ದಾರಿ ಮಧ್ಯೆಯೇ ಬುರ್ಖಾ ತೆಗೆಯುವಂತೆ ಒತ್ತಾಯ : ವಿಡಿಯೋ ವೈರಲ್
-ಹಿಂದೂ ಯುವಕನ ಜತೆ ಮುಸ್ಲಿಂ ಯುವತಿ ಬಂದಿದ್ದಾಳೆ ಎಂಬ ಶಂಕೆ
-ದಾರಿ ಮಧ್ಯೆಯೇ ಬುರ್ಖಾ ತೆಗೆಯುವಂತೆ ಯುವತಿಗೆ ಒತ್ತಾಯ
-ಭೋಪಾಲ್ನ ಇಸ್ಲಾಮ್ ನಗರದಲ್ಲಿ ಘಟನೆ
-ವಾಹನ ತಡೆಹಿಡಿದವರನ್ನು ವಶಕ್ಕೆ ಪಡೆದ ಪೋಲಿಸರು!
ಭೋಪಾಲ್ (ಅ. 17): ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಯುವತಿಗೆ ಬುರ್ಖಾ ತೆಗೆಯುವಂತೆ ಒತ್ತಾಯಿಸಿರುವ ಘಟನೆ ಭೋಪಾಲ್ನಲ್ಲಿ (Bhopal) ಶನಿವಾರ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ (Social Media) ತೀವ್ರ ವಿರೊಧ ವ್ಯಕ್ತವಾಗಿದೆ. ಯುವತಿಯು ಯುವಕನೊಬ್ಬನ ಜತೆ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಭೋಪಾಲ್ನ ಇಸ್ಲಾಮ್ ನಗರದಲ್ಲಿ (Islam Nagar) ಕೆಲ ಕಿಡಿಗೇಡಿಗಳು ತಡೆದಿದ್ದು, ಯುವತಿಗೆ ಬುರ್ಖಾ ತೆಗೆಯುವಂತೆ ಒತ್ತಾಯಿಸಿದ್ದಾರೆ. ಯುವತಿ ಕಣ್ಣೀರು ಸುರಿಸುತ್ತಾ ಬುರ್ಖಾ ತೆಗೆಯಲು ನಿರಾಕರಿಸಿದರೂ ಒತ್ತಾಯದಿಂದ ಬುರ್ಖಾ ತೆಗೆಯುವಂತೆ ಮಾಡಿದ್ದಾರೆ. ವಿಡಿಯೋದಲ್ಲಿ ʼನಮ್ಮ ಸಮುದಾಯಕ್ಕೆ ಇವಳು ಕಳಂಕʼಎಂದು ಯುವಕನೋರ್ವ ಹೇಳುತ್ತಿದ್ದು ಯುವತಿ-ಯುವಕನನ್ನು ತಡೆದು ನೈತಿಕ ಪೋಲಿಸ್ಗಿರಿ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಯುವತಿಯನ್ನು ತಡೆಹಿಡಿದವರು, ಯುವತಿಯು ಹಿಂದೂ ಯುವಕನ ಜತೆ ಇದ್ದಾಳೆ ಎಂದು ಶಂಕಿಸಿದ್ದಾರೆ. ಈ ಬೆನ್ನಲ್ಲೇ ವಾಹನವನ್ನು ತಡೆಹಿಡಿದು ಬುರ್ಖಾ ತೆಗೆಯಲು ಒತ್ತಾಯಿಸಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ. ವಾಹನವನ್ನು ತಡೆ ಹಿಡಿಯಲು ಪ್ರಯತ್ನಸಿದ ಇಬ್ಬರನ್ನು ಪೋಲಿಸರು ಬಂಧಿಸಿ ಎಚ್ಚರಿಕೆ ನೀಡಿದ್ದು ಈ ಮುಂದೆ ಈ ರೀತಿ ಮಾಡದಂತೆ ತಿಳಿ ಹೇಳಿದ್ದಾರೆ. ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಅನ್ಯ ಕೋಮಿನ ಯುವತಿ ಜೊತೆಗಿದ್ದ ವ್ಯಕ್ತಿಯ ಹಲ್ಲೆ, ಪುಂಡರು ಅರೆಸ್ಟ್!
