2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮೂರನೇ ಪರೀಕ್ಷೆ ನಡೆಸುವ ಬಗ್ಗೆ ಸರ್ಕಾರ ಪುನರ್‌ವಿಮರ್ಶೆ ನಡೆಸುತ್ತಿದೆ. ಕೃಪಾ ಸಂಘಟನೆ ಈ ಪರೀಕ್ಷೆಯನ್ನು ವಿರೋಧಿಸುತ್ತಿದ್ದು, ವಿದ್ಯಾರ್ಥಿಗಳ ಆಸಕ್ತಿ ಕುಗ್ಗುತ್ತಿದೆ ಎಂದು ಆರೋಪಿಸಿದೆ.

ಬೆಂಗಳೂರು: 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಯುವ 'ಮೂರನೇ ಪರೀಕ್ಷೆ' ಬಗ್ಗೆ ಸರ್ಕಾರ ತೀವ್ರ ಚಿಂತನೆ ನಡೆಸುತ್ತಿದೆ. ಈ ಮೂರನೇ ಪರೀಕ್ಷೆಯ ಅಗತ್ಯತೆ ಮತ್ತು ಅನಗತ್ಯತೆಗಳ ಬಗ್ಗೆ ವಿಶ್ಲೇಷಣಾತ್ಮಕ ವರದಿ ನೀಡುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ (KSEAB) ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Add Asianetnews Kannada as a Preferred SourcegooglePreferred

ಕಳೆದ ಎರಡು ವರ್ಷಗಳಿಂದ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ವ್ಯವಸ್ಥೆ ಜಾರಿಯಲ್ಲಿದ್ದು, ಇದೀಗ ಈ ವ್ಯವಸ್ಥೆಯಲ್ಲಿ ಪರಿಷ್ಕರಣೆ ಮಾಡಲು ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಶಿಕ್ಷಣ ಇಲಾಖೆ ಉನ್ನತ ಅಧಿಕಾರಿಗಳು ಮಂಡಳಿಗೆ ಮೌಖಿಕ ಸೂಚನೆ ನೀಡಿರುವುದು ತಿಳಿದುಬಂದಿದೆ. ಮೂರನೇ ಪರೀಕ್ಷೆಯ ಅಗತ್ಯತೆ ಬಗ್ಗೆ ಸಭೆಗಳನ್ನು ನಡೆಸುತ್ತಿರುವ ಮಂಡಳಿ, ಪರೀಕ್ಷೆಯ ಲಾಭ-ನಷ್ಟಗಳ ಪಟ್ಟಿ ಸಿದ್ಧಪಡಿಸುತ್ತಿದೆ. ಮಂಡಳಿಯ ಮೂಲಗಳ ಪ್ರಕಾರ, ಮೂರನೇ ಪರೀಕ್ಷೆ ಅಗತ್ಯವಿಲ್ಲ ಎಂಬ ಅಭಿಪ್ರಾಯ ಹೆಚ್ಚು ಹರಡಿದೆ.

ಕೃಪಾ ಸಂಘಟನೆಯ ವಿರೋಧ

ಈ ಪರೀಕ್ಷೆಯ ವಿರುದ್ಧವಾಗಿ ಕೃಪಾ ಸಂಘಟನೆ ಆರಂಭದಿಂದಲೇ ಧ್ವನಿ ಎತ್ತಿದೆ. ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ನೀಡಿದ ಪ್ರತಿಕ್ರಿಯೆಯಲ್ಲಿ, "ಮೂರನೇ ಪರೀಕ್ಷೆಯಿಂದ ವಿದ್ಯಾರ್ಥಿಗಳ ಆಸಕ್ತಿಯಲ್ಲಿ ಕುಸಿತ ಉಂಟಾಗುತ್ತಿದೆ. ಪರಿಣಾಮವಾಗಿ ಫಲಿತಾಂಶದ ಗುಣಮಟ್ಟವೂ ಇಳಿಕೆಯಾಗುತ್ತಿದೆ. ಈ ವ್ಯವಸ್ಥೆ ವಿದ್ಯಾರ್ಥಿಗಳ ಬದಲಿಗೆ ಕೆಲ ಅಧಿಕಾರಿಗಳ ಲಾಭಕ್ಕಾಗಿ ರೂಪಿಸಲಾಗಿತ್ತು ಎಂದು ಕಿಡಿಕಾರಿದ್ದಾರೆ. ಅವರು ಇನ್ನೂ ಮುಂದುವರೆದು, "ಇದೀಗ ಸರ್ಕಾರಕ್ಕೆ ಹೊಶಾರಾಗಿದೆ. ಮೂರನೇ ಪರೀಕ್ಷೆಯ ಅಗತ್ಯತೆ ವಿಚಾರದಲ್ಲಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಮಂಡಳಿಗೆ ಸೂಚಿಸಿದೆ. ನಮ್ಮ ಅಭಿಪ್ರಾಯವಿದೆ ವರ್ಷಕ್ಕೆ ಎರಡು ಪರೀಕ್ಷೆಗಳೇ ಸಾಕು ಎಂದು ಹೇಳಿದ್ದಾರೆ.

ಮುಖ್ಯಾಂಶಗಳು:

  • 3ನೇ ಪರೀಕ್ಷೆ ನಿರ್ವಹಿಸುವ ಬಗ್ಗೆ ಸರ್ಕಾರ ಪುನರ್‌ವಿಚಾರ.
  • KSEAB ಗೆ ಅಗತ್ಯ/ಅನಗತ್ಯ ವರದಿ ನೀಡುವಂತೆ ಸೂಚನೆ.
  • ವಿದ್ಯಾರ್ಥಿಗಳ ಮೆದುಳಿಗೆ ಒತ್ತಡ ಹೆಚ್ಚಿಸುವ, ಫಲಿತಾಂಶ ಕುಗ್ಗಿಸುವ ಸಾಧ್ಯತೆ.
  • ಕೃಪಾ ಸಂಘಟನೆ ಆರಂಭದಿಂದಲೇ ವಿರೋಧ.
  • ಅಧಿಕಾರಿಗಳ ಲಾಭಕ್ಕಾಗಿಯೇ ಈ ವ್ಯವಸ್ಥೆ ಎಂಬ ಆರೋಪ.