ತುಮಕೂರು ಜಿಲ್ಲೆಯ ಶಿರಾ ಬಳಿ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಮಹತ್ವದ ಮಾಹಿತಿಯೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಎಸ್ಪಿ ಸುದ್ದಿಗೋಷ್ಠಿ ನಡೆಸಿ  ಮಹತ್ವದ ಮಾಹಿತಿ ಬಹಿರಂಗಗೊಳಿಸಿದ್ದಾರೆ. 

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿ ಹಳ್ಳಿ ಬಳಿ ಜೂನ್ ೨೭ರಂದು ಚಲಿಸುತ್ತಿದ್ದ ಕ್ಯಾಬ್‌ನಲ್ಲಿ ಪ್ರೇಯಸಿಗೆ ಚಾಕುವಿನಿಂದ ಇರಿದು ಕಾರಿನಲ್ಲೇ ಬಾಂಬ್‌ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಮಹತ್ವದ ತಿರುವು ಪಡೆದಿದೆ. ಈ ಕುರಿತು ಕಲ್ಲಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಾಗಲ್ ಪ್ರೇಮಿಗೆ ಬಾಂಬ್ ಎಲ್ಲಿಂದ ಸಿಕ್ಕಿತು ಎಂಬುದರ ಎಂಬುದರ ಕುರಿತು ಇದೀಗ ಮಹತ್ವದ ಮಾಹಿತಿ ಹೊರಬಿದ್ದಿದೆ. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತುಮಕೂರು ಎಸ್‌ಪಿಯಿಂದ ಸುದ್ದಿಗೋಷ್ಠಿ!

ಕಾರಿನಲ್ಲಿ ಬಾಂಬ್ ಸ್ಪೋಟಿಸಿಕೊಂಡು ಪಾಗಲ್ ಪ್ರೇಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಮಾಹಿತಿಯೊಂದನ್ನು ತುಮಕೂರು ಎಸ್ಪಿ ಅಶೋಕ್ ಕೆ.ವಿ ಸುದ್ದಿಗೋಷ್ಠಿಯಲ್ಲಿ ಬಿಚ್ಚಿಟ್ಟಿದ್ದಾರೆ. ಸ್ಪೋಟಗೊಂಡಿರೋದು ಕಚ್ಚಾ ಬಾಂಬ್ ಎನ್ನುವುದು ಖಚಿತವಾಗಿದೆ. ಅಲ್ಲದೇ ಮೃತ ನಾಗೇಂದ್ರ ಹೊನ್ನಾವರ ತಾಲೂಕಿನ ಚಂದಾವರ ಗ್ರಾಮದಿಂದ ಕಚ್ಚಾ ಬಾಂಬ್ ತಂದಿರುವುದು ಪಕ್ಕಾ ಆಗಿದೆ. ಇದರೊಂದಿಗೆ ಬಾಂಬ್‌ ಎಲ್ಲಿಂದ ದೊರೆತಿದೆ ಎನ್ನುವುದು ಇದೀಗ ಬೆಳಕಿಗೆ ಬಂದಿದೆ.

ಬಾಂಬ್‌ ತಂದಿದ್ದು ಎಲ್ಲಿಂದ?

ಬಾಂಬ್‌ ತಂದ ಕಥೆ ಮಾತ್ರ ರೋಚಕವಾಗಿದೆ. ಮೃತ ನಾಗೇಂದ್ರ ಚಂದಾವರ ಗ್ರಾಮದ ಜಾರ್ಜ್ ನಿಕ್ಲೋವ್ ಫರ್ನಾಂಡೀಸ್ ನಿಂದ ಮೂರು ಕಚ್ಚಾ ಬಾಂಬ್ ಖರೀದಿ ಮಾಡಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೆ ಅದನ್ನು ಖರೀದಿಸಲು ಕಾರಣ ಬೇರೆಯದ್ದೇ ಆಗಿತ್ತು ಎನ್ನುವುದು ಈಗ ಬೆಳಕಿಗೆ ಬಂದಿದೆ. ಜಾರ್ಜ್ ನಿಕ್ಲೋವ್ ಫರ್ನಾಂಡೀಸ್ ಎಂಬಾತನು ಮೀನುಗಾರಿಕೆ ಉದ್ದೇಶಕ್ಕೆ ಕಚ್ಚಾ ಬಾಂಬ್ ತಯಾರು ಮಾಡಿ ಮಾರಾಟ ಮಾಡುತಿದ್ದ ಎನ್ನುವುದು ಬಯಲಾಗಿದೆ. ಇದಲ್ಲದೇ ನಿಕ್ಲೋವ್‌ ನಾಗೇಂದ್ರನ ಜೊತೆಗೆ ಅವರ ಸಂಬಂಧಿ ಸಂದೀಪ್ ಗೌಡ, ನಾರಾಯಣ ಡೊಲ್ಲುಗೌಡ ಮತ್ತು ನಾಗರಾಜು ಡೊಲ್ಲುಗೌಡ ಗೂ ಬಾಂಬ್ ಕೊಟ್ಟಿದ್ದ ಎನ್ನುವುದು ಇದೀಗ ಕಂಡುಬಂದಿದೆ ಎನ್ನಲಾಗಿದೆ. ಈ ಮೂವರನ್ನು ಪೊಲೀಸರು ಈಗ ವಶಪಡಿಸಿಕೊಂಡಿದ್ದಾರೆ. 

3 ಕಚ್ಚಾ ಬಾಂಬ್ ಬೆಂಗಳೂರಿಗೆ ತಂದಿದ್ದ ಪಾಗಲ್‌ ಪ್ರೇಮಿ!

ಆ ಕಚ್ಚಾ ಬಾಂಬ್ ಸ್ಪೋಟಿಸಿಕೊಂಡು ನಾಗೇಂದ್ರ ಕಾರು ಸಮೇತ ಸಜೀವ ದಹನ ಆಗಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಜಾರ್ಜ್ ನಿಕ್ಲೋವ್ ಫರ್ನಾಂಡೀಸ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಾಗ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಫರ್ನಾಂಡೀಸ್‌ಗೆ ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಣವಾದ ಮೇಲೆ ಇನ್ನು ಕೆಲ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ ಎನಲಾಗಿದೆ. ಆದ್ದರಿಂದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ತನಿಖೆ ಮುಂದುವರೆಸಿದ ಪೊಲೀಸ್‌ರು!

ಇನ್ನು ಜಾರ್ಜ್ ನಿಕ್ಲೋವ್ ಫರ್ನಾಂಡೀಸ್ ಬಳಿ ಕಚ್ಚಾ ಬಾಂಬ್ ಖರೀದಿದ್ದ ನಾಗೇಂದ್ರ ಸಂಬಂಧಿಕರು ಮೀನುಗಾರಿಕೆ ಉದ್ದೇಶಕ್ಕೆ ಬಳಸಿದ್ದಾರೆ. ಸದ್ಯ ಈ ಘಟನೆ ಸಂಬಂಧ ಅಕೋಲಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಈ ನಿಟ್ಟಿನಲ್ಲಿ ಅಂಕೋಲಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕೇಸ್‌ಗೆ ಪೊಲೀಸ್‌ ವವಲಯ ಅಂತ್ಯ ಹಾಡಲಿದೆಯೇ ಎನ್ನುವುದನ್ನು ನೋಡಬೇಕಾಗಿದೆ.