ಸತತ ಒಂದು ತಿಂಗಳಿನಿಂದಲೂ ಹೆಚ್ಚು ಕಾಲ ಕ್ರೈಂ ಹಾಗೂ ಎಸ್ಕೇಪ್ ಕುರಿತ ವೆಬ್ ಸೀರಿಸ್ ನೋಡಿದ್ದಾನೆ. ಎಲ್ಲಾ ವಿದ್ಯೆ ಕರಗತ ಮಾಡಿಕೊಂಡ ಗಂಡ, ಪತ್ನಿಯನ್ನೇ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಈತನ ಅರೆಸ್ಟ್ ಕೂಡ ವೆಬ್ ಸಿರೀಸ್ ಪ್ರಕಾರವೇ ನಡೆದಿದೆ.
ದೆಹಲಿ (ಆ.07) ಪತಿ, ಪತ್ನಿ ಹಾಗೂ ಕೊಲೆ. ಈ ವಿಷಯ ಕುರಿತು ಹಲವು ವೆಬ್ ಸೀರಿಸ್ಗಳು ಲಭ್ಯವಿದೆ. ಹತ್ಯೆ ಬಳಿಕ ಎಸ್ಕೇಪ್ ಆಗಿರುವ ನೈಜ ಘಟನೆಗಳ ಕುರಿತ ಹಲವು ಸೀರಿಸ್ಗಳನ್ನು ಸತತವಾಗಿ ನೋಡಿದ್ದಾನೆ. ಬಳಿಕ ತನ್ನದೇ ರೀತಿಯಲ್ಲಿ ಒಂದು ಪ್ಲಾನ್ ಮಾಡಿದ್ದಾನೆ. ಈ ಪ್ಲಾನ್ಗೆ ತಕ್ಕಂತೆ ಮತ್ತೆ ಒಂದಷ್ಟು ವೆಬ್ ಸಿರೀಸ್ ನೋಡಿದ್ದಾನೆ. ಬಳಿಕ ಪ್ಲಾನ್ ರೀತಿಯಲ್ಲೇ ಪತ್ನಿಯನ್ನು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ಆದರೆ ಈತನ ಪ್ಲಾನ್ ಮೂರು ದಿನಗಳ ಕಾಲ ಎಸ್ಕೇಪ್ ಆಗಲು ನೆರವಾಗಿದೆ. ಆದರೆ ನಾಲ್ಕನೇ ದಿನ ಪೊಲೀಸರು ಅರೆಸ್ಟ್ ಮಾಡಿದ ಘಟನೆ ದೆಹಲಿಯಲ್ಲಿ ನಡೆದಿದೆ.
ಪತ್ನಿ ಆಸ್ತಿ ಮೇಲೆ ಕಣ್ಣು
62 ವರ್ಷದ ಕಮಲ್ ಸಿಂಗ್ ಇದೀಗ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾನೆ. ಸಾಫ್ಟ್ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಕಮಲ್ ಸಿಂಗ್ ಹಾಗೂ ಪತ್ನಿ ನಡುವೆ ಆಸ್ತಿ ವಿಚಾರ, ಹಣದ ವಿಚಾರವಾಗಿ ಬಾರಿ ಜಗಳ ನಡೆದಿದೆ. ಬ್ಯೂಸಿನೆಸ್ ಸೇರಿದಂತೆ ಹಲವು ಕಾರಣಗಳಿಂದ ಪತ್ನಿಯಿಂದ ಲಕ್ಷ ಲಕ್ಷ ರೂಪಾಯಿ ಪಡೆದು ಏನೂ ಮಾಡದೇ ಮುಗಿಸಿದ್ದ. ಹೀಗಾಗಿ ಪತ್ನಿಯ ಉಳಿತಾಯ, ಆಕೆಯ ಆಸ್ತಿ ವಿಚಾರದಲ್ಲಿ ತಲೆ ಹಾಕದಂತೆ ಖಡಕ್ ವಾರ್ನಿಂಗ್ ನೀಡಿದ್ದಳು. ಅಂದಿನಿಂದಲೇ ಆಕೆ ಹತ್ಯೆ ಮಾಡಿ ಆಸ್ತಿ ಲಪಾಟಿಸಲು ಪ್ಲಾನ್ ಮಾಡಿದ್ದಾನೆ.
ಇವರಿಗೆ ಇಬ್ಬರು ಮಕ್ಕಳ. ಮಗಳು ಕೆಲಸಕ್ಕೆ ಸೇರಿಕೊಂಡಿದ್ದರೆ, ಮಗ ಕಾಲೇಜು ಓದುತ್ತಿದ್ದ. ಕಮಲ್ ಸಿಂಗ್ ಸಾಫ್ಟ್ವೇರ್ ಕನ್ಸಲ್ಟೆಂಟ್ ಆಗಿ ಕೆಲಸ ಮಾಡುತ್ತಿರುವ ಕಾರಣ ಹಣಕ್ಕೆ ಕೊರತೆ ಇರಲಿಲ್ಲ. ಆದರೆ ಪತ್ನಿ ಆಸ್ತಿ ಮೇಲೆ ಈತನಿಗೆ ಕಣ್ಣು. ಹೀಗಾಗಿ ವೆಬ್ ಸೀರಿಸ್ ನೋಡಿ ಹತ್ಯೆಗೆ ಪ್ಲಾನ್ ಮಾಡಿದ್ದ. ಮಗ ಹಾಗೂ ಮಗಳು ಇಲ್ಲದ ವೇಳೆ ಅಂದರೆ ಜುಲೈ 30ರ ಮಧ್ಯಾಹ್ನ ಪತ್ನಿ ತಲೆಗೆ ರಾಡ್ ಮೂಲಕ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ.
ವೆಬ್ ಸೀರಿಸ್ ರೀತಿ ತನಿಖೆ ದಿಕ್ಕು ಬದಲಿಸಲು ಯತ್ನ
ಬಳಿಕ ಪತ್ನಿ ಕೋಣೆಯಲ್ಲಿಟ್ಟಿದ್ದ 5 ಲಕ್ಷ ರೂಪಾಯಿ ನಗದು, ಆಕೆಯ ಡೆಬಿಟ್ ಕಾರ್ಡ್ ಸೇರಿದಂತೆ ಒಟ್ಟು 12.75 ಲಕ್ಷ ರೂಪಾಯಿ ಜೊತೆ ಪರಾರಿಯಾಗಿದ್ದಾನೆ. ವೆಬ್ ಸೀರಿಸ್ನಲ್ಲಿ ನೋಡಿದಂತೆ ಕಮಲ್ ಸಿಂಗ್ ತನ್ನ ಮೊಬೈಲ್ ಫೋನ್ ಆಫ್ ಮಾಡಲಿಲ್ಲ. ಬೇರೆಡೆ ಎಸೆಯಲಿಲ್ಲ. ಸ್ಕೂಟರ್ ಮೂಲಕ ಕಮಲ್ ಸಿಂಗ್ ನೇರವಾಗಿ ಗೋರಖ್ಪುರ ತಲುಪಿದ್ದಾನೆ. ಬಳಿಕ ಮೊಬೈಲ್ ಸ್ವಿಚ್ ಆಫ್ ಸಿಮ್ನ್ನು ನೇಪಾಳ ಸಂಪರ್ಕಿಸುವ ರಸ್ತೆಯತ್ತ ಎಸೆದಿದ್ದಾನೆ. ಎಸ್ಕೇಪ್ ಆದ ಬೆನ್ನಲ್ಲೇ ಪೊಲೀಸರು ಮೊದಲು ಸಿಮ್ ಟವರ್, ಲೋಕೇಶನ್ ನೋಡುತ್ತಾರೆ. ಈ ವೇಳೆ ಸಿಮ್ ಗೋರಖಪುರದಿಂದ ನೇಪಾಳದತ್ತ ಹೊರಟಿದೆ ಎಂದು ಪೊಲೀಸರ ತನಿಖೆ ದಿಕ್ಕು ಬದಲಾಗಲಿದೆ ಎಂಬ ವೆಬ್ ಸಿರೀಸ್ ಐಡಿಯಾ ಪ್ರಯೋಗಿಸಿದ್ದಾನೆ.
ಸಿಮ್ ಎಸೆದು ಕಮಲ್ ಸಿಂಗ್ ಮಥುರಾದತ್ತ ಪ್ರಯಾಣಿಸಿದ್ದಾನೆ. ಇತ್ತ ಪೊಲೀಸರು ಸಿಸಿಟಿವಿ ಸೇರಿದಂತೆ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ಮಥುರಾದಲ್ಲಿ ಹುಡುಕಾಟ ನಡೆಸಿದ್ದಾರೆ. ಮೂರು ದಿನ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡಿದ್ದ. ನಾಲ್ಕನೇ ದಿನ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವಿಚಾರಣೆ ವೇಳೆ ತನ್ನ ಪ್ಲಾನ್ ಕುರಿತು ಬಾಯ್ಬಿಟ್ಟಿದ್ದಾನೆ.


