ಪೆಹಲ್ಗಾಂನಲ್ಲಿ ಧರ್ಮ ಕೇಳಿ ಪ್ರವಾಸಿಗರ ಮೇಲಿನ ಉಗ್ರ ದಾಳಿ ಆಪರೇಶನ್ ಸಿಂದೂರ್ ಮೂಲಕ ಪ್ರತೀಕಾರ ತೀರಿಸಿಕೊಳ್ಳುವಂತಾಯಿತು. ಇದೀಗ ಕಾಶ್ಮೀರದ ಕುಲ್ಗಾಂನಲ್ಲಿ ಅದೇ ರೀತಿ ಧರ್ಮ ಕೇಳಿ ಕಾರ್ಮಿಕರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದೆ.

ಕಾಶ್ಮೀರ (ಆ.01) ಪೆಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿ ವರ್ಷಗಳೇ ಉರುಳಿದರೂ ಭಾರತೀಯರು ಮರೆತಿಲ್ಲ. 26 ಅಮಾಯಕ ಪ್ರವಾಸಿಗರನ್ನು ಧರ್ಮದ ಆಧಾರದ ಮೇಲೆ ಹತ್ಯೆ ಮಾಡಲಾಗಿತ್ತು. ಹೆಸರು ಕೇಳಿ, ಕಲ್ಮಾ ಪಠಿಸಲು ಹೇಳಿ ಪರೀಕ್ಷಿಸಲಾಗಿತ್ತು. ಬಳಿಕ ಅನ್ಯ ಧರ್ಮ ಎಂದು ಗೊತ್ತಾಗುತ್ತಿದ್ದಂತೆ ಗುಂಡಿನ ಸುರಿಮಳೆಗೈಯಲಾಗಿತ್ತು. ಇದೇ ರೀತಿಯ ಇದೀಗ ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರ ದಾಳಿ ನಡೆದಿದೆ. ಕುಲ್ಗಾಂನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಮೇಲೆ ದಾಳಿ ಮಾಡಲಾಗಿದೆ. ಇಬ್ಬರು ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಪೆಹಲ್ಗಾಂ ದಾಳಿ ನೆನಪಿಸಿದ ಕುಲ್ಗಾಂ

ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಹಲವು ಫ್ಯಾಕ್ಟರಿಗಳಲ್ಲಿ ಇತರ ರಾಜ್ಯಗಳ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಕುಲ್ಗಾಂನಲ್ಲಿ ಶುಕ್ರವಾರ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಕಾರ್ಮಿಕರಲ್ಲಿ ಹೆಸರು ಹೇಳುವಂತೆ ಸೂಚಿಸಿದ್ದಾರೆ. ಇದರಂತೆ ಹೆಸರು ಹೇಳುತ್ತಿದ್ದಂತೆ ಈ ಕಾರ್ಮಿಕರ ಪೈಕಿ ಇಬ್ಬರು ಚತ್ತೀಸಘಡದಿಂದ ಬಂದ ಹಿಂದೂ ಕಾರ್ಮಿಕರಿದ್ದರು. ಇಬ್ಬರು ಹಿಂದೂ ಕಾರ್ಮಿಕರನ್ನು ಇತರ ಕಾರ್ಮಿಕರಿಂದ ಪ್ರತ್ಯೇಕಗೊಳಿಸಿ ಗುಂಡು ಹಾರಿಸಲಾಗಿದೆ. ಹಲವು ಕಾರ್ಮಿಕರ ಪೈಕಿ ಕೇವಲ ಇಬ್ಬರು ಮಾತ್ರ ಹಿಂದೂ ಕಾರ್ಮಿಕರಿದ್ದರು ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಕೆಲಸಕ್ಕಾಗಿ ಕಾಶ್ಮೀರದಲ್ಲಿ ನೆಲೆಸಿದ್ದ ಕಾರ್ಮಿಕರು