ʼಯುವಕ ಮತ್ತು ಯುವತಿ ಮಧ್ಯಾಹ್ನದ ವೇಳೆಗೆ ಇಸ್ಲಾಮ್ ನಗರಕ್ಕೆ ಬಂದಿದ್ದಾರೆ. ಕೆಲ ಜನರು ಅವರನ್ನು ತಡೆ ಹಿಡಿದು ಯುವತಿಗೆ ಬುರ್ಖಾ ತೆಗೆದು ಮುಖ ತೋರಿಸುವಂತೆ ಒತ್ತಾಯಿಸಿದ್ದಾರೆ. ಮುಸ್ಲಿಮ್ ಯುವತಿ ಹಿಂದೂ ಯುವಕನ ಜತೆ ಬಂದಿದ್ದಾಳೆ ಎಂದು ಶಂಕಿಸಿ ಜನರು ಈ ರೀತಿ ನಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ, ಆದರೆ ಘಟನೆಗೆ ಸಂಬಂಧಪಟ್ಟಂತೆ ವಾಹನ ತಡೆ ಹಿಡಿದ ಯುವಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಈ ರೀತಿ ವರ್ತನೆಯನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೋಲಿಸ್ ಅಧಿಕಾರಿ ಆರ್ ಎಸ್ ವರ್ಮಾ (RS Verma) ತಿಳಿಸಿದ್ದಾರೆ.
ಬೆಂಗಳೂರು ಆಯ್ತು ಹೈದರಾಬಾದ್.. ಮುಸ್ಲಿಂ ಯುವತಿಗೆ ಡ್ರಾಪ್ ಕೊಡ್ತಿದ್ದವನ ಮೇಲೆ ದಾಳಿ
ಇತ್ತೀಚೆಗೆ ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕದ ವಿವಧ ಜಿಲ್ಲೆಗಳಲ್ಲಿ ನೈತಿಕ ಪೋಲಿಸ್ಗಿರಿಯ (Moral Policing) ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹಿಂದೂ ವ್ಯಕ್ತಿ ಜೊತೆ ಅನ್ಯಕೋಮಿನ ಸಹೋದ್ಯೋಗಿಯೊಬ್ಬಳಿದ್ದ ಕಾರಣವನ್ನೇ ಮುಂದಿಟ್ಟುಕೊಂಡ ಗುಂಪೊಂದು ಯುವಕನ ಮೇಲೆ ನೈತಿಕ ಪೊಲೀಸ್ಗಿರಿ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಮಂಗಳೂರಿನ (Mangaluru) ಮೂಡುಬಿದಿರೆಯಲ್ಲಿ ಕಾರಿನಲ್ಲಿ ಹೋಗುತ್ತಿದ್ದ ಮುಸ್ಲಿಂ ಯುವತಿಯನ್ನು ಕೆಲವರು ತಡೆದು ಪ್ರಶ್ನಿಸಿದ್ದರು. ಮಂಡ್ಯ (Mandya) ಜಿಲ್ಲೆಯ ಸುಂಡಹಳ್ಳಿ ಬಳಿ ಮುಸ್ಲಿಂ ಹುಡುಗ, ಹಿಂದೂ ಹುಡುಗಿ ತೆರಳುತ್ತಿದ್ದ ಬೈಕ್ಗೆ ಅಡ್ಡಗಟ್ಟಿ ಮುಸ್ಲಿಂ ಯುವಕನಿಗೆ ಹಿಂದೂ ಕಾರ್ಯಕರ್ತರು ಹೊಡೆಯಲು ಯತ್ನಿಸಿದ್ದರು. ಈ ಬಗ್ಗೆ ರಾಜ್ಯವ್ಯಾಪಿ ಚರ್ಚೆ ಕೂಡ ನಡೆದಿತ್ತು. ನೈತಿಕ ಪೋಲಿಸ್ಗಿರಿಯ ಬಗ್ಗೆ ಕೆಲ ದಿನಗಳ ಹಿಂದೆ ಸರಣಿ ಟ್ವೀಟ್ (Tweet) ಮಾಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ಮೂಡಬಿದ್ರೆಯಲ್ಲಿ ನೈತಿಕ ಪೊಲೀಸ್ಗಿರಿ, ಹಿಂದೂ ಪರ ಕಾರ್ಯಕರ್ತರ ಬಂಧನ