ಶಿಕ್ಷಣ ಸಮಾನತೆ ತಂದಿದೆ. ಶಿಕ್ಷಣ ಕ್ರಾಂತಿಯಿಂದ ದೇಶ ಪರಿವರ್ತನೆಯಾಗಿದೆ. ಇಲ್ಲದಿದ್ದರೆ 50 ವರ್ಷ ಹಿಂದುಳಿಯುತ್ತಿತ್ತು. ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ, ಇಲ್ಲಿಗೆ ಕಲಿಯಲು ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಾರೆ. ಯಾವ ವ್ಯಕ್ತಿ ಉದ್ಯೋಗ ಮಾಡಿದರೂ ಕರ್ತವ್ಯಪ್ರಜ್ಞೆ ಬಹಳ ಮುಖ್ಯ. ರಾಷ್ಟ್ರಪ್ರಜ್ಞೆ ಮೂಡಿಸಿ ಕ್ರಾಂತಿ ತಂದ ಸಂಸ್ಥೆ ಎನ್‌ಇಎಸ್‌ ಎಂದ ಡಾ.ವೀರೇಂದ್ರ ಹೆಗ್ಗಡೆ 

ಶಿವಮೊಗ್ಗ(ಜೂ.22): ಮಕ್ಕಳು ಮಾನವೀಯ ಮೌಲ್ಯ ಹಾಗೂ ರಾಷ್ಟ್ರಪ್ರಜ್ಞೆ ಅರಿಯಬೇಕಾದರೆ ಮೌಲ್ಯವರ್ಧಿತ ಶಿಕ್ಷಣ ನೀಡುವತ್ತ ಸರ್ಕಾರ ಒತ್ತು ನೀಡಬೇಕು ಎಂದು ಧರ್ಮಸ್ಥಳ ಕ್ಷೇತ್ರ ಧರ್ಮದರ್ಶಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗ​ರದ ಎನ್‌ಇಎಸ್‌ ಮೈದಾನದಲ್ಲಿ ಬುಧವಾರ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಆಯೋಜಿಸಿದ್ದ ಅಮೃತ ಮಹೋತ್ಸವ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣಕ್ಕಿಂತ ದೊಡ್ಡ ಶಕ್ತಿ ಇನ್ನೊಂದಿಲ್ಲ. ಪರಿವರ್ತನೆಗೆ ಶಿಕ್ಷಣವೇ ಕಾರಣ ಎಂದರು.

ಶಾಲಾ ಮಕ್ಕಳಿಗೆ ಮೊಟ್ಟೆ 1 ದಿನ ಕಡಿತ: ಸರ್ಕಾರದ ಆದೇಶ

ಶಿಕ್ಷಣ ಸಮಾನತೆ ತಂದಿದೆ. ಶಿಕ್ಷಣ ಕ್ರಾಂತಿಯಿಂದ ದೇಶ ಪರಿವರ್ತನೆಯಾಗಿದೆ. ಇಲ್ಲದಿದ್ದರೆ 50 ವರ್ಷ ಹಿಂದುಳಿಯುತ್ತಿತ್ತು. ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹಾಗಾಗಿ, ಇಲ್ಲಿಗೆ ಕಲಿಯಲು ಹೆಚ್ಚಿನ ವಿದ್ಯಾರ್ಥಿಗಳು ಬರುತ್ತಾರೆ. ಯಾವ ವ್ಯಕ್ತಿ ಉದ್ಯೋಗ ಮಾಡಿದರೂ ಕರ್ತವ್ಯಪ್ರಜ್ಞೆ ಬಹಳ ಮುಖ್ಯ. ರಾಷ್ಟ್ರಪ್ರಜ್ಞೆ ಮೂಡಿಸಿ ಕ್ರಾಂತಿ ತಂದ ಸಂಸ್ಥೆ ಎನ್‌ಇಎಸ್‌ ಎಂದರು.

ರಾಷ್ಟ್ರದ ಪರಿಕಲ್ಪನೆ ಇರದ ಕಾಲಘಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಸ್ತಿತ್ವಕ್ಕೆ ಬಂದಿರುವುದು ಕುತೂಹಲ ಮೂಡಿಸುತ್ತದೆ. ಸಂಸ್ಥೆಯು 1946ರಲ್ಲಿ ಸ್ಥಾಪನೆಗೊಂಡಿದೆ. ಆದರೆ, ರಾಷ್ಟ್ರ ಕಲ್ಪನೆಯ ಸಂಪೂರ್ಣ ಚೌಕಟ್ಟು ರೂಪುಗೊಂಡಿದ್ದು, ಮಹಾತ್ಮ ಗಾಂಧೀಜಿ ಅವರ ಹೋರಾಟದ ಪ್ರತಿಫಲದ ಸ್ವಾತಂತ್ರ್ಯಾ ನಂತರದಲ್ಲಿ ಎಂದು ಹೇಳಿದರು.

ಸಮಾರಂಭಕ್ಕೂ ಮುನ್ನ ಡಾ. ವೀರೇಂದ್ರ ಹೆಗ್ಗಡೆ ಅವರು ಎನ್‌ಇಎಸ್‌ ಸಂಸ್ಥಾಪಕ ನಾಗಪ್ಪ ಶೆಟ್ಟರ್‌ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಅವರನ್ನು ಸಾಂಸ್ಕೃತಿಕ ಕಲಾತಂಡದೊಂದಿಗೆ ಮೆರವಣಿಗೆಯಲ್ಲಿ ಎನ್‌ಇಎಸ್‌ ಮೈದಾನಕ್ಕೆ ಕರೆತರಲಾಯಿತು.

ಎನ್‌​ಇ​ಎಸ್‌ ಅಧ್ಯಕ್ಷ ಜಿ.ಎಸ್‌.ನಾರಾಯಣ ರಾವ್‌, ಉಪಾಧ್ಯಕ್ಷ ಸಿ.ಆರ್‌. ನಾಗರಾಜ್‌, ಕಾರ್ಯದರ್ಶಿ ಎಸ್‌.ಎನ್‌. ನಾಗರಾಜ್‌, ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ, ಖಜಾಂಚಿ ಡಿ.ಜಿ.ರಮೇಶ್‌, ಶಾಸಕ ಡಿ.ಎಸ್‌. ಅರುಣ್‌ ಹಾಗೂ ಎನ್‌ಇಎಸ್‌ನ ನಿರ್ದೇಶಕರು ಮತ್ತು ಸಿಬ್ಬಂದಿ, ನಿವೃತ್ತ ಸಿಬ್ಬಂದಿ ಸೇರಿದಂತೆ ಎನ್‌ಇಎಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.