ಗಂಭೀರವಾಗಿ ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಈ ಪೈಕಿ ದೀಪಕ್ ರತ್ರೇ ಆಸ್ಪತ್ರೆ ದಾಖಲಿಸುವ ಮೊದಲೇ ಮೃತಪಟ್ಟಿದ್ದರು. ಮತ್ತೊರ್ವ ಕಾರ್ಮಿಕ ಬೋಪಿಂದರ್ ಇಂದು ಮೃತಪಟ್ಟಿದ್ದಾನೆ. ಇಬ್ಬರು 20 ರಿಂದ 23ರ ವಯಸ್ಸಿನ ಯುವಕರಾಗಿದ್ದಾರೆ. ಚತ್ತೀಸಘಡದಿಂದ ಕೆಲಸಕ್ಕಾಗಿ ಕಾಶ್ಮೀರದಲ್ಲಿ ನೆಲೆಸಿದ್ದರು. ಕಡು ಬಡತನದಲ್ಲಿ ಬಂದ ಇಬ್ಬರು ಹಿಂದೂ ಕಾರ್ಮಿಕರು ಸಾವಿನ ಸುದ್ದಿ ತಿಳಿದು ಪೋಷಕರು,ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಕುಲ್ಗಾಂ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇದು ಪೆಹಲ್ಗಾಂ ರೀತಿ ನಡೆದ ದಾಳಿಯಾಗಿದೆ. ಧರ್ಮದ ಆಧಾರದಲ್ಲಿ ಹತ್ಯೆ ಮಾಡಲಾಗಿದೆ. ಹಲವು ಕಾರ್ಮಿಕರು ಸ್ಥಳೀಯ ಕಾರ್ಮಿಕರಾಗಿದ್ದರು. ಹೀಗಾಗಿ ಇಬ್ಬರನ್ನು ಈ ಗುಂಪಿನಿಂದ ಪ್ರತ್ಯೇಕಗೊಳಿಸಿ ದಾಳಿಯಾಗಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಪೆಹಲ್ಗಾಂ ದಾಳಿ

2025ರಲ್ಲಿ ಶಾಂತವಾಗಿದ್ದ ಜಮ್ಮು ಮತ್ತು ಕಾಶ್ಮೀರದ ಮೇಲೆ ಭೀಕರ ಭಯೋತ್ಪಾದಕ ದಾಳಿಯಾಗಿತ್ತು. ಕಾಶ್ಮೀರದ ಅತ್ಯಂತ ಸುಂದರ ಪ್ರವಾಸಿ ತಾಣವಾಗಿರುವ ಪೆಹಲ್ಗಾಂ ಪ್ರವಾಸಿಗರಿಂದ ತುಂಬಿತ್ತು. ಎಪ್ರಿಲ್ ತಿಂಗಳ ಕಾರಣ ಶಾಲಾ ಕಾಲೇಜಿಗೆ ರಜೆ. ಈ ಸಮಯದಲ್ಲಿ ಪ್ರವಾಸಿ ತಾಣಗಳಿಗೆ ಕುಟುಂಬ ಸಮೇತ ಭೇಟಿ ನೀಡುವವರ ಸಂಖ್ಯೆ ಹೆಚ್ಚು. ಎಪ್ರಿಲ್ 22 ರಂದು ಪೆಹಲ್ಗಾಂನಲ್ಲಿ ಗುಂಡಿನ ಶಬ್ದ ಕೇಳಿಸಿದೆ. ಏಕಾಏಕಿ ನುಗ್ಗಿದ ಉಗ್ರರು, ಧರ್ಮ ಕೇಳಿ ಗುಂಡಿನ ದಾಳಿ ನಡೆಸಿದ್ದಾರೆ. ಹಿಂದೂ ಹೆಸರು ಹೇಳುತ್ತಿದ್ದಂತೆ ಗುಂಡಿನ ದಾಳಿಯಾಗಿದೆ. ಪತ್ನಿ, ಮಕ್ಕಳ ಎದುರಲ್ಲೇ ಪುರುಷರ ಮೇಲೆ ಗುಂಡಿನ ದಾಳಿ ಮಾಡಲಾಗಿತ್ತು. ಇನ್ನು ಮುಸ್ಲಿಂ ಹೆಸರು ಹೇಳುತ್ತಿದ್ದಂತೆ ಕಲ್ಮಾ ಪಠಿಸಲು ಹೇಳಿದ್ದಾರೆ. ಕಲ್ಮಾ ಪಠಿಸಿದವರನ್ನು ಬಿಡಲಾಗಿದೆ. ಈ ದಾಳಿಯಲ್ಲಿ 26 ಹಿಂದೂ ಪ್ರವಾಸಿಗರು ಹತ್ಯೆಯಾಗಿದ್ದರು.