಿದೆ. ಮೂರು ಗಂಟೆಗಳ ಕಾಲ ತಪ್ಪಾದ ಪರೀಕ್ಷೆ ಬರೆದ ನಂತರ, ಹೊಸ ಪ್ರಶ್ನೆಪತ್ರಿಕೆಗೆ ಕೇವಲ ಅರ್ಧ ಗಂಟೆ ಸಮಯ ನೀಡಲಾಗಿತ್ತು.

ಹಾಸನ: ಸೋಮವಾರ ನಡೆದ ದ್ವಿತೀಯ ಪಿಯುಸಿ ಕಂಪ್ಯೂಟರ್‌ ಸೈನ್ಸ್ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ ನಡೆದ ತಪ್ಪಿನಿಂದ ಆರು ವಿದ್ಯಾರ್ಥಿನಿಯರಿಗೆ ಅನ್ಯಾಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಬೇಲೂರಿನ ಬಿಕ್ಕೋಡು ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೂಂ ನಂಬರ್‌ 6ರಲ್ಲಿ 6 ವಿದ್ಯಾರ್ಥಿನಿಯರಿಗೆ ಪ್ರಶ್ನೆಪತ್ರಿಕೆ ವಿತರಿಸುವ ಸಂಧ್ಯಾ ರಿಪೀಟರ್ಸ್‌ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆಪತ್ರಿಕೆಯನ್ನು ನೀಡಿದ್ದಾರೆ. ಒಂದೇ ಕೊಠಡಿಯಲ್ಲಿ ರಿಪೀಟರ್ಸ್‌ ಮತ್ತು ಮೊದಲ ಬಾರಿಗೆ ಪರೀಕ್ಷೆ ಬರೆಯುವ ವಿದ್ಯಾರ್ಥಿ/ವಿದ್ಯಾರ್ಥಿನಿಯರಿದ್ದರು.

ತಪ್ಪಾದ ಪ್ರಶ್ನೆಪತ್ರಿಕೆ

ಹಳೆಯ ಮತ್ತು ಹೊಸ ಪಠ್ಯಕ್ರಮಗಳಲ್ಲಿ ಕೆಲವು ಅಧ್ಯಾಯಗಳು ಒಂದೇ ರೀತಿಯಾಗಿದ್ದರಿಂದ ವಿದ್ಯಾರ್ಥಿನಿಯರು ಇದು ಕಷ್ಟವಾದ ಪ್ರಶ್ನೆಪತ್ರಿಕೆ ಇರಬಹುದು ಎಂದುಕೊಂಡು ಮೂರು ಗಂಟೆಗಳ ಕಾಲ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ಮುಗಿದು ಹೊರ ಬಂದ ಬಳಿಕ ಇತರ ವಿದ್ಯಾರ್ಥಿಗಳ ಪ್ರಶ್ನೆಪತ್ರಿಕೆಯನ್ನು ಹೋಲಿಸಿ ನೋಡಿದಾಗ ಅವರು ಬರೆದಿದ್ದು ತಪ್ಪಾದ ಪ್ರಶ್ನೆಪತ್ರಿಕೆ ಎಂಬುದು ತಿಳಿದು ಬಂದಿದೆ.

ತಕ್ಷಣ ಪ್ರಾಂಶುಪಾಲರಿಗೆ ಮತ್ತು ಮೇಲ್ವಿಚಾರಕರಿಗೆ ವಿಷಯ ತಿಳಿಸಿದ್ದಾರೆ. ಪರೀಕ್ಷೆ ಸಮಯ ಮುಗಿದ ನಂತರ ಹೊಸ ಪ್ರಶ್ನೆಪತ್ರಿಕೆ ನೀಡಿ ಕೇವಲ ಅರ್ಧ ಗಂಟೆಯಲ್ಲಿ ಬರೆಯುವಂತೆ ಸೂಚಿಸಿ ವಿದ್ಯಾರ್ಥಿನಿಯರಿಗೆ ಆತಂಕ ಉಂಟು ಮಾಡಿದ್ದಾರೆ.

ಅದಲು-ಬದಲು ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೆಟ್ಟು

ಈ ಸಂದರ್ಭದಲ್ಲಿ ಕಣ್ಣೀರು ಹಾಕಿ ಮಾತನಾಡಿದ ವಿದ್ಯಾರ್ಥಿನಿಯರು, ನಾವು ಬಡ ಕುಟುಂಬದ ಮಕ್ಕಳಾಗಿದ್ದರೂ ನಮ್ಮ ಪೋಷಕರು ಕಷ್ಟಪಟ್ಟು ದುಡಿದು ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಆದರೆ ಪ್ರಶ್ನೆಪತ್ರಿಕೆ ವಿತರಿಸುವಾಗ ಪುನರಾವರ್ತಿತ ವಿದ್ಯಾರ್ಥಿಗಳಿಗೆ ನೀಡುವ ಪ್ರಶ್ನೆಪತ್ರಿಕೆಯನ್ನು ನೀಡಿದ್ದಾರೆ. ಪ್ರಶ್ನೆಪತ್ರಿಕೆಯನ್ನು ಅದಲು-ಬದಲು ಮಾಡಿ ನಮ್ಮ ಭವಿಷ್ಯಕ್ಕೆ ಪೆಟ್ಟು ನೀಡಿದ್ದಾರೆ. 

ಇದನ್ನೂ ಓದಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 389ನೇ ‌Rank ಪಡೆದ ಸಕಲೇಶಪುರ ತಾಲೂಕಿನ ರೈತನ ಮಗ ಮನೋಜ್‌

ನಾವು ಕೇಳಲು ಹೋದ ಸಂದರ್ಭದಲ್ಲಿ ಇಲ್ಲಿಯ ಪ್ರಾಂಶುಪಾಲರು ಮುಂದೆ 20 ದಿನಗಳ ಬಳಿಕ ಮತ್ತೆ ಪರೀಕ್ಷೆ ಬರೆಯಲು ಅವಕಾಶವಿದ್ದು, ಆವಾಗ ನೀವು ಮತ್ತೆ ಬರೆಯಬಹುದು ಎಂದು ಉಡಾಫೆ ಉತ್ತರ ನೀಡಿದ್ದಾರೆ. ನಾವು ಪತ್ರಕರ್ತರ ಬಳಿ ಹೋಗುತ್ತೇವೆ ಎಂದಾಗ ಅರ್ಧ ಗಂಟೆ ಕಾಲಾವಲಾಶ ನೀಡಿ ಹೆಚ್ಚುವರಿ ಸಮಯ ನೀಡಿದರು. ಆದರೆ, ಮೂರು ಗಂಟೆ ಅವಧಿಯ ಪರೀಕ್ಷೆ ಕೇವಲ ಅರ್ಧ ಗಂಟೆಯಲ್ಲಿ ಹೇಗೆ ಬರೆಯಲು ಸಾಧ್ಯ ಎಂದು ಕಣ್ಣೀರು ಹಾಕಿದರು.

ಇದನ್ನೂ ಓದಿ: ಹಾಸನ ಬಾಗಲಕೋಟೆಯಲ್ಲಿ ಲೋಕಾಯುಕ್ತ ದಾಳಿ: ಲೋಕಾ ಅಧಿಕಾರಿಗಳಿಗೆ ಮನೆ ಬಾಗಿಲು ತೆರೆಯದ ಇಂಜಿನಿಯರ್ ಸತ್ಯಾನಾರಾಯಣ