ಶಾಲಾ ಮಕ್ಕಳಿಗೆ ಮೊಟ್ಟೆ 1 ದಿನ ಕಡಿತ: ಸರ್ಕಾರದ ಆದೇಶ
ಮುಂದಿನ ತಿಂಗಳು ಹೊಸ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಜು.15ರವರೆಗೆ ಮಾತ್ರ ಅನ್ವಯಿಸುವಂತೆ ಸರ್ಕಾರದ ನಿರ್ದೇಶನ ಮೇರೆಗೆ ಈ ಆದೇಶ ಮಾಡಲಾಗಿದೆ. ಬಜೆಟ್ನಲ್ಲಿ ಸರ್ಕಾರ ಮೊಟ್ಟೆ ನೀಡುವ ಯೋಜನೆ ಮುಂದುವರೆಸುವ ಘೋಷಣೆ ಮಾಡಿದರೆ ಹೊಸ ಆದೇಶ ನೀಡಲಾಗುತ್ತದೆ.
ಬೆಂಗಳೂರು(ಜೂ.21): ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಕಳೆದ ಸಾಲಿನಲ್ಲಿ ಬಿಸಿಯೂಟದ ಜೊತೆ ವಾರದಲ್ಲಿ ಎರಡು ದಿನ ನೀಡುತ್ತಿದ್ದ ಬೇಯಿಸಿದ ಮೊಟ್ಟೆ ಅಥವಾ ಬಾಳೆಹಣ್ಣು/ಶೇಂಗಾ ಚಿಕ್ಕಿಯನ್ನು ಸದ್ಯ ಒಂದು ದಿನಕ್ಕೆ ಕಡಿತಗೊಳಿಸಲಾಗಿದೆ. ಮುಂದಿನ ತಿಂಗಳು ಜುಲೈ 15ರವರೆಗೆ ಮಾತ್ರ ಅನ್ವಯಿಸಿ ಈ ಆದೇಶ ಮಾಡಲಾಗಿದೆ.
ಬಿಸಿಯೂಟ ಯೋಜನೆ ಅಧಿಕಾರಿಗಳು ಹೇಳುವ ಪ್ರಕಾರ, ಮುಂದಿನ ತಿಂಗಳು ಹೊಸ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಜು.15ರವರೆಗೆ ಮಾತ್ರ ಅನ್ವಯಿಸುವಂತೆ ಸರ್ಕಾರದ ನಿರ್ದೇಶನ ಮೇರೆಗೆ ಈ ಆದೇಶ ಮಾಡಲಾಗಿದೆ. ಬಜೆಟ್ನಲ್ಲಿ ಸರ್ಕಾರ ಮೊಟ್ಟೆ ನೀಡುವ ಯೋಜನೆ ಮುಂದುವರೆಸುವ ಘೋಷಣೆ ಮಾಡಿದರೆ ಹೊಸ ಆದೇಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆಗೆ ಬಿಜೆಪಿ ತೀವ್ರ ವಿರೋಧ
ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಸಂಬಂಧ ಬಿಸಿಯೂಟ ಯೋಜನೆ ನಿರ್ದೇಶಕರು ಮಂಗಳವಾರ ಸುತ್ತೋಲೆ ಹೊರಡಿಸಿದ್ದು, ರಾಜ್ಯದ ಎಲ್ಲ ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 2023-24ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಜೂ.20ರಿಂದ ಜುಲೈ15ರವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ ಪೂರಕ ಪೌಷ್ಠಿಕ ಆಹಾರವಾಗಿ ವಾರದಲ್ಲಿ ಒಂದು ದಿನ ಬೇಯಿಸಿದ ಮೊಟ್ಟೆ ನೀಡಬೇಕು. ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೇಹಣ್ಣು ಇಲ್ಲವೇ ಶೇಂಗಾ ಚಿಕ್ಕಿ ವಿತರಿಸಲು ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆಯ ಎಲ್ಲ ಡಿಡಿಪಿಐಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